ಸಾರಾಂಶ
Millions of Rs loss, tractor, bike burn, tumkuru news
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ನಿಟ್ಟೂರು ಹೋಬಳಿ ಎನ್ ರಾಂಪುರದ ರೈತ ರೇಣುಕಪ್ರಸಾದ್ ಎಂಬುವವರಿಗೆ ಕೊಬ್ಬರಿ ಶೆಡ್ಡಿಗೆ ಬುಧವಾರ ತಡ ರಾತ್ರಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಸುಮಾರು ಕೊಬ್ಬರಿ, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರವಾಹನ ಸುಟ್ಟು ಬೂದಿಯಾಗಿವೆ. ವಿಷಯ ತಿಳಿದ ತಕ್ಷಣ ತಡರಾತ್ರಿಯೇ ಅಗ್ನಿಶಾಮಕ ದಳದವರು ಆಗಮಿಸಿ ಬೆಳಗಿನ ಜಾವದವರೆಗೂ ಬೆಂಕಿಯನ್ನು ನಂದಿಸಿದ್ದಾರೆ.ರೈತ ರೇಣುಕಪ್ರಸಾದ್ ಕುಟುಂಬ ಸಮೇತ ತೋಟದ ಮನೆಯಲ್ಲಿ ವಾಸವಿದ್ದು, ಮನೆಯ ಸಮೀಪದಲ್ಲಿಯೇ ಕಾಯಿ ತುಂಬಲು ಶೆಡ್ಡು ನಿರ್ಮಿಸಿಕೊಂಡಿದ್ದರು. ಶೆಡ್ಡಿನಲ್ಲಿಯೇ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನವನ್ನು ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ಶೆಡ್ಡಿಗೆ ಯಾವುದೇ ವಿದ್ಯುತ್ ಸಂಪರ್ಕ ಹಾಗೂ ಸಮೀಪ ಯಾವುದೇ ವಿದ್ಯುತ್ ತಂತಿಗಳೂ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ರೇಣುಕಾ ಪ್ರಸಾದ್ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ತನಿಖೆ ನಡೆಸಿ ಹಲವು ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಕೊಂಡೊಯ್ದಿದ್ದಾರೆ.ರೇಣುಕಪ್ರಸಾದ್, ಕೊಳವೆಬಾವಿ ಕೊರೆಸಲು ಕೊಬ್ಬರಿಯನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈಗ ಕೊಬ್ಬರಿಯು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಕುಟುಂಬ ಸಂಕಷ್ಟವನ್ನು ಎದುರಿಸುವಂತೆ ಆಗಿದೆ. ಈ ಅವಘಡ ತುಂಬಾ ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದ ಕುಟುಂಬದ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರ ಸಾಧ್ಯವಿರುವಷ್ಟು ಪರಿಹಾರ ಒದಗಿಸಿದಲ್ಲಿ ಮಾತ್ರ ಮತ್ತೆ ಬದುಕು ಕಟ್ಟಿಕೊಳ್ಳಬಹುದು. ಇಲ್ಲವಾದಲ್ಲಿ ಮತ್ತಷ್ಟು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ರೈತ ರೇಣುಕಪ್ರಸಾದ್ ದುಃಖಿತರಾದರು.