ಸಾರಾಂಶ
ಮೈಸೂರು : ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡ ಪ್ರೇಮಿಗಳು ಪ್ರತ್ಯೇಕವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ತಾಲೂಕು ಮಂಡಕಳ್ಳಿ ನಿವಾಸಿ ನಾಗರಾಜು ಮತ್ತು ಮಂಜುಳಾ ದಂಪತಿ ಪುತ್ರಿ ಮೋನಿಕಾ (20) ಮತ್ತು ಮೈಸೂರಿನ ಜ್ಯೋತಿನಗರ ಎಂಸಿಸಿ ಕಾಲೋನಿ ನಿವಾಸಿ ಮುರುಗೇಶ್ ಎಂಬವರ ಪುತ್ರ ಮನು (22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಸ್ವಂತ ಅತ್ತೆಯ ಮಗಳಾದ ಮೋನಿಕಾ ಅವರನ್ನು ಮನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಎರಡು ಕುಟುಂಬದವರು ಒಪ್ಪಿದಲ್ಲದೇ ಮದುವೆ ಮಾಡಲು ಸಹ ಸಿದ್ಧರಾಗಿದ್ದರು. ಮೋನಿಕಾ ಮೈಸೂರಿನ ದಟ್ಟಗಳ್ಳಿ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡು, ಅಲ್ಲೆ ವಾಸವಾಗಿದ್ದರು.
ಹೀಗಿರುವಾಗ, ಬುಧವಾರ ರಾತ್ರಿ ಮೋನಿಕಾ ಮತ್ತು ಮನು ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳವಾಗಿದ್ದು, ಇದರಿಂದ ಮನನೊಂದ ಮೋನಿಕಾ ಕೆಲಸ ಮಾಡುತ್ತಿದ್ದ ದಟ್ಟಗಳ್ಳಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕಷ್ಟು ಹೊತ್ತಾದರೂ ಕೊಠಡಿಯಿಂದ ಮೋನಿಕಾ ಹೊರ ಬಾರದಿದ್ದಾಗ ಮನೆ ಮಾಲೀಕರು ಮೋನಿಕಾ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೋನಿಕಾ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಮನು ಕೂಡ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ಮೋನಿಕಾ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ಪೋಷಕರಿಗೆ ತಿಳಿಸಿದ್ದಾರೆ.
ಇದರಿಂದ ಮನನೊಂದು ಮನೆಗೆ ಬಂದ ಮನು ಕೂಡ ಜ್ಯೋತಿನಗರದಲ್ಲಿರುವ ಮನೆಗೆ ಬಂದು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕುವೆಂಪುನಗರ ಠಾಣೆ ಮತ್ತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.