ಧರ್ಮೋ ರಕ್ಷತಿ ರಕ್ಷಿತಃ ಎಂಬುದು ಕೇವಲ ಮಾತಲ್ಲ, ಬದುಕಿನ ಅನುಭವ. ಧರ್ಮವೇ ಸಮಸ್ತ ದುಃಖಗಳ ಶಮನೌಷಧ. ಧರ್ಮಾಮೃತವನ್ನು ಪಾನ ಮಾಡಿದವರು ಮಾತ್ರ ನಿಜವಾದ ಸುಖಿಗಳು.

ಗದಗ: ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ ಎಂದು ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ನಗರದ ಮಾಂಗಲ್ಯ ಮಂದಿರದಲ್ಲಿ ಗದಗ- ಬೆಟಗೇರಿ ಪಂಚಾಚಾರ್ಯ ಸೇವಾ ಸಂಘ ಆಷಾಢ ಮಾಸದ ಪ್ರಯುಕ್ತ ಕಾಶಿ ನೂತನ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆಯ ನೇತೃತ್ವ ವಹಿಸಿ ಮಾತನಾಡಿದರು.

ಧರ್ಮೋ ರಕ್ಷತಿ ರಕ್ಷಿತಃ ಎಂಬುದು ಕೇವಲ ಮಾತಲ್ಲ, ಬದುಕಿನ ಅನುಭವ. ಧರ್ಮವೇ ಸಮಸ್ತ ದುಃಖಗಳ ಶಮನೌಷಧ. ಧರ್ಮಾಮೃತವನ್ನು ಪಾನ ಮಾಡಿದವರು ಮಾತ್ರ ನಿಜವಾದ ಸುಖಿಗಳು. ಕೈಗಳಿಗೆ ಬಂಗಾರದ ಬಳೆ, ಉಂಗುರ ಭೂಷಣವಲ್ಲ, ದಾನವೇ ಭೂಷಣ. ಕಂಠಕ್ಕೆ ಸತ್ಯವೇ ಭೂಷಣ, ಕಿವಿಗಳಿಗೆ ಶಾಸ್ತ್ರ ಶ್ರವಣವೇ ಭೂಷಣ. ಇವುಗಳಿಲ್ಲದೆ ಧರಿಸುವ ಯಾವ ಆಭರಣವೂ ವ್ಯರ್ಥ ಎಂದರು.

ದಾನವೀರ ಕರ್ಣನು ಅಂತ್ಯಕಾಲದಲ್ಲಿಯೂ ತನ್ನ ಬಾಯಲ್ಲಿದ್ದ ಬಂಗಾರದ ಹಲ್ಲನ್ನೇ ದಾನ ಮಾಡಿದನು. ಕೊಡುವ ಮನಸ್ಸು ಮನುಷ್ಯನನ್ನು ಮಹಾನ್ ವ್ಯಕ್ತಿಯನ್ನಾಗಿಸುತ್ತದೆ ಎಂದರು.

ಸಮಾರಂಭದಲ್ಲಿ ಆರ್.ಕೆ. ಮಠದ, ಮುರುಗೇಶ ವಸ್ತ್ರದ, ಲಿಂಗರಾಜ ಶಿಗ್ಲಿಮಠ, ಜೆ.ಎ. ಹುಬಳಿಮಠ, ವಿಜಯ ಹುಬಳಿಮಠ, ಎಸ್.ಐ. ಯಾಳಗಿ, ಎಲ್.ಎಸ್. ಬೆಳವಟಗಿ, ಶಕುಂತಲಾ ಕಣವಿ, ಸಿದ್ದಣ್ಣ ಜವಳಿ, ಬಸವರಾಜ ಗಣಾಚಾರಿ, ಚಂದ್ರಕಾಂತ ಸವದತ್ತಿ, ಸಿ.ಕೆ. ಮಾಳಶೆಟ್ಟಿ, ಮೋಹನ ಹೊನ್ನಗುಡಿ, ಡಾ. ಉಮೇಶ ಹಾದಿ, ಗುರುಸ್ವಾಮಿಮಠ, ಗೂಳಯ್ಯ ಮಾಲಗಿತ್ತಿಮಠ, ಪ್ರಭುರಾಜ ದೇಸಾಯಿ, ಅನ್ನಪೂರ್ಣ ಮಾಳೆಕೊಪ್ಪಮಠ ಅವರನ್ನು ಕಾಶಿ ಜಗದ್ಗುರುಗಳು ಸನ್ಮಾನಿಸಿದರು.

ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮ್ಮ ಗುರುಸ್ವಾಮಿಮಠ ಸಂಗಡಿಗರು ಪ್ರಾರ್ಥಿಸಿದರು. ಸುರೇಶ ಅಬ್ಬಿಗೇರಿ ಸ್ವಾಗತಿಸಿದರು. ಗುರುಸಿದ್ಧಯ್ಯ ಹಿರೇಮಠ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಪಂಚಾಚಾರ್ಯ ಮಾಂಗಲ್ಯ ಮಂದಿರದ ಟ್ರಸ್ಟಿಗಳು, ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ವಟುಗಳು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.