ಪ್ರಸ್ತುತ ಮಾನವನಲ್ಲಿರುವ ಸರಿಸುಮಾರು ಶೇ. 60ಕ್ಕಿಂತ ಹೆಚ್ಚು ಸಾಂಕ್ರಾಮಿಕ ರೋಗಗಳು ಪ್ರಾಣಿ ಮೂಲದ್ದಾಗಿರುತ್ತದೆ. ರೇಬಿಸ್, ಡೆಂಘೀ, ಮಂಗನ ಕಾಯಿಲೆ ಮತ್ತು ಕೊವಿಡ್-19 ಮುಂತಾದವುಗಳು ಪ್ರಮುಖ ಝೂನೋಟಿಕ್ ಕಾಯಿಲೆಗಳಾಗಿವೆ.
ಧಾರವಾಡ:
ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಮುಂಜಾಗೃತಾ ಕ್ರಮಕೈಗೊಳ್ಳುವ ಉದ್ದೇಶದಿಂದ ವಿಶ್ವ ಝೂನೋಸಿಸ್ ದಿನ ಆಚರಿಸಲಾಗುತ್ತದೆ. ಈ ವರ್ಷ ಒಂದು ಜಗತ್ತು, ಒಂದು ಆರೋಗ್ಯ ಝೂನೋಸಿಸ್ ತಡೆಗಟ್ಟುವಿಕೆ ಧ್ಯೇಯವಾಕ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ ಹೇಳಿದರು.ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿದ ಅವರು, ಫ್ರೆಂಚ್ ಜೀವ ವಿಜ್ಞಾನಿ ಲ್ಯೂಯಿ ಪಾಶ್ಚರ್ ಅವರು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೇಬಿಸ್ ಕಾಯಿಲೆಗೆ ಮೊಟ್ಟಮೊದಲ ಬಾರಿಗೆ ಯಶಸ್ವಿ ಲಸಿಕೆಯನ್ನು 1885ರ ಜು. 6ರಂದು ಕಂಡು ಹಿಡಿದರು. ಅವರ ಈ ಐತಿಹಾಸಿಕ ಸಾಧನೆಯ ನೆನಪಿಗಾಗಿ ಈ ದಿನ ಆಚರಿಸಲಾಗುತ್ತಿದೆ ಎಂದರು.
ಪ್ರಸ್ತುತ ಮಾನವನಲ್ಲಿರುವ ಸರಿಸುಮಾರು ಶೇ. 60ಕ್ಕಿಂತ ಹೆಚ್ಚು ಸಾಂಕ್ರಾಮಿಕ ರೋಗಗಳು ಪ್ರಾಣಿ ಮೂಲದ್ದಾಗಿರುತ್ತದೆ. ರೇಬಿಸ್, ಡೆಂಘೀ, ಮಂಗನ ಕಾಯಿಲೆ ಮತ್ತು ಕೊವಿಡ್-19 ಮುಂತಾದವುಗಳು ಪ್ರಮುಖ ಝೂನೋಟಿಕ್ ಕಾಯಿಲೆಗಳಾಗಿವೆ. ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯವು ಒಂದಕ್ಕೊಂದು ಅವಲಂಬಿತವಾಗಿವೆ. ಆದ್ದರಿಂದ, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ವಿನಂತಿಸಿದರು.ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ. ಮಹೇಶ ಎನ್. ಚಿತ್ತರಗಿ ಮಾತನಾಡಿ, ಸಾಕು ಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದರಿಂದ ಈ ರೋಗ ತಡೆಗಟ್ಟಬಹುದು ಎಂದರು.
ಡಾ. ರಾಕೇಶ ನಾಯಕ, ಡಾ. ಸಂತೊಷ ಸಜ್ಜನ ಉಪನ್ಯಾಸ ನೀಡಿದರು. ಡಾ. ಮಂಜುನಾಥ ಎಸ್, ಡಾ. ಗೌರಿ ಬೆಲ್ಲದ, ಡಾ. ತನುಜಾ ಕೆ.ಎನ್, ಡಾ. ಎಸ್.ವಿ. ಸಂತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಆರ್. ಪಾತ್ರೋಟ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುಧಾ ತಿವಾರಿ, ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಂ.ಎನ್. ಅಗಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ-ವಂದಿಸಿದರು.