ಸಂಪುಟ ವಿಸ್ತರಣೆ ಸಂಬಂಧ ಹತ್ತಾರು ಬಾರಿ ದೆಹಲಿಗೆ ಹೋದ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಾವೇರಿ ವಿಚಾರವಾಗಿ ಹಿರಿಯ ನ್ಯಾಯವಾದಿಗಳನ್ನು ಕಂಡು ಅವರೊಂದಿಗೆ ಚರ್ಚೆ ನಡೆಸಲು ಸಮಯವೇ ಸಿಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಸಂಪುಟ ವಿಸ್ತರಣೆ ಸಂಬಂಧ ಹತ್ತಾರು ಬಾರಿ ದೆಹಲಿಗೆ ಹೋದ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಾವೇರಿ ವಿಚಾರವಾಗಿ ಹಿರಿಯ ನ್ಯಾಯವಾದಿಗಳನ್ನು ಕಂಡು ಅವರೊಂದಿಗೆ ಚರ್ಚೆ ನಡೆಸಲು ಸಮಯವೇ ಸಿಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಇರಕಸಂದ್ರ ಕಾಲೋನಿ, ತಣ್ಣೇನಹಳ್ಳಿ, ಜೋನಿಗರಹಳ್ಳಿ, ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಮುಸುಕಿನ ಜೋಳ, ರಾಗಿ ಮತ್ತು ಶೇಂಗಾ ಬೆಳೆಗಳ ಬರ ಅಧ್ಯಯನ ನಡೆಸಿ ಮಾತನಾಡಿದ ಅವರು, ಕಾವೇರಿ ಕೊಳದ ರೈತರು ಮೊದಲ ಬೆಳೆಗೆ ನೀರು ಇಲ್ಲದೆ ಪರದಾಡುತ್ತಿದ್ದಾರೆ. ಇತ್ತ ತಮಿಳುನಾಡು ನೀರಿಗಾಗಿ ಬೆನ್ನು ಹತ್ತಿದೆ. ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸಹ ರಾಜ್ಯ ಸರ್ಕಾರ ಕಾನೂನು ತಜ್ಞರ ತಂಡದ ಜೊತೆ ಮಾತನಾಡದೆರಿರುವುದು ವಿಪರ್ಯಾಸ ಎಂದರು.
ಕಲ್ಪತರು ಜಿಲ್ಲೆಯಲ್ಲಿ ಶೇಂಗಾ ಮತ್ತು ಮುಸುಕಿನ ಜೋಳದ ಬಿತ್ತನೆಯ ಅವಧಿ ಮುಗಿದಿದೆ. ಬಿತ್ತನೆ ಮಾಡಿರುವ ರಾಗಿ ಬೆಳೆ ಮಳೆಯಿಲ್ಲದೇ ನೆಲಕಚ್ಚಿದೆ. ವಿಮೆಯ ಹಣ ಕಟ್ಟೋದಿಕ್ಕೂ ಜಿಲ್ಲೆಯ ರೈತರ ಬಳಿ ಹಣವಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ಬರಗಾಲ ಘೋಷಣೆ ಮಾಡಿ ರೈತರ ನೇರವಿಗೆ ದಾವಿಸಬೇಕಿದೆ. ಬಿಜೆಪಿ ನೇತೃತ್ವದ ೭ತಂಡಗಳಾಗಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಬೆಳೆ ವಿಮೆಯ ಕಂತಿಗೆ ಸರ್ಕಾರವೇ ೫೦ಲಕ್ಷ ಬಿಡುಗಡೆ ಮಾಡಿ ಕುಡಿಯುವ ನೀರು ಮತ್ತು ಜಾನುವಾರು ಮೇವಿಗೆ ಆದ್ಯತೆ ನೀಡಬೇಕಿದೆ.೧೦ವರ್ಷದ ನಂತರ ಕಲ್ಪತರು ಜಿಲ್ಲೆಗೆ ೮೦ ದಿನಗಳ ಮುಂಗಾರು ಮಳೆ ಕೈಕೊಟ್ಟಿದೆ. ಉಳುಮೆ ಮಾಡಿದ ಭೂಮಿ ಬರಡಾಗಿ ಬಿತ್ತನೆ ಬೀಜಗಳು ಮನೆಯಲ್ಲಿ ಶೇಖರಣೆ ಆಗಿವೆ. ಬಿತ್ತನೆ ಮಾಡಿರುವ ಬೆಳೆಗಳು ಮೊಳಕೆ ಒಡೆಯದೆ ನೆಲಕಚ್ಚಿದೆ. ಪ್ರತಿ ಎಕರೆಗೆ ೪೦ಸಾವಿರ ರು. ನಷ್ಟವಾಗಿ ರೈತರು ಕಂಗಲಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಆಗಮಿಸಬೇಕಿದೆ ಎಂದು ಸ್ಥಳೀಯ ರೈತರ ಒತ್ತಾಯ ಮಾಡಿದ್ದಾರೆ ಎಂದರು.
ಈ ವೇಳೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶ್ಗೌಡ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ಕುಮಾರ್, ಮಧುಗಿರಿ ಜಿಲ್ಲಾಧ್ಯಕ್ಷ ಚಿದಾನಂದಗೌಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ..ದರ್ಶನ್ ಕೆ.ಎಲ್, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಗೋವಿಂದರೆಡ್ಡಿ, ದಾಸರಹಳ್ಳಿ ಚೇತನ್, ಮಹಿಳಾಧ್ಯಕ್ಷೆ ಕಾತ್ಯಾಯಿನಿ, ಕಾರ್ಯದರ್ಶಿ ರೂಪಶ್ರೀ ಮುಖಂಡರಾದ ಲಕ್ಷ್ಮೀಶ್, ಮಂಜುನಾಥ, ನಟರಾಜು, ಮಹೇಶ್ ಸೇರಿದಂತೆ ಇತರರು ಇದ್ದರು.