ಸಿಟಿ ರವಿ ಬಂಧನ ರಾಜಕೀಯ ದುರುದ್ದೇಶ

| Published : Dec 21 2024, 01:16 AM IST

ಸಾರಾಂಶ

ಸಿಟಿ ರವಿ ಅವರ ಬಂಧನ ರಾಜಕೀಯ ದುರುದ್ದೇಶ. ಉದ್ದೇಶ ಪೂರ್ವಕವಾಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜನರ ಗಮನ ಬೇರೆಡೆಗೆ ಸೆಳೆಯುವ ಷಡ್ಯಂತ್ರ: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಸಿಟಿ ರವಿ ಅವರ ಬಂಧನ ರಾಜಕೀಯ ದುರುದ್ದೇಶ. ಉದ್ದೇಶ ಪೂರ್ವಕವಾಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿಯವರು ಹಲವು ದಶಕಗಳಿಂದ ರಾಜಕಾರಣ ಮಾಡುತ್ತ ಬಂದಿದ್ದಾರೆ. ಅವರು ಎಂದೂ ಮಹಿಳೆಯರಿಗೆ ಅಗೌರವ ತೋರಿಲ್ಲ. ತೋರುವುದೂ ಇಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರ ಅವರ ಮೇಲೆ ಸುಳ್ಳು ಆರೋಪ ಹೊರಿಸಿದೆ. ತಮ್ಮೆಲ್ಲ ತಪ್ಪುಗಳನ್ನು ಮುಚ್ಚಿ ಹಾಕಲು ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಷಡ್ಯಂತ್ರವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಸದನದಲ್ಲಿ ನಡೆದ ಘಟನಾವಳಿಗಳನ್ನು ನೋಡಿದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮನ ಪಿಎ ಹಲ್ಲೆ ಮಾಡಲೆಂದೇ ಬಂದಿದ್ದಾರೆ ಎನ್ನಿಸುತ್ತದೆ. ಎಲ್ಲೋ ಒಂದು ಕಡೆ ಇದನ್ನು ರಾಜಕೀಯಗೊಳಿಸಲು ಹೊರಟಿದ್ದಾರೆ. ಲಕ್ಷಾಂತರ ಜನ ಮಹಿಳಾ ಕಾರ್ಯಕರ್ತೆಯರನ್ನು ಇಟ್ಟುಕೊಂಡಿರುವ ಪಕ್ಷ ನಮ್ಮದು. ಸಿಟಿ ರವಿ ಅವರು ಅಸಭ್ಯವಾಗಿ ನಡೆದುಕೊಳ್ಳುವ ಮನುಷ್ಯ ಅಲ್ಲ. ಕಾಂಗ್ರೆಸ್ ಹೊಸ ಸಂಪ್ರಾದಾಯವನ್ನು ಬಿತ್ತುವಂತಹ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.ಸದನದ ಒಳಗಡೆ ನಿರ್ಣಯ ಆಗಬೇಕಿರುವ ವಿಷಯವನ್ನು ರಸ್ತೆಗೆ ತಂದಿದ್ದಾರೆ. ಇದು ಸರಿಯಲ್ಲ. ಸಾಮಾನ್ಯ ವ್ಯಕ್ತಿಗೂ ಈ ರೀತಿ ನಡೆಸಿಕೊಳ್ಳುವುದಿಲ್ಲ. ಮೂರು ಮೂರು ಸ್ಟೇಶನ್ ಗೆ ಅವರನ್ನು ಅಲೆದಾಡಿಸಿದ್ದಾರೆ. ಸುವರ್ಣ ಸೌಧದ ಒಳಗಡೆ ಬಂದು ಈ ರೀತಿಯ ಆಟ ಆಡುತ್ತಾರೆ ಎಂದರೆ ಪೊಲೀಸರು ಏನು ಮಾಡುತ್ತಿದ್ದಾರೆ. ಇದು ಸರ್ಕಾರದ ವಿಫಲತೆ. ಸರ್ಕಾರದ ಕುಮ್ಮಕ್ಕು ಇದಕ್ಕಿದೆ. ರಕ್ಷಣಾ ವ್ಯವಸ್ಥೆ ಕುಸಿದು ಬಿದ್ದಿದೆ. ಈ ಸರ್ಕಾರ ಸತ್ತುಹೋಗಿದೆ ಎಂದು ಕಿಡಿಕಾರಿದರು.ಚುನಾವಣಾ ಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವಾಗಿದೆ. ಸಿ.ಟಿ ರವಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಿಟಿ ಅವರ ಮೇಲೆ ಕರ್ನಾಟಕ ಜನತೆಯ ಆಶೀರ್ವಾದ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪುತ್ರ ಯತೀಂದ್ರವರು ಸಿ.ಟಿ. ರವಿ ಮೇಲೆ ಆರೋಪ ಮಾಡಿರುವುದು ಶುದ್ಧ ಸುಳ್ಳು. ಚುನಾಯಿತ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದೆ ಗೂಂಡಾಗಳನ್ನು ಒಳಗೆ ಬಿಟ್ಟು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಗೂಂಡಾಗಳು ದಾದಾ ಗಿರಿ ಮಾಡುತ್ತಿದ್ದಾರೆ ಎಂದು ದೂರಿದರು.