ಕನ್ನಡಪ್ರಭ ವಾರ್ತೆ ಸುತ್ತೂರು

ಐಸಿಎಆರ್ - ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸುತ್ತೂರಿನಲ್ಲಿ ನಂಜನಗೂಡು ತಾಲೂಕಿನ ಎನ್.ಆರ್.ಎಲ್.ಎಂ. ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, ಕಳಳೆಯ ಕದಲಿ ವನ ಧನ ವಿಕಾಸ ಕೇಂದ್ರದ ಸಹಯೋಗದೊಂದಿಗೆ ಕದಲಿ ವನ ಧನ ವಿಕಾಸ ಕೇಂದ್ರದ ರೈತ ಮಹಿಳೆಯರಿಗೆ ಎರಡು ದಿನಗಳ ಬಾಳೆ ಬೆಳೆಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ಉದ್ಯಮಶೀಲತೆ ಅವಕಾಶಗಳ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಜ್ಞಾನೇಶ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಳೆ ಬೆಳೆಯ ಪ್ರಾಮುಖ್ಯತೆ ಹಾಗೂ ಭೌಗೋಳಿಕ ಬೆಳೆಯಾದ ನಂಜನಗೂಡು ರಸಬಾಳೆ ವೈಶಿಷ್ಟತೆ ಹಾಗೂ ಅದರ ಮೌಲ್ಯವರ್ಧನೆ ಮಾಡುವುದರ ಮೂಲಕ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಉದ್ಯಮಶೀಲತೆಯಿಂದ ರೈತ ಮಹಿಳೆಯರು ತಮ್ಮಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದೆಂದು ತಿಳಿಸಿ ಪ್ರೋತ್ಸಾಹಿಸಿದರು.

ಮುಖ್ಯಅತಿಥಿಯಾಗಿದ್ದ ಜಿಪಂ ಯೋಜನಾ ನಿರ್ದೇಶಕ ಭೀಮಪ್ಪ ಕೆ. ಲಾಲಿ ಮಾತನಾಡಿ, ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರದಲ್ಲಿ ಬಾಳೆ ಬೆಳೆಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿಗಳನ್ನು ಆಯೋಜಿಲಾಗುತ್ತಿದ್ದು, ರೈತ ಮಹಿಳೆಯರು ಮತ್ತು ಸ್ವಸಹಾಯ ಸಂಘದ ಸದಸ್ಯರು ತರಬೇತಿಯನ್ನು ಪಡೆದುಕೊಂಡು ತಮ್ಮ ಉದ್ಯಮಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ತಾಪಂ ಸಂಜೀವಿನಿ ಯೋಜನೆ ವ್ಯವಸ್ಥಾಪಕಿ ದಿವ್ಯಾ ಮಾತನಾಡಿ, ಮಹಿಳೆಯರು ಉದ್ಯಮ ಶೀಲತೆಯಿಂದ ಸ್ವಾವಲಂಬಿಯಾಗಬೇಕು ಎಂದರು.


ಕೆವಿಕೆಯ ಗೃಹ ವಿಜ್ಞಾನಿ ಡಾ. ದೀಪಕ ರೈತ ಮಹಿಳೆಯರಿಗೆ ಮತ್ತು ಕದಲಿ ವನ ಧನ ವಿಕಾಸ ಕೇಂದ್ರದ ರೈತ ಮಹಿಳೆಯರಿಗೆ ತಾಂತ್ರಿಕವಾಗಿ ಬಾಳೆ ಬೆಳೆಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ಆಧುನಿಕ ಉತ್ಪನ್ನಗಳಾದ ಬಾಳೆಕಾಯಿ ಹುಡಿ, ಬಾಳೆ ಕುಕ್ಕುಸ್, ಬಾಳೆ ಚಿಪ್ಸ್, ಬಾಳೆ ಬೆಬಿ ಫೂಡ್ಸ್, ವಿವಿಧ ಬೇಕರಿ ಉತ್ಪನ್ನಗಳು ಕುರಿತು ತಾಂತ್ರಿಕ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿಯಲ್ಲಿ ಕಿರು ಆಹಾರ ಉದ್ಯಮೆಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹಾಯಧನದ ಬಗ್ಗೆ ತಿಳಿಸಿದರು.

ಈ ಯೋಜನೆಯಡಿ ಸ್ಧಾಪಿಸಬಹುದಾದ ಆಹಾರ ಸಂಸ್ಕರಣಾ ಘಟಕಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು.

ಕೆವಿಕೆಯ ಆಹಾರ ಸಂಸ್ಕರಣಾ ಘಟಕದಲ್ಲಿ ಪ್ರಾಯೋಗಿಕವಾಗಿ ವಿವಿಧ ಆಹಾರ ಮೌಲ್ಯವರ್ಧಿತ ಉತ್ಪನ್ನಗಳಾದ ಬಾಳೆಕಾಯಿ ಹುಡಿ, ಬಾಳೆ ಕುಕ್ಕುಸ್, ಬಾಳೆ ಚಿಪ್ಸ್, ಬಾಳೆ ಬೆಬಿ ಫೂಡ್ಸ್, ವಿವಿಧ ಬೇಕರಿ ಉತ್ಪನ್ನಳು ಹಾಗೂ ವಿವಿಧ ತಿನಿಸುಗಳ ತಾಯಾರಿಕೆಯ ಪ್ರಾತ್ಯಕ್ಷಿಕೆ ನೀಡಲಾಯಿತು.

ದೀಪಕ್ ಸ್ವಾಗತಿಸಿದರು, ಪ್ರಸಾದ್‌ ನಿರೂಪಿಸಿದರು. ವಿನಯ್ ವಂದಿಸಿದರು.