ಉಡುಪಿ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯಾದ್ಯಂತ ನೀಡಿದ ಕರೆಯಂತೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕಾರ್ಮಿಕ ಸಂಬಂಧಗಳ ಸಂಹಿತೆಯ ಕರುಡು ನಿಯಮಗಳನ್ನು ಆಕ್ಷೇಪಿಸಿ, ಮಂಗಳವಾರ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ, ಬೀಡಿ ಮತ್ತು ತಂಬಾಕು ಕಾರ್ಮಿಕರ ಸಂಘ ಮತ್ತು ಸಾಮಾನ್ಯ ಕಾರ್ಮಿಕರ ಸಂಘಗಳು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು. ನಂತರ ಕಾರ್ಮಿಕ ಅಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಮತ್ತು ಕಾರ್ಮಿಕ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸಿತು. ಈ ಆಕ್ಷೇಪಣೆಯಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಬೇಕು, ಕಾರ್ಮಿಕರ ಅಧಿಕಾರಗಳನ್ನು ಮೊಟಕುಗೊಳಿಸುವ ಕೇಂದ್ರ ಸರಕಾರದ ಪ್ರಯತ್ನವನ್ನು ರಾಜ್ಯ ಸರ್ಕಾರ ವಿರೋಧಿಸಬೇಕು, ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಚಲಾಯಿಸಿ ಮೂಲ ಸಂಹಿತೆಗಳಿಗೆ ತಿದ್ದುಪಡಿಗಳನ್ನು ತಂದು ನಂತರ ನಿಯಮಾವಳಿ ರೂಪಿಸಬೇಕು, ಕರಡು ನಿಯಮಗಳನ್ನು ಕನ್ನಡದಲ್ಲಿ ಪ್ರಕಟಿಸಿ ನಂತರ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು. ರಾಜ್ಯ ಸರ್ಕಾರ ಕೂಡಲೇ ಕನಿಷ್ಠ ವೇತನ ಆಧಿಸೂಚನೆ ಹೋರಾಡಿಸಬೇಕು ಎಂದು ಆಗ್ರಹಿಸಲಾಗಿದೆ

ಈ ಪ್ರತಿಭಟನೆ ಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಉಡುಪಿ ಬೀಡಿ ಮತ್ತು ತಂಬಾಕು ಕಾರ್ಮಿಕರ ಸಂಘ ಅಧ್ಯಕ್ಷೆ ನಳಿನಿ ಎಸ್., ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುಭಾಸ್ ನಾಯಕ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ, ಉಪಾಧ್ಯಕ್ಷ ದಯಾನಂದ ಕೊಟ್ಯಾನ್, ಕೋಶಾಧಿಕಾರಿ ವಾಮನ ಬಂಗೇರ, ಮುಖಂಡರಾದ ವಸಂತಿ, ಸರೋಜಎಸ್., ದಯಾನಂದ ಅಮೀನ್, ರಾಮ ಕಾರ್ಕಡ, ನಾಗರಾಜ ಸಾಲಿಗ್ರಾಮ, ಮುರಳಿ, ರಮೇಶ್, ಶ್ರೀಧರ ಶೆಟ್ಟಿ, ಅಶೋಕ, ರಂಗನಾಥ, ಚಂದ್ರಯ್ಯ ಪೂಜಾರಿ, ಸಿಐಟಿಯು ಉಡುಪಿ ಮುಖಂಡರಾದ ಮೋಹನ್ ಉಪಸ್ಥಿತರಿದ್ದರು.