ಸಾರಾಂಶ
ಕೊಳ್ಳೇಗಾಲ : ಶೀಘ್ರದಲ್ಲೇ ₹50ಕೋಟಿ ಅನುದಾನವನ್ನು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆಗೊಳಿಸಲಿದ್ದಾರೆ. ಆ, ಅನುದಾನವನ್ನು ಕ್ಷೇತ್ರದ ಮೂರು ತಾಲೂಕುಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕೊಳ್ಳೇಗಾಲ ಪಟ್ಟಣದಲ್ಲಿ ₹50 ಲಕ್ಷ ಅಂದಾಜಿನಲ್ಲಿ ಬೀರೆಶ್ವರ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಬೀರೆಶ್ವರ ಸಮುದಾಯ ಭವನಕ್ಕೆ 50 ಲಕ್ಷ ಅನುದಾನ ನೀಡಿದಂತೆ ಬೂದಿತಿಟ್ಟು ಕನಕ ಭವನಕ್ಕೆ ₹10ಲಕ್ಷ ನೀಡಲಾಗಿದೆ. ಕ್ಷೇತ್ರಗಳಲ್ಲಿನ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿಗೆ ಈಗಾಗಲೇ ಹೆಚ್ಚುವರಿಯಾಗಿ ವಿಶೇಷ ಅನುದಾನ ₹3ಕೋಟಿ ದೊರೆತಿದೆ. ಮತದಾರರು ನನ್ನನ್ನು ಕ್ಷೇತ್ರದ ಪ್ರಗತಿಗಾಗಿ ಗೆಲ್ಲಿಸಿದ್ದು, ಅವರ ಅಶಯ ಈಡೇರಿಸುವಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು. ಜಿಲ್ಲಾಸ್ಪತ್ರೆ ಕೊಳ್ಳೇಗಾಲಕ್ಕೆ ಮಂಜುರಾಗಿದ್ದು ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಹಾಗೂ ಶಾಸಕರ ಸಮ್ಮುಖದಲ್ಲಿ ಇದಕ್ಕೆ ಚಾಲನೆ ನೀಡಬೇಕು ಎಂಬುದು ನನ್ನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿರುವೆ ಎಂದರು.
ಕೇಕ್ ಕತ್ತರಿಸಿದಂತೆ ಮುಲಾಜಿಲ್ಲದೆ ಅತಿಕ್ರಮ ತೆರವು:
ಕಾರ್ಯಕ್ರಮದಲ್ಲಿ ಕೆಲ ನಗರಸಭೆ ಸದಸ್ಯರ ಬಗ್ಗೆ ಶಾಸಕರು ಅಸಮಾಧಾನ, ಬೇಸರ ಹೊರಹಾಕಿದ ಘಟನೆ ಜರುಗಿತು. ರಾಜ್ ಕುಮಾರ್, ಅಂಬೇಡ್ಕರ್ ರಸ್ತೆ ಅಗಲಿಕರಣ ವಿಚಾರದಲ್ಲಿ ನನ್ನ ಗುರಿ, ಉದ್ದೇಶ ಉತ್ತಮ ರೀತಿಯಲ್ಲಿತ್ತು, ಆದರೆ ನನ್ನ ವೇಗಕ್ಕೆ ಬಹುತೇಕ ನಗರಸಭೆ ಸದಸ್ಯರು ನಗರಸಭೆಯಲ್ಲೆ ಮೇಜು ಕುಟ್ಟಿ ಅನುಮೋದನೆ ನೀಡಲಿಲ್ಲ, ಚುನಾವಣೆ ಬರುತ್ತೆ ಎಂಬ ಆತಂಕ ಕೆಲವರಲ್ಲಿರಬಹುದು. ಇನ್ನು ಕೆಲ ನಗರಸಭೆ ಅಧಿಕಾರಿಗಳು ಅಳತೆ ಹಾಗೂ ಇನ್ನಿತರೆ ಮಾಹಿತಿ, ದಾಖಲೆ ಸಲ್ಲಿಸುವ ವಿಚಾರದಲ್ಲೂ ಸಕಾಲದಲ್ಲಿ ಸ್ಪಂದಿಸಲಿಲ್ಲ, ಆದರೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಸಕಾಲದಲ್ಲಿ ತಮ್ಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವವರನ್ನು ತೆರವು ಮಾಡಲಾಗುವುದು, ಅತಿಕ್ರಮ ಮಾಡಿಕೊಂಡಿರುವ ಜಾಗ ಸರ್ಕಾರದಾಗಿದ್ದಲ್ಲಿ ಯಾವುದೇ ಪರಿಹಾರ ನೀಡಲ್ಲ, ಅವರದ್ದೆ ಜಾಗವಾಗಿದ್ದರೆ ಪರಿಶೀಲಿಸಿ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವುದು, ಅತಿಕ್ರಮ ತೆರವಿನ ವಿಚಾರದಲ್ಲಿ ರಾಜಿ ಪ್ರಶ್ನೆಯ ಇಲ್ಲ, ಕೇಕ್ ಕತ್ತರಿಸಿದಂತೆ ಅತಿಕ್ರಮಿತ ಸರ್ಕಾರಿ ಜಾಗ ತೆರವು ಮಾಡುವುದೇ ನನ್ನ ಗುರಿಯಾಗಿದೆ ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷೆ ರೇಖಾ, ವಾರ್ಡ್ ಸದಸ್ಯೆ ಮಾನಸ ಪ್ರಭುಸ್ವಾಮಿ, ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಹೊಂಗನೂರು ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ನಂಜೇಗೌಡ, ತಾಲೂಕು ನಿರ್ದೇಶಕ ಶಶಿಕುಮಾರ್, ಯಜಮಾನ ಮಹದೇವ, ದೊಳ್ಳೇಗೌಡ, ಸುರೇಶ್, ಪುಟ್ಟಮಾದು, ಶಿವಮಲ್ಲು ಇನ್ನಿತರರಿದ್ದರು.
ನನ್ನ ಪತ್ರಕ್ಕೆ ಮನ್ನಣೆ ನೀಡಿ ನೀರಾವರಿಗೆ ₹220 ಕೋಟಿ
ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳ ಕ್ಷೇತ್ರದ ನೀರಾವರಿ ಯೋಜನೆಗೆ ಅನುದಾನ ದೊರೆತಿರಲಿಲ್ಲ, ಇದನ್ನು ಮನಗಂಡು ನೀರಾವರಿಗೆ ಅನುದಾನ ನೀಡುವಂತೆ ನಾನು ನೀರಾವರಿ ಸಚಿವ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದೆ, ಅದಕ್ಕೆ ಪೂರಕವಾಗಿ ಸಭೆ ನಡೆಸಿ ಮನವಿ ಸಲ್ಲಿಸಿದ ಬಳಿಕ ಸುವರ್ಣಾವತಿ ಜಲಾಶಯ, ಗುಂಡಾಲ್ ಜಲಾಶಯ ಒಳಗೊಂಡಂತೆ ನೀರಾವರಿಗಾಗಿಯೇ ಮುಖ್ಯಮಂತ್ರಿಗಳು ₹220ಕೋಟಿ ಅನುದಾನ ನೀಡಿದ್ದಾರೆ.
ಈಗಾಗಲೇ ನದಿ ಪಾತ್ರಗಳಲ್ಲಿ ಪ್ರವಾಹದ ಸಂದರ್ಭದಲ್ಲಿನ ಹಾನಿ, ಸಮಸ್ಯೆಗಳ ಕುರಿತು ಸಹಾ ಸಹಾ ಸಮಸ್ಯೆ ಸರ್ಕಾರದ ಗಮನಕ್ಕೆ ತಂದಿದ್ದೆ, ಸೇತುವೆ, ರೇಷ್ಮೆ ಪುನಶ್ವೇತನಕ್ಕೆ, ಮುಡಿಗುಂಡ ಸೇತುವೆ ನಿರ್ಮಾಣಕ್ಕಾಗಿ ₹15ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದೇ ರೀತಿ ರೇಷ್ಮೇ ಕೃಷಿಕರಿಗೆ ಪುನಶ್ವೇತನಕ್ಕಾಗಿ ₹15ಕೋಟಿ ಮೀಸಲಿರಿಸಿದೆ. ಸಂತೇಮರಳ್ಳಿ ರೇಷ್ಮೆ ಕಾರ್ಖಾನೆ ಪುನಶ್ವೇತನಕ್ಕೆ ₹5ಕೋಟಿ ನಿಗದಿಗೊಳಿಸಲಾಗಿದೆ. ಇನ್ನುಳಿದ ಅವಧಿಯಲ್ಲಿ ಹೆಚ್ಚು ಅನುದಾನ ತಂದು ಕ್ಷೇತ್ರದ ಅಬಿವೃದ್ಧಿಗೆ ಸ್ಪಂದಿಸುವುದು ನನ್ನ ಆದ್ಯತೆ ಎಂದರು.