ನೀತಿ ಸಂಹಿತೆ ಜಾರಿ: ಫ್ಲೆಕ್ಸ್, ಕಟೌಟ್, ವಾಲ್ ಪೋಸ್ಟರ್ ತೆರವು

| Published : Mar 18 2024, 01:48 AM IST

ನೀತಿ ಸಂಹಿತೆ ಜಾರಿ: ಫ್ಲೆಕ್ಸ್, ಕಟೌಟ್, ವಾಲ್ ಪೋಸ್ಟರ್ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿರುವುದರಿಂದ ಸರ್ಕಾರಿ ಕಚೇರಿಗಳು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆ, ಪೇಟೆ ಬೀದಿ, ಮಳವಳ್ಳಿ ರಸ್ತೆ ಸೇರಿದಂತೆ ಬೀದಿ ಬಡಾವಣೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಪ್ಲೆಕ್ಸ್ ಗಳನ್ನು ಮದ್ದೂರು ಪುರಸಭೆಯ ಸಿಬ್ಬಂದಿ ನೆರವಿನಿಂದ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು ತೆರವು ಮಾಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟವಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪಟ್ಟಣದಲ್ಲಿದ್ದ ರಾಜಕೀಯ ನಾಯಕರ ಫ್ಲೆಕ್ಸ್, ಕಟೌಟ್ ಹಾಗೂ ವಾಲ್ ಪೋಸ್ಟರ್ ಗಳನ್ನು ಪುರಸಭೆ ಅಧಿಕಾರಿಗಳು ಶನಿವಾರ ಸಂಜೆ ತೆರವುಗೊಳಿಸಿದರು.

ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿರುವುದರಿಂದ ಸರ್ಕಾರಿ ಕಚೇರಿಗಳು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆ, ಪೇಟೆ ಬೀದಿ, ಮಳವಳ್ಳಿ ರಸ್ತೆ ಸೇರಿದಂತೆ ಬೀದಿ ಬಡಾವಣೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಪ್ಲೆಕ್ಸ್ ಗಳನ್ನು ಪುರಸಭೆಯ ಸಿಬ್ಬಂದಿ ನೆರವಿನಿಂದ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು ತೆರವು ಮಾಡಿದರು.

ಸಿಎಂ, ಡಿಸಿಎಂ ಹಾಗೂ ಸಚಿವರ ಭಾವಚಿತ್ರವುಳ್ಳ ಸರ್ಕಾರದ ಗ್ಯಾರಂಟಿ ಯೋಜನೆಗಳ ಬ್ಯಾನರ್ ಗಳು ಹಾಗೂ ಶಾಸಕರು, ರಾಜಕೀಯ ನಾಯಕ ಹುಟ್ಟುಹಬ್ಬದ ಫ್ಲೆಕ್ಸ್ ಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.

ಈ ಹಿಂದೆ ಹೆದ್ದಾರಿ ಬದಿಗಳಲ್ಲಿ ಹಾಕಲಾಗಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರಗಳ ಫ್ಲೆಕ್ಸ್ ಗಳನ್ನು ತೆಲುಗು ಗೊಳಿಸುವ ಸಂಬಂಧ ರಾಜಕೀಯ ನಾಯಕರುಗಳ ಬೆಂಬಲಿಗ ನಡುವೆ ವಾದ ವಿವಾದ ನಡೆದಿತ್ತು. ಆದರೆ, ಪುರಸಭೆ ಅಧಿಕಾರಿಗಳು ಒಂದು ಪಕ್ಷದ ವಕ್ತಾರರಂತೆ ವರ್ತಿಸಿದ ಹಿನ್ನೆಲೆಯಲ್ಲಿ ತೆರವು ಕಾರ್ಯ ಸ್ಥಗಿತಗೊಂಡಿತ್ತು. ಈಗ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ತೆರವು ಗೊಳಿಸುವ ಕಾರ್ಯವನ್ನು ಪುರಸಭೆ ಅಧಿಕಾರಿಗಳು ಚುರುಕು ಗೊಳಿಸಿದರು.

ಪುತ್ರನ ಪರ ಅನುಕಂಪ ಗಿಟ್ಟಿಸಲು ಎಚ್ಡಿಕೆ ತಮ್ಮ ಆರೋಗ್ಯದ ಹೇಳಿಕೆ: ಕೆ.ಎಂ.ಉದಯ್ ಲೇವಡಿ

ಮದ್ದೂರು:ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಪರ ಜನರಲ್ಲಿ ಅನುಕಂಪ ಗಿಟ್ಟಿಸುವ ಉದ್ದೇಶದಿಂದ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಲೇವಡಿ ಮಾಡಿದರು.ತಾಲೂಕಿನ ಮಾಚಹಳ್ಳಿ ಕೆರೆಯನ್ನು 1 ಕೋಟಿ ರು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೆಲವರಿಗೆ ವೈಯಕ್ತಿಕ ಆರೋಗ್ಯ ಸಮಸ್ಯೆಗಳು ಇರುತ್ತದೆ. ಇಂತಹ ಸಮಸ್ಯೆಗಳನ್ನು ಯಾರೊಂದಿಗೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ಪುತ್ರನ ಪರ ಜನರಲ್ಲಿ ಅನುಕಂಪ ಗಿಟ್ಟಿಸುವ ಹುನ್ನಾರದಿಂದ ಎಚ್ಡಿಕೆ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಎಂದು ಟೀಕಿಸಿದರು.ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಅಥವಾ ಯಾರೇ ಅಭ್ಯರ್ಥಿಯಾದರು ಸಹ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವು ನಿಶ್ಚಿತ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ. ಇವುಗಳಿಂದ ಪ್ರಭಾವಿತರಾದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಮುಖಂಡರಾದ ಗೋವಿಂದು, ದಾಸೇಗೌಡ, ವೆಂಕಟೇಶ್, ಉಮೇಶ, ಪುನೀತ್, ಶಿವರಾಜು, ನಟರಾಜು ಮತ್ತಿತರರು ಇದ್ದರು.