- ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಕ್ರಮವಹಿಸಿ: ಡಿಸಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ಆಗಸ್ಟ್ 2ರಂದು ಬೆಳಗ್ಗೆ 10.30 ರಿಂದ 12.00 ಗಂಟೆಯವರಿಗೆ ನಗರದ ವಿವಿಧ 19 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಪ್ರಕ್ರಿಯೆ ಅತ್ಯಂತ ಪಾರದರ್ಶಕ ಮತ್ತು ಶಿಸ್ತುಬದ್ಧವಾಗಿ ನಡೆಸಲು ನಿಯೋಜಿತ ಪರೀಕ್ಷಾ ವೀಕ್ಷಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ನೀಡಿದರು.
ಗುರುವಾರ ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರೀಕ್ಷಾ ಕೇಂದ್ರಗಳಿಗೆ ಶಿವದಾರ, ಜನಿವಾರ, ಉಡುದಾರ, ಮಾಂಗಲ್ಯ ಮೂಗುತಿ ಮತ್ತು ವಿಭೂತಿಗೆ ಅವಕಾಶವಿದೆ. ನಿಯೋಜಿತ ಅಧಿಕಾರಿ/ಸಿಬ್ಬಂದಿ ಡ್ರೆಸ್ ಕೋಡ್ ಅಧಿಕಾರಿಗಳು, ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ನಿಗದಿತ ಪರೀಕ್ಷಾ ಕೊಠಡಿಗೆ ತೆರಳಿ ವರದಿ ಮಾಡಿಕೊಳ್ಳಬೇಕು. ಪ್ರಾಧಿಕಾರವು ನೀಡಿರುವ ಉಡುಪಿನ ಸಂಹಿತೆ ಮತ್ತು ನಿರ್ದೇಶನಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುವುದು. ಸಿಬ್ಬಂದಿ ಪ್ರಾಧಿಕಾರದ ನಿರ್ದೇಶನದಂತೆ ಅಭ್ಯರ್ಥಿಗಳ ಫ್ರಿಸ್ಕಿಂಗ್ (ಅಂಗಶೋಧನೆ) ಪ್ರಕ್ರಿಯೆಯನ್ನು ಸರಿಯಾಗಿ ನಡೆಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಪ್ರಾಧಿಕಾರದಿಂದ ''''''''ಫೇಶಿಯಲ್ ರೆಕಗ್ನಿಷನ್'''''''' ಸಂಬಂಧ ನಿಯೋಜಿತ ನೊಡಲ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವೈಖರಿ ಮೇಲ್ವಿಚಾರಣೆ ಮಾಡುವುದು. ಕೊಠಡಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಇತರ ಸಂಪರ್ಕ ಸಾಧನಗಳು ಸರಿಯಾಗಿವೆಯೇ ಎಂಬುದನ್ನು ತಪಾಸಿಸಬೇಕು. ಪರೀಕ್ಷಾ ಸಿಬ್ಬಂದಿ, ತಪಾಸಣಾ ತಂಡಗಳು, ಸ್ವಚ್ಛತಾ ಸಿಬ್ಬಂದಿ ಹಾಗೂ ಸಿಬ್ಬಂದಿ ಸೇರಿದಂತೆ ಯಾರೂ ಪರೀಕ್ಷಾ ಕೇಂದ್ರ ಅಥವಾ ನಿಷೇಧಿತ ಪ್ರದೇಶಗಳಿಗೆ ಯಾವುದೇ ಅನಗತ್ಯ ಅಥವಾ ತಾಂತ್ರಿಕ ಸಾಧನಗಳನ್ನು ತೆಗೆದುಕೊಂಡು ಹೋಗದಂತೆ ಕಟ್ಟುನಿಟ್ಟಾಗಿ ತಡೆಯಬೇಕು.
ಯಾವುದೇ ರೀತಿಯ ಭದ್ರತಾ ಲೋಪ ಅಥವಾ ಕಾರ್ಯವಿಧಾನದಲ್ಲಿ ಉಲ್ಲಂಘನೆಗಳು ಕಂಡುಬಂದಲ್ಲಿ ತಕ್ಷಣವೇ ಅದನ್ನು ತಡೆದು, ಈ ಕುರಿತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಕ್ಷಣ ವರದಿ ಮಾಡಬೇಕು, ಪರೀಕ್ಷಾರ್ಥಿಗಳಿಗೆ ಅನುಕೂಲ ಆಗುವಂತೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸರಿಯಾದ ಬೆಳಕು ಹಾಗೂ ತರಗತಿಗಳಲ್ಲಿ ಗಡಿಯಾರ ಸೇರಿ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸೂಚನೆ ನೀಡಿದರು.
200 ಮೀಟರ್ ನಿಷೇಧಿತ ಪ್ರದೇಶ:ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಕಲಂ 163ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪರೀಕ್ಷಾ ದಿನದಂದು ದಾವಣಗೆರೆ ನಗರದ ನಿಗದಿತ 19 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ಸಾರ್ವಜನಿಕ ಪ್ರವೇಶಕ್ಕೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಎಲ್ಲ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಕಡ್ಡಾಯವಾಗಿ ಮುಚ್ಚತಕ್ಕದ್ದು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಲೂ ಸೂಕ್ತ ಭದ್ರತೆ ಒದಗಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಶರಣಬಸವೇಶ್ವರ, ಡಿಡಿಪಿಯು ಪಳನಿಸ್ವಾಮಿ ಹಾಗೂ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.- - -
(ಬಾಕ್ಸ್-1)* 19 ಪರೀಕ್ಷಾ ಕೇಂದ್ರಗಳ ವಿವರ: ಅಥಣಿ ಕಾಂಪೋಸಿಟ್ ಪದವಿ ಪೂರ್ವ ಕಾಲೇಜು, ಎಸ್.ಎಸ್. ಲೇಔಟ್, ದಾವಣಗೆರೆ, ಎಸ್.ಬಿ.ಸಿ. ಪ್ರಥಮ ದರ್ಜೆ ಕಾಲೇಜು, ಎಸ್.ಎಸ್.ಲೇಔಟ್, ದಾವಣಗೆರೆ, ಬಿ.ಎಸ್.ಸಿ. ಪ್ರಥಮ ದರ್ಜೆ ಕಾಲೇಜು, ಎಸ್.ಎಸ್. ಲೇಔಟ್, ದಾವಣಗೆರೆ, ಎಸ್.ಎಲ್. ಪದವಿ ಪೂರ್ವ ಕಾಲೇಜು, ನಿಜಲಿಂಗಪ್ಪ ಲೇಔಟ್, ದಾವಣಗೆರೆ, ಡಾ. ಎಸ್.ಎಸ್. ಪದವಿ ಪೂರ್ವ ಕಾಲೇಜು, ಎಸ್.ಎಸ್. ಲೇಔಟ್, ದಾವಣಗೆರೆ, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್ ಅಂಡ್ ಟೆಕ್ನಾಲಜಿ, ದಾವಣಗೆರೆ, ಎ.ವಿ.ಕೆ. ಮಹಿಳಾ ಪದವಿ ಪೂರ್ವ ಕಾಲೇಜು, ಪಿ.ಜೆ. ಬಡಾವಣೆ, ದಾವಣಗೆರೆ, ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪಿ.ಜೆ. ಬಡಾವಣೆ, ದಾವಣಗೆರೆ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಹೈಸ್ಕೂಲ್ ಮೈದಾನ), ಪಿ.ಜೆ. ಬಡಾವಣೆ, ದಾವಣಗೆರೆ, ಡಿ.ಆರ್.ಎಮ್. ಸೈನ್ಸ್ ಪದವಿ ಪೂರ್ವ ಕಾಲೇಜು, ಪಿ.ಜೆ. ಬಡಾವಣೆ, ದಾವಣಗೆರೆ, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಪಿ.ಜೆ.ಬಡಾವಣೆ, ದಾವಣಗೆರೆ, ಎ.ಆರ್.ಜಿ. ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು, ಪಿ.ಜೆ. ಬಡಾವಣೆ, ದಾವಣಗೆರೆ, ಶ್ರೀ ತರಳುಬಾಳು ಪದವಿ ಪೂರ್ವ ಕಾಲೇಜು, ಹಡದಿ ರಸ್ತೆ, ದಾವಣಗೆರೆ, ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು, ಸಿದ್ಧಲಿಂಗೇಶ್ವರ ನಗರ, ದಾವಣಗೆರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಡೆಂಟಲ್ ಕಾಲೇಜು ರಸ್ತೆ, ದಾವಣಗೆರೆ , ಎಸ್.ಎ.ಜಿ.ಬಿ. ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು, ಪಿ.ಜೆ. ಬಡಾವಣೆ, ದಾವಣಗೆರೆ, ಸೆಂಟ್ ಪಾಲ್ಸ್ ಪದವಿ ಪೂರ್ವ ಕಾಲೇಜು, ಪಿ.ಜೆ. ಬಡಾವಣೆ, ದಾವಣಗೆರೆ, ಮಗನೂರು ಬಸಪ್ಪ ಪದವಿ ಪೂರ್ವ ಕಾಲೇಜು, ವಿದ್ಯಾನಗರ, ದಾವಣಗೆರೆ, ಸೆಂಟ್ ಜಾನ್ಸ್ ಪದವಿ ಪೂರ್ವ ಕಾಲೇಜು, ಶಿವಕುಮಾರ ಸ್ವಾಮಿ ಲೇಔಟ್, ದಾವಣಗೆರೆ.
- - -(ಬಾಕ್ಸ್-2) ಒಟ್ಟು 11033 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದು, ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ, ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮ ನಡೆಯದಂತೆ ಕ್ರಮವಹಿಸಲು ಬೀಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಅಕ್ರಮ ನಡೆಯುವುದು ಕಂಡು ಬಂದರೆ, ಅಂತವರ ವಿರುದ್ಧ ₹15 ಲಕ್ಷದಿಂದ ₹1 ಕೋಟಿ ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. - ಎಚ್.ಟಿ.ಶೇಖರ್, ಜಿಲ್ಲಾ ಎಸ್ಪಿ, ದಾವಣಗೆರೆ.
- - --30ಕೆಡಿವಿಜಿ34:
ದಾವಣಗೆರೆಯಲಿ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.