ಸಾರಾಂಶ
ರಾಯಚೂರು : ಹುಲಿಯಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಕಾಂಗ್ರೆಸ್ ನಲ್ಲಿ ಇಲಿಯಂತಾಗಿದ್ದಾರೆ. ಅವರ ಪರಿಸ್ಥಿತಿ ಕಂಡರೆ ಅಯ್ಯೋ ಎನಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಲೇವಡಿ ಮಾಡಿದರು.
ಸೋಮವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿಂದೆ ಎಲ್ಲ ಸಮುದಾಯಗಳ ಪರ ಕಾಳಜಿ, ಯಾವುದೇ ಜಾತಿ, ಧರ್ಮದ ಪರವಾಗಿ ನಿಲ್ಲದೇ ಸರ್ವ ಜನಾಂಗದ ಅಭಿವೃದ್ಧಿಯ ವಿಚಾರವನ್ನು ಹೊಂದಿದವರು ಇಂದು ಒಂದು ಧರ್ಮದವರ ಪರ ನಿಂತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಕಣ್ಣೀರೊರೆಸುವ ತಂತ್ರ: ರಾಜ್ಯದಲ್ಲಿ ಉಂಟಾಗಿರುವ ವಕ್ಫ್ ಗೊಂದಲ ನಿವಾರಿಸಲು ಸಿಎಂ ಪತ್ರ ಬರೆದಿರುವುದು ಬರೀ ಕಣ್ಣೊರೆಸುವ ತಂತ್ರವಾಗಿದೆ. ಈಗಾಗಲೇ ಕಂದಾಯ ದಾಖಲೆ ಗಳಲ್ಲಿ ವಕ್ಫ್ ಎಂದು ನಮೂದಿಸಿಲಾಗಿದೆ. ಸಿಎಂ ಆದೇಶ ತಾತ್ಕಾಲಿಕವಷ್ಟೇ, ಶಾಶ್ವತ ಪರಿಹಾರವಲ್ಲ. ಕೇಂದ್ರ ಸರ್ಕಾರ ವಕ್ಫ ಕಾಯ್ದೆಯ ಕುರಿತಂತೆ ಸಮಿತಿ ಯನ್ನು ರಚಿಸಿದೆ. ಸಮಿತಿಗಳು ಮಾಹಿತಿಯನ್ನು ನೀಡಲಾಗಿದೆ ಎಂದರು.
ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವದರಲ್ಲಿ ಅನುಮಾನವಿಲ್ಲ. ಪಕ್ಷದ ಮುಖಂಡರುಗಳು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿರುವುದಾಗಿ ಹೇಳಿದರು. ಈ ವೇಳೆ ಮಾಜಿ ಸಂಸದ ಬಿ.ವಿ.ನಾಯಕ ಸೇರಿ ಪಕ್ಷದ ಮುಖಂಡರು,ಕಾರ್ಯಕರ್ತರು ಸೇರಿ ಇತರರು ಇದ್ದರು.
ವಿಜಯೇಂದ್ರ ನಾಯಕತ್ವ ಒಪ್ಪಲ್ಲ: ಜಾರಕಿಹೊಳಿಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವವನ್ನು ನಾವು ಒಪ್ಪುವುದಿಲ್ಲ. ಈ ಕುರಿತು ಪಕ್ಷದ ವರಿಷ್ಠರಿಗೂ ಸ್ಪಷ್ಟಪಡಿಸಲಾಗಿದ್ದು, ಅವರ ಆಯ್ಕೆ ಹೈಕಮಾಂಡ್ ತೀರ್ಮಾನವಾಗಿದೆ. ವಿಜಯೇಂದ್ರ ಇರುವ ಕಡೆ ನಾವು ಹೋಗುವುದಿಲ್ಲ. ಡಿಸೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ನಿರೀಕ್ಷೆಯನ್ನು ಹೊಂದಿರುವುದಾಗಿ ತಿಳಿಸಿದರು.
ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ ರಾಜ್ಯದಲ್ಲಿ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು 130 ಕಡೆ ಗೆಲ್ಲಿಸುವ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸವನ್ನಿಟ್ಟುಕೊಂಡು ನಾನು, ಬಸನಗೌಡ ಯತ್ನಾಳ್, ಪ್ರತಾಪ ಸಿಂಹ ಸೇರಿದಂತೆ ಹಲವಾರು ನಾಯಕರು ಸೇರಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಅದಕ್ಕಾಗಿ ನಾನು ಆರು ಜಿಲ್ಲೆಗಳು ಸೇರಿದಂತೆ ಇತರರು ಜಿಲ್ಲೆಗಳನ್ನು ಆಯ್ದುಕೊಂಡು ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತಿರುವುದಾಗಿ ತಿಳಿಸಿದರು.