ಸಾರಾಂಶ
ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಬೆಂಗಳೂರಿನ ಇನ್ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಕಾಂಗ್ರೆಸ್ಗೆ ಬಿಸಿತುಪ್ಪವಾಗಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆಯಷ್ಟೇ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ ಸ್ವಾಮೀಜಿ ಸಮ್ಮುಖ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಎಸ್.ಎಸ್.ಮಲ್ಲಿಕಾರ್ಜುನ ಸಮಕ್ಷಮದಲ್ಲೇ ಮನವೊಲಿಸಿ, ಇನ್ನೂ ವಯಸ್ಸು, ಅವಕಾಶ ಇದೆ, ದುಡುಕಬೇಡ. ನಿನ್ನನ್ನು ಬೆಳೆಸುವ ಜವಾಬ್ಧಾರಿ ನಮ್ಮದೆಂಬ ಭರವಸೆ ನೀಡಿದ್ದರು. ಆದರೆ, ವಿನಯಕುಮಾರ ಎರಡು ದಿನಗಳ ಕಾಲಾವಕಾಶ ಕೋರಿದ್ದರು.
ಸಿಎಂ, ಶ್ರೀಗಳ ಸಂಧಾನ ಸಭೆ ಬೆನ್ನಲ್ಲೇ ಸೋಮವಾರ ತಮ್ಮ ನಿವಾಸದ ಅಂಗಳದಲ್ಲಿ ಜಿ.ಬಿ.ವಿನಯಕುಮಾರ ಅವರು ತಮ್ಮ ಬೆಂಬಲಿಗರು, ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯ, ಸಲಹೆ ತದೇಕಚಿತ್ತದಿಂದ ಆಲಿಸಿದ್ದಾರೆ. ಅಲ್ಲದೇ, ಅಂತಿಮವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದರು.
ಸಭೆಯಲ್ಲಿ ಜಿ.ಬಿ.ವಿನಯಕುಮಾರ ಮಾತನಾಡಿ, ದಾವಣಗೆರೆ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈಗ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಗೆದ್ದ ಹಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ ತೋರಿಸುತ್ತೇನೆ. ನಾಯಕರ ಮಾತಿಗಿಂತಲೂ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವೆ. ಜಿಲ್ಲೆಯ ರಾಜಕಾರಣ ಎರಡು ಪ್ರಬಲ ಕುಟುಂಬಗಳ ಕೈಯಲ್ಲಿ ಇದೆ. ಈ ಬಗ್ಗೆ ಜನರಲ್ಲೂ ಅಸಮಾಧಾನವಿದೆ. ಕ್ಷೇತ್ರದಲ್ಲಿ ಹೊಸಬರಿಗೆ, ಹೊಸ ಮುಖಗಳಿಗೆ, ಯುವಕರಿಗೆ ಅವಕಾಶ ಸಿಗಬೇಕೆಂಬುದಕ್ಕಾಗಿ ಹೋರಾಟ ನಡೆಸಿದ್ದೇನೆ. ನನಗೆ ಇಬ್ಬರೂ ಎದುರಾಳಿಗಳಾಗಿದ್ದಾರೆ ಎಂದು ತಿಳಿಸಿದರು.
ಸಚಿವ ಈಶ್ವರ ಖಂಡ್ರೆ ಮಗನಿಗೆ ಟಿಕೆಟ್ ನೀಡಲಾಗಿದೆ. ಅಂಥವರಿಗೆ ಇಲ್ಲದ ಮಾನದಂಡ ನನಗೇಕೆ? ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ನನಗೆ ಶಾಲು, ಹಾರ ಹಾಕಿರುವುದು ವಿಜಯಶಾಲಿಯಾಗಿ ಬಾ ಎಂಬುದಾಗಿ ಹೇಳಿದಂತೆ ಎಂದೇ ತಿಳಿದಿದ್ದೇನೆ. ನಿನ್ನೆ ಶ್ರೀಗಳು, ಸಿಎಂ ಜೊತೆ ಸಮಾಲೋಚನೆ ಆಗಿದೆಯೇ ಹೊರತು, ನಾನು ಯಾವುದೇ ತೀರ್ಮಾನವನ್ನೂ ಅಲ್ಲಿ ಹೇಳಿಲ್ಲ. ನಾನು ಇಂಥದ್ದೊಂದು ನಿರ್ಧಾರ ಕೈಗೊಳ್ಳುತ್ತಿರುವುದು ಪೊಲಿಟಿಕಲ್ ಸುಸೈಡ್ ಎನಿಸಬಹುದಾದರೂ, ಕುಟುಂಬ ವರ್ಗ ಹಾಗೂ ಕ್ಷೇತ್ರದ ಜನರ ಜೊತೆಗೆ ಚರ್ಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ. ಒಮ್ಮೆ ನಾಮಪತ್ರ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಅವ್ಯಸ್ಥೆಯ ವಿರುದ್ಧ ಹೋರಾಟ ಇದಾಗಿದೆ. ಮುಂದಿನ ಪೀಳಿಗೆಗೆ ಹೊಸ ನಾಯಕತ್ವ ಸೃಷ್ಟಿಯಾಗುವ ನಿಟ್ಟಿನಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಲು ಉದ್ದೇಶಿಸಿದ್ದೇನೆ
- ಜಿ.ಬಿ.ವಿನಯಕುಮಾರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ