ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮೊಹರಂ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾರ್ವಜನಿಕರಿಗೆ ನೀರು ವಿತರಿಸುವ ಕಾರ್ಯಕ್ರಮ ನಡೆಯಿತು.ಈ ವೇಳೆ ಮಾತನಾಡಿದ ಅಂಜುಮನ್ ಅನ್ಮಾಕುಲ್ ಮೆಹದಿ ಸಂಘದ ಸಯೈದ್ ನಾಝರ್ ಅಬ್ಬಾಸ್, ಪ್ರವಾದಿ ಮೊಹಮ್ಮದ್ ಮೊಮ್ಮಗ ಇಮಾಮ್ ಹುಸೇನ್ ಹಾಗೂ 72 ಜನ ಆತನ ಹಿಂಬಾಲಕರು ಧರ್ಮದ ಉಳಿವಿಗಾಗಿ ಯುದ್ಧ ಮಾಡಿ ಹುತಾತ್ಮರಾದ ದಿನ. ಕ್ರಿ.ಶ 680 ರಲ್ಲಿ ಇರಾಕಿನ ಕರ್ಬಲಾ ಮರುಭೂಮಿಯಲ್ಲಿ ಅರಬ್ ದೊರೆ ಯಜೀದ್ ವಿರುದ್ದ 10 ದಿನಗಳ ಕಾಲ ನಡೆದ ಯುದ್ಧದಲ್ಲಿ ಹುಸೇನರು ಹುತಾತ್ಮರಾಗುತ್ತಾರೆ. ಆದ್ದರಿಂದ ಮೊಹರಂ ಮಾಸದಲ್ಲಿ ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ. ನಾವೆಲ್ಲಾ ಅಂದು ನಿಮ್ಮ ಜೊತೆಯಲ್ಲಿ ಇದ್ದಿದ್ದರೆ ನಿಮ್ಮನ್ನು ಕಾಪಾಡಲು ನಮ್ಮ ರಕ್ತವನ್ನು ಕೊಡುತ್ತಿದೆವು, ಆಗ ನಾವು ಇರಲಿಲ್ಲ. ಆದ್ದರಿಂದ ಇಂದಿಗೂ ನಾವು ಮೊಹರಂ ಮಾಸದಲ್ಲಿ ಆಯುಧಗಳನ್ನು ಹಿಡಿದು ರಕ್ತ ತೆಗೆದು ಶೋಕಾಚರಣೆ ಮಾಡುತ್ತೇವೆ ಎಂದು ಅಂಜುಮನ್ ಅನ್ಮಾಕುಲ್ ಮೆಹದಿ ಸಂಘದ ಸಯೈದ್ ನಾಝರ್ ಅಬ್ಬಾಸ್ ವಿವರಿಸಿದರು. ಮೊಹರಂ ಪ್ರಯುಕ್ತ ಶುಕ್ರವಾರ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾರ್ವಜನಿಕರಿಗೆ ನೀರು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಆಶಂ ಅಲಿ, ಕಾರ್ಯದರ್ಶಿ ಸೈಯದ್ ವಾಸಿಂ, ಜಿಯಾ ಹುಸೇನ್, ಶಫಿಅಲಿ, ಮಾಜಿ ಅಧ್ಯಕ್ಷರಾದ ಗುಲ್ಷನ್ ಅಲಿ, ಕಲಬೇ ಹುಸೇನ್ ಇತರರು ನೇತೃತ್ವ ವಹಿಸಿದ್ದರು. ಮೊಹರಂ ಮೆರವಣಿಗೆಯಲ್ಲಿ ನೂರಾರು ಶಿಯಾ ಮುಸ್ಲಿಮರು ಬ್ಲೇಡ್, ಚಾಕು, ಚೈನ್ಗಳಿಂದ ಎದೆ, ತಲೆ, ಬೆನ್ನಿನ ಮೇಲೆ ಬಡಿದುಕೊಂಡು ದಾರಿ ಉದ್ದಕ್ಕೂ ರಕ್ತ ಸುರಿಸಿದರು. ಮೆರವಣಿಗೆಯನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ಶಿಯಾ ಮುಸ್ಲಿಮರು ಇಲ್ಲಿಗೆ ಆಗಮಿಸಿದ್ದರು. 10 ದಿನಗಳಿಂದ ಕಪ್ಪು ಬಟ್ಟೆ ಧರಿಸಿ ಶೋಕಾಚರಣೆ ನಡೆಸಿದ ಶಿಯಾ ಮುಸ್ಲಿಮರು 10 ನೇ ದಿನ ರಕ್ತ ಸುರಿಸಿ ಮೊಹರಂ ಆಚರಿಸಿದರು.ವೃತ್ತ ನಿರೀಕ್ಷಕ ಸಂತೋಷ್, ನಗರ ಠಾಣೆ ಎಸ್.ಐ. ಅಭಿಜಿತ್, ಗ್ರಾಮಾಂತರ ಠಾಣೆ ಎಸ್.ಐ. ರಮೇಶ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಪೇಟೆ ಮುಖ್ಯ ರಸ್ತೆಯ ವಾಸವಿ ಬ್ಯಾಂಕ್ ಮುಂದಿನಿಂದ ಗರಡಿ ಓಣಿವರೆಗೆ ರಸ್ತೆಯಲ್ಲಿ ರಕ್ತದ ಕಲೆಗಳು ಅಂಟಿದ್ದು ಪುರಸಭಾ ಸಿಬ್ಬಂದಿ ಟ್ಯಾಂಕರ್ನಲ್ಲಿ ನೀರು ಹಾಕಿ ಸ್ವಚ್ಛಗೊಳಿಸಿದರು.