ಸಾರಾಂಶ
ಚಾಮರಾಜನಗರಕ್ಕೆ ಈ ಹಿಂದೆ ಮುಖ್ಯಮಂತ್ರಿಗಳಾದವರು ಭೇಟಿ ನೀಡಲು ಹಿಂದೇಟು ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕದೇ ಎರಡನೇ ಸಿಎಂ ಅವಧಿಯಲ್ಲಿ 5ನೇ ಬಾರಿಗೆ ಗಡಿಜಿಲ್ಲೆಗೆ ಶನಿವಾರ ಭೇಟಿ ಕೊಡಲಿದ್ದಾರೆ.
ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕ ಉದ್ಘಾಟನೆ ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರಕ್ಕೆ ಈ ಹಿಂದೆ ಮುಖ್ಯಮಂತ್ರಿಗಳಾದವರು ಭೇಟಿ ನೀಡಲು ಹಿಂದೇಟು ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕದೇ ಎರಡನೇ ಸಿಎಂ ಅವಧಿಯಲ್ಲಿ 5ನೇ ಬಾರಿಗೆ ಗಡಿಜಿಲ್ಲೆಗೆ ಶನಿವಾರ ಭೇಟಿ ಕೊಡಲಿದ್ದಾರೆ.ಸಿಎಂ ಆದ ಮೂರು ತಿಂಗಳಿಗೇ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಕೆಡಿಪಿ ಸಭೆ ನಡೆಸಿದ್ದ ಸಿದ್ದರಾಮಯ್ಯ ಬಳಿಕ ಎರಡನೇ ಬಾರಿ ಭೇಟಿ ಕೊಟ್ಟು ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸಿದರು.ತದನಂತರ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಚಾಮರಾಜನಗರದಲ್ಲಿ ರೋಡ್ ಶೋ ನಡೆಸಿ ಮತದಾರರ ಮನ ಗೆದ್ದಿದ್ದರು. ನಾಲ್ಕನೇ ಬಾರಿ ಚಾಮರಾಜನಗರಕ್ಕೆ ಬಂದು ಮತದಾರರಿಗೆ ಕೃತಜ್ಞತಾ ಸಲ್ಲಿಕೆ ಮಾಡಿದ್ದ ಸಿದ್ದರಾಮಯ್ಯ ಶನಿವಾರದಂದು 5ನೇ ಬಾರಿ ಭೇಟಿ ಕೊಟ್ಟು ಮಾಜಿ ರಾಜ್ಯಪಾಲ ಬಿ.ರಾಚಯ್ಯ ಸ್ಮಾರಕ ಉದ್ಘಾಟನೆ ಮಾಡಲಿದ್ದು, ಸಂಜೆ ಕೊಳ್ಳೇಗಾಲದಲ್ಲಿ ಭರಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ ಕೊಡಲಿದ್ದಾರೆ.ರಸ್ತೆ ಗುಂಡಿಗಳಿಗೆ ದಿಢೀರ್ ಮುಕ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆ ರಸ್ತೆ ಗುಂಡಿಗಳಿಗೆ ದಿಢೀರ್ ಮುಕ್ತಿ ಸಿಗುತ್ತಿದೆ. ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ನಿರ್ಮಿಸಲಾಗಿರುವ ಬಿ. ರಾಚಯ್ಯ ಸ್ಮಾರಕಕ್ಕೆ ಸಾಗುವ ದಾರಿ ಹಾಗೂ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಶನಿವಾರ ಸಂಜೆ 5ಕ್ಕೆ ಜಲಪಾತೋತ್ಸವಕ್ಕೆ ಸಿಎಂ ಚಾಲನೆ ನೀಡಲಿದ್ದು, ಸಿಎಂ ಸಂಚರಿಸುವ ರಸ್ತೆ ಮಾರ್ಗದಲ್ಲಿ ತೇಪೆ ಕಾರ್ಯ ಮಾಡಲಾಗುತ್ತಿದೆ. ಹತ್ತಾರು ತಿಂಗಳಿನಿಂದ ಗುಂಡಿ ಬಿದ್ದು ಹಾಳಾಗಿದ್ದ ರಸ್ತೆಗೆ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.ಅನೇಕ ತಿಂಗಳುಗಳಿಂದ ಗುಂಡಿ ಬಿದ್ದಿದ್ದ ರಸ್ತೆಗಳಿಗೆ ತರಾತುರಿಯಲ್ಲಿ ತೇಪೆ ಕಾರ್ಯ ನಡೆಸಲಾಗುತ್ತಿದ್ದು ಐದಾರು ಕಿಮೀ ಗುಂಡಿ ಬಿದ್ದ ರಸ್ತೆ ದಿಢೀರ್ ಬದಲಾಗುತ್ತಿದೆ. ಇಷ್ಟು ದಿನ ಸುಮ್ಮನಿದ್ದ ಅಧಿಕಾರಿಗಳು ಈಗ ದಿಢೀರ್ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನು, ಭರಚುಕ್ಕಿ ಜಲಪಾತೋತ್ಸಕ್ಕೆ ಭರದಿಂದ ಸಿದ್ಧತೆಯೂ ನಡೆದಿದ್ದು, ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, 4 ಸಾವಿರ ಆಸನ ವ್ಯವಸ್ಥೆ, ಬೆಳಕು- ಶಬ್ಧ ಸಂಯೋಜನೆ ನಡುವೆ ಜಲಪಾತ ಕಣ್ತುಂಬಿಕೊಳ್ಳಲು ಸೂಕ್ತ ಸ್ಥಳವಕಾಶ ಎಲ್ಲವೂ ಕೂಡ ಸಿದ್ಧಗೊಳ್ಳುತ್ತಿದೆ.