ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ಆಸ್ಪತ್ರೆಯಲ್ಲಿ ಪೌರಕಾರ್ಮಿಕ ಮಹಿಳೆಯಾದ ಮಂಜಮ್ಮ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಂಜಮ್ಮ ಪಿತ್ತಕೋಶದಲ್ಲಿ ಕಲ್ಲು ಇದ್ದ ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬಳಲುತ್ತಿದ್ದರು.ಶಸ್ತ್ರಚಿಕಿತ್ಸೆ ನಂತರ ಮತ್ತೆ ಹೊಟ್ಟೆ ನೋವಿನ ಪರಿಣಾಮವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸ್ಟ್ರೋಕ್ ಕೂಡ ಆಗಿದ್ದು ಬಹಳ ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ, ತೀವ್ರ ಆರ್ಥಿಕ ಸಂಕಷ್ಟದಿಂದ ಸದ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಗೆ ಒಬ್ಬ ಮಗ ಹಾಗೂ ಮಗಳು ಇದ್ದು, ಮಗಳಿಗೆ ಮದುವೆಯಾಗಿದ್ದರೆ ಮಗ ತನ್ನ ಕೆಲಸದ ಜೊತೆ ತಾಯಿಯನ್ನು ನೋಡಿಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಎರಡು ತಿಂಗಳಾದರೂ ಹಾಸನ ನಗರ ಪಾಲಿಕೆಯ ಅಧಿಕಾರಿಗಳಾಗಿರಲಿ, ಆಯುಕ್ತರಾಗಿರಲಿ, ಆರೋಗ್ಯ ನಿರೀಕ್ಷಕರಾಗಿರಲಿ ಇತ್ತ ಸುಳಿಯದೆ ಇರುವುದು ದುರಂತದ ಸಂಗತಿಯಾಗಿದೆ.
ಮಂಜಮ್ಮ ರವರ ಮೇಸ್ತ್ರಿಗಳು ಅಥವಾ ಆರೋಗ್ಯ ನಿರೀಕ್ಷಕರು ಇಂತಹ ಸಂದರ್ಭದಲ್ಲಿ ಇವರ ಜೊತೆಗಿದ್ದು, ಇವರ ಆರೋಗ್ಯ ಮತ್ತು ಕುಟುಂಬದ ಸಮಸ್ಯೆಗಳಲ್ಲಿ ಭಾಗಿಯಾಗಬೇಕಿತ್ತು, ಆದರೆ ಒಬ್ಬಂಟಿಯಾಗಿ ಮಗ ಮಂಜುನಾಥ್ ಸಮಸ್ಯೆಗಳನ್ನು ಎದುರಿಸಿ ನಿಂತಿದ್ದಾರೆ. ಈಗಾಗಲೇ ಎರಡರಿಂದ ಮೂರು ಲಕ್ಷ ಶಸ್ತ್ರಚಿಕಿತ್ಸೆಗೆ ಸಾಲ ಆಗಿದ್ದು, ಅದನ್ನೂ ಕೂಡ ಭರಿಸಲಾಗದೇ ಸಮಸ್ಯೆಯಲ್ಲಿದ್ದಾರೆ.ಇತ್ತ ಅಮ್ಮನನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಮಂಜುನಾಥ್ ರವರದ್ದು, ಇನ್ನೊಂದು ಕಡೆ ಮಂಜುನಾಥ್ ರವರು ಕೂಡ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯವಿದ್ದು ಇವರೂ ಕೂಡ ಪೌರಕಾರ್ಮಿಕರಾಗಿದ್ದಾರೆ, ಇಂತಹ ತುರ್ತು ಸಂದರ್ಭದಲ್ಲಿ ಆಡಳಿತವು ಅವರ ಜೊತೆಗೆ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು, ಜಿಲ್ಲಾಡಳಿತ ಇವರ ಬಗ್ಗೆ ಗಮನಹರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅವರ ಜೊತೆ ನಿಲ್ಲಬೇಕಾಗಿದೆ ಎಂದು ಕೋರಿದ್ದಾರೆ.