ಸಾರಾಂಶ
ಬೆಂಗಳೂರು : ಬರ ಪರಿಹಾರ, ಪಿಂಚಣಿ ಹಣವನ್ನು ರೈತರ ಅನುಮತಿ ಇಲ್ಲದೆ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಅವರು, ರೈತರ ಖಾತೆಗೆ ಸರ್ಕಾರದಿಂದ ಜಮೆ ಮಾಡಿರುವ ಬರ ಪರಿಹಾರ, ವಿವಿಧ ಸಾಮಾಜಿಕ ಪಿಂಚಣಿ ಹಣವನ್ನು ಬ್ಯಾಂಕ್ಗಳು ಸಾಲ ಮನ್ನಾಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಒಂದು ವೇಳೆ ಇದು ನಿಜವಾಗಿದ್ದರೆ ಸಂಬಂಧಪಟ್ಟ ಎಲ್ಲಾ ಬ್ಯಾಂಕ್ಗಳ ಮುಖ್ಯಸ್ಥರಿಗೆ ಪತ್ರ ಬರೆದು ರೈತರ ಅನುಮತಿ ಇಲ್ಲದೆ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರಿಗೆ ಸಿದ್ದರಾಮಯ್ಯ ಸೂಚನೆ ನೀಡಿದರು.
ಬರ ಪರಿಹಾರ ಹಣ ಕಡಿತವಾಗಿಲ್ಲ- ಶಿವಾನಂದ ಪಾಟೀಲ್:
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಎನ್ಡಿಎಆರ್ಎಫ್ನ ಬರ ಪರಿಹಾರದ ಹಣ ಯಾವ ಬ್ಯಾಂಕ್ನಲ್ಲೂ ಕಡಿತವಾಗಿಲ್ಲ. ಆ ರೀತಿ ಮಾಡದಂತೆ ಆದೇಶವೂ ಇದೆ. ಒಂದು ವೇಳೆ ಬಿಜೆಪಿಯವರ ಬಳಿ ದಾಖಲೆಗಳಿದ್ದರೆ ಕೊಡಲಿ ಎಂದು ಹೇಳಿದರು.