Come to Vidhana Soudha tomorrow to support the Bidadi farmer's struggle.
-ಟೌನ್ ಶಿಪ್ ಹೆಸರಲ್ಲಿ ಭೂ ಕಬಳಿಕೆ: ಹೊನ್ನೂರು ಮುನಿಯಪ್ಪ
----ಕನ್ನಡಪ್ರಭ ವಾರ್ತೆ ದಾವಣಗೆರೆ
ಬಿಡದಿ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ, ಭೈರಮಂಗಲ-ಕೆಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಭೂ ಹಿತರಕ್ಷಣಾ ಸಂಘದಿಂದ ಆ.25ರಂದು ವಿಧಾನ ಸೌಧ ಚಲೋ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೌನ್ ಶಿಪ್ ಹೆಸರಿನಲ್ಲಿ ರಾಜ್ಯ ಸರ್ಕಾರ ಫಲವತ್ತಾದ, ನೀರಾವರಿಯಿಂದ ಸಮೃದ್ಧ ಬಹುವಾರ್ಷಿಕ ಬೆಳೆಗಳ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಬಿಡದಿ ರೈತರ ಹೋರಾಟ ಬೆಂಬಲಿಸಿ ಆ.25ರ ಬೃಹತ್ ವಿಧಾನಸೌಧ ಚಲೋ ಚಳವಳಿಗಾಗಿ ಆ.24ರ ರಾತ್ರಿ ರೈಲು, ಬಸ್ಗಳಲ್ಲಿ ಬೆಂಗಳೂರಿಗೆ ತೆರಳಿ, ಹೋರಾಟದಲ್ಲಿ ಭಾಗಿಯಾಗಲಿದ್ದೇವೆ ಎಂದರು.
ರಾಜ್ಯ ಸರ್ಕಾರ ಯಾವುದೇ ಕಾನೂನು ತಳಹದಿ ಇಲ್ಲದೆ ರೈತ ವಿರೋಧಿ, ಕೃಷಿ ವಿರೋಧಿ, ಪರಿಸರ ವಿರೋಧಿ ಧೋರಣೆಯನ್ವಯ ಬಿಡದಿ ಟೌನ್ ಶಿಪ್ ಯೋಜನೆಗೆ ಮುಂದಾಗಿದ್ದು ಸರಿಯಲ್ಲ. ಇಂತಹ ರಿಯಲ್ ಎಸ್ಟೇಟ್ ಕಾರ್ಪೋರೇಟ್ ಭೂ ಕಬಳಿಕೆಗೆ ಮುಖ್ಯಮಂತ್ರಿ ಕಚೇರಿ ಸಹ ದುರ್ಬಳಕೆಯಾಗುತ್ತಿರುವುದು ಜನತೆ, ರೈತರ ದುರ್ದೈವ ಎಂದರು.ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿ, ಬಿಡದಿಯಲ್ಲಿ ಕಳೆದ 550ಕ್ಕೂ ಹೆಚ್ಚು ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಹೋರಾಟ ನಡೆಸಿದ್ದರೂ, ದೇಶದ ಎಲ್ಲೆಡೆಯಿಂದ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದರೂ ರಾಜ್ಯ ಸರ್ಕಾರ ಬಾಯಿಯಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದೆ. ಅನ್ಯಾಯದ ಭೂ ಸ್ವಾಧೀನವನ್ನು ಸಮರ್ಥಿಸಿಕೊಳ್ಳುತ್ತಾ, ಅತ್ಯಂತ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸಂಘಟನೆಗಳ ಮುಖಂಡರಾದ ಮಧು ತೊಗಲೇರಿ, ಬುಳ್ಳಾಪುರ ಹನುಮಂತಪ್ಪ, ಇಪ್ಟಾದ ಐರಣಿ ಚಂದ್ರು, ಸತೀಶ ಅರವಿಂದ, ವಿ.ಲಕ್ಷ್ಮಣ, ಪಿ.ಪಿ.ಮರುಳಸಿದ್ದಯ್ಯ, ಸುರೇಶ ಯರಗುಂಟೆ ಇದ್ದರು.ಫೋಟೊ
ದಾವಣಗೆರೆಯಲ್ಲಿ ರೈತ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಹೊನ್ನೂರು ಮುನಿಯಪ್ಪ, ಆವರಗೆರೆ ಎಚ್.ಜಿ.ಉಮೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.