ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಆಧುನಿಕತೆಯ ಭರಾಟೆಯಲ್ಲಿ ಸಾರಿಗೆ ವ್ಯವಸ್ಥೆ ಅತ್ಯಾಧುನಿಕವಾಗಿ ಮುಂದುವರಿದು ಮೆಟ್ರೋ ಟ್ರೈನ್ ಗಳು ಬಂದಿವೆ. ಬುಲೆಟ್ ಟ್ರೈನ್ ಬರುತ್ತಿವೆ. ಆದರೆ ಗ್ರಾಮವೊಂದು ಇದುವರೆಗೂ ಸರ್ಕಾರಿ ಬಸ್ ನ ಮುಖ ನೋಡಿಲ್ಲ ಅಂದ್ರೆ ನೀವು ನಂಬಲೇಬೇಕು.ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಚಿಕ್ಕಯ್ಯನ ಪಾಳ್ಯ ಗ್ರಾಮಕ್ಕೆ ಮೊದಲ ಬಾರಿ ಬಸ್ ಬಂದಿದ್ದು ಗ್ರಾಮದಲ್ಲಿ ಇನ್ನಿಲ್ಲದ ಸಡಗರ ತರುವಂತೆ ಮಾಡಿದೆ, ಮೊದಲ ಬಾರಿ ಸರ್ಕಾರಿ ಬಸ್ ನೋಡಿದ ಗ್ರಾಮದ ಜನತೆ ಬಸ್ ಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.ಇನ್ನೂ ಬಸ್ ಬಂದ ಖುಷಿಯಲ್ಲಿ ಮಾತನಾಡಿದ ಗ್ರಾಮದ ಯುವಕ ರಾಜಶೇಖರ್ ಜೆ.ಆರ್ ರವರು ಗ್ರಾಮದಲ್ಲಿ ನಿತ್ಯ ಹತ್ತಾರು ಮಕ್ಕಳು ನಾಗವಲ್ಲಿ, ಹೆಬ್ಬೂರು, ತುಮಕೂರಿನ ಶಾಲಾ ಕಾಲೇಜಿಗೆ ಹೋಗುತ್ತಾರೆ. ಬಸ್ ಬಿಡಿಸುವಂತೆ ಸಾಕಷ್ಟು ಬಾರಿ ಶಾಸಕರಿಗೆ ಮನವಿ ಮಾಡಿದ್ದೆವು ನಮ್ಮ ಮನವಿಗೆ ಸ್ಪಂದಿಸಿ ಈಗ ಬಸ್ ಬಿಟ್ಟಿರುವುದಕ್ಕೆ ಸಾರಿಗೆ ಇಲಾಖೆಗೂ ಮತ್ತು ಸಚಿವರಿಗೂ ಧನ್ಯವಾದ ಹೇಳುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ನಾಗವಲ್ಲಿ ಮಾರ್ಗವಾಗಿ ಸಂಜೆ ವೇಳೆಯಲ್ಲಿ ಒಮ್ಮೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು. ದಿನನಿತ್ಯ ಬೆಳಗ್ಗೆ ತುಮಕೂರಿನಿಂದ ಹೊನ್ನುಡಿಕೆ ಮಾರ್ಗವಾಗಿ ಸಂಚರಿಸಿ ಚಿಕ್ಕಯ್ಯನ ಪಾಳ್ಳ ಗ್ರಾಮ ತಲುಪಿ, ನಾಗವಲ್ಲಿ ಮರ್ಗಮವಾಗಿ ತುಮಕೂರು ನಿಲ್ದಾಣ ತಲುಪುವುದು.