ಸಾರಾಂಶ
ಟಿ.ನರಸೀಪುರ: ಕುಪ್ಯಾ ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಎಲ್ಲಾ ಕೆಲಸಗಳನ್ನು ಮಾಡಿಕೊಡುವುದಾಗಿ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣ ಕ್ಷೇತ್ರದ ಕುಪ್ಯಾ ಗ್ರಾಮದಲ್ಲಿ ಲೈಬ್ರರಿ ಉದ್ಘಾಟನೆ, ಹಾಲಿನ ಡೈರಿಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮತ್ತು ಪಿಂಚಣಿ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.ಸಂಪತ್ತಿಗಿಂತಲೂ ಮಿಗಿಲಾಗಿದ್ದು ಜ್ಞಾನವಾಗಿದ್ದು, ಯುವಕರು, ವಿದ್ಯಾರ್ಥಿಗಳು, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಡೇರಿಗೆ ಒಂದು ಸಾವಿರ ಲೀಟರ್ ಹಾಲು ಬರುತ್ತಿದೆ, ಸಿದ್ದರಾಮಯ್ಯ ಅವರು ರೈತರಿಗೆ ಒಂದು ಲೀಟರ್ಗೆ 5 ರು. ನಂತೆ ಸಬ್ಸಿಡಿ ನೀಡುತ್ತಿದ್ದಾರೆ, ಹಾಲು ಉತ್ಪಾದಕರು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಎಂದ ಅವರು, ಕಟ್ಟಡಕ್ಕೆ ಇನ್ನೂ ಹೆಚ್ಚುವರಿ ಹಣವನ್ನು ನೀಡುತ್ತೇವೆ. ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಮುಗಿಸಬೇಕು ಎಂದರು.ಸಾರ್ವಜನಿಕರು ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದಾಗ ಅಧಿಕಾರಿಗೆ ಕರೆದು ನಿಗದಿತ ಸಮಯಕ್ಕೆ ಬಸ್ ಬರುವಂತೆ ಸೂಚಿಸಿದರು. ಸಾಗುವಳಿ ಚೀಟಿ ಕೊಡಿಸಿ, ವಂಶವೃಕ್ಷ ಕೊಡಿಸಿ, ಪಿಂಚಣಿ ಮಾಡಿಸಿಕೊಡಿ, ರಸ್ತೆ ಕಾಮಗಾರಿ ಮಾಡಿಸಿಕೊಡಿ, ಸರ್ವೆ ನಂಬವರ್ ಜಾಗದಲ್ಲಿ ಖಾತೆ ಮಾಡಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು.
ಹಿಟ್ಟುವಳ್ಳಿ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಮೂರು ಜನ ವಿದ್ಯಾರ್ಥಿನಿಯರಿಗೆ ತಲಾ ರು. 10 ಸಾವಿರದಂತೆ ಪ್ರೋತ್ಸಾಹ ಧನವನ್ನು ವೈಯಕ್ತಿಕವಾಗಿ ವಿತರಿಸಿದರು.ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಗ್ರಾಪಂ ಅಧ್ಯಕ್ಷ ಗವಿಸಿದ್ದಯ್ಯ, ಪಿಡಿಓ ಜಿ. ಗಜೇಂದ್ರಕುಮಾರ್, ಮುಖಂಡರಾದ ಭಾಗ್ಯಮ್ಮ ಕೆ.ಬಿ. ಪ್ರಭಾಕರ್, ಮುದ್ದೇಗೌಡ, ಓಂಪ್ರಕಾಶ್, ಪ್ರಶಾಂತ್ ಬಾಬು, ಅಂದಾನಿ, ಹಿನಕಲ್ ಉದಯ್, ಮಹಾದೇವ್, ಅಹಿಂದ ಜವರಪ್ಪ, ಕಲ್ಪನಾ, ಮಹಾದೇವಮ್ಮ, ಶಿವಸ್ವಾಮಿ, ಪ್ರದೀಪ್ ಕುಮಾರ್, ನಾಗರಾಜ್, ಮಹೇಶ್ ಇದ್ದರು.