ಸಾರಾಂಶ
ನೀವು ನಿಮ್ಮ ಜೀವನದಲ್ಲಿ ಸ್ಪರ್ಧಿಸಬೇಕು, ಇತರರ ಜೊತೆಯಲ್ಲಲ್ಲ. ಸಹಕಾರ ಎಲ್ಲರ ಜೊತೆಯಲ್ಲಿ ಇರಬೇಕು ಎಂದು ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಸ್ವಾಮಿ ಮಹಾಮೇಧಾನಂದ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನೀವು ನಿಮ್ಮ ಜೀವನದಲ್ಲಿ ಸ್ಪರ್ಧಿಸಬೇಕು, ಇತರರ ಜೊತೆಯಲ್ಲಲ್ಲ. ಸಹಕಾರ ಎಲ್ಲರ ಜೊತೆಯಲ್ಲಿ ಇರಬೇಕು ಎಂದು ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಸ್ವಾಮಿ ಮಹಾಮೇಧಾನಂದ ತಿಳಿಸಿದರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ 2025- 26ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.ಯಾರು ಇತರರಿಗಾಗಿ ಬದುಕುತ್ತಾನೋ ಅವನು ನಿಜವಾಗಲೂ ಬದುಕುತ್ತಾನೆ. ಯಾರು ತನಗಾಗಿ ಬದುಕುತ್ತಾನೋ ಅವನು ಬದುಕಿದ್ದೂ ಸತ್ತಂತೆ. ಹಕ್ಕುಗಳ ಬಗ್ಗೆ ಮಾತನಾಡುವ ನಾವು ನಮ್ಮ ಕರ್ತವ್ಯಗಳನ್ನು ಮರೆತಿರುತ್ತೇವೆ. ಹೀಗಾಗಿ, ವಿದ್ಯಾರ್ಥಿಯಾದವನಿಗೆ ಪ್ರಾಮಾಣಿಕತೆ, ಜ್ಞಾನ ಇವೆರಡೂ ಮುಖ್ಯ. ಇವೆರಡನ್ನೂ ನೀಡುವವನು ಗುರು ಎಂದು ಅವರು ಹೇಳಿದರು.ನೀವು ನಿಮ್ಮ ಜೀವನದಲ್ಲಿ ಪ್ರಲೋಭನೆಗಳನ್ನು ಎದುರಿಸಬೇಕು. ನಮ್ಮ ಮನಸ್ಸನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕು. ಪ್ರತಿಯೊಂದು ಸಂಬಂಧಗಳಲ್ಲಿ ಕರ್ತವ್ಯಗಳಿವೆ. ತಂದೆ-ತಾಯಿ ಬಂಧು ಬಳಗ ಸಮಾಜದ ಎಲ್ಲರೊಡನೆ ನಮ್ಮ ಕರ್ತವ್ಯಗಳನ್ನು ನಾವು ಪರಿಪಾಲಿಸಬೇಕು ಎಂದರು.ಒಂದು ಮಗು ಮನುಷ್ಯನಾಗಿ ಬಾಳಬೇಕಾದರೇ ಅದು ವಿದ್ಯೆ ಕಲಿಯಬೇಕು. ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರು. ಇಂದು ನಿಮಗೆಲ್ಲರಿಗೂ ಒಂದು ಒಳ್ಳೆಯ ಸುದಿನ. ಏಕೆಂದರೇ, ನೀವು ಕಾಲೇಜಿಗೆ ಪ್ರವೇಶವನ್ನು ಪಡೆದಿದ್ದೀರಿ. ಕಾಲೇಜಿನಲ್ಲಿ ನಿಮಗೆ ನಿಮ್ಮದೇ ಆದ ಸ್ವಾತಂತ್ರ್ಯ ಇರುತ್ತದೆ. ಮನೆ, ತಂದೆ-ತಾಯಿ, ಕುಟುಂಬ ಹೇಗೋ ಹಾಗೇ ನಿಮ್ಮ ಕಾಲೇಜು ಕೂಡ ಒಂದು ಕುಟುಂಬವೇ ಆಗಿರುತ್ತದೆ ಎಂದು ಅವರು ತಿಳಿಸಿದರು.ನೀವು ವಿದ್ಯೆಯನ್ನು ಕಲಿಯಲು ಬಂದಿರುತ್ತೀರಿ ಕಾರಣ ವಿದ್ಯೆ ಎಂದರೇ ಒಂದು ಶಕ್ತಿ. ಓದುವುದರಿಂದ ಜ್ಞಾನ ಸಿಗುತ್ತದೆ. ಆ ಜ್ಞಾನವೇ ನಿಮ್ಮ ಶಕ್ತಿ. ನೀವು ಈ ಜ್ಞಾನವನ್ನು ಪಡೆಯುವುದರ ಹಿಂದೆ ಒಂದು ಉದ್ದೇಶವಿರುತ್ತದೆ. ಆ ಉದ್ದೇಶವಿದ್ದಾಗ ಸ್ಪಷ್ಟವಾದ ದಾರಿ ನಿಮಗೆ ಸಿಗುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ದೇಶ ಮತ್ತು ಗುರಿ ಎರಡೂ ಬಹಳ ಮುಖ್ಯ. ಈ ಉದ್ದೇಶ ಗುರಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.ಮೊದಲನೆಯದು ಸಮಯ, ಎರಡನೆಯದು ದೇಶ. ನಿಮ್ಮ ಸಮಯವನ್ನು ನೀವು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ನಿಮ್ಮ ದೇಶದ ಬಗ್ಗೆ ನಿಮಗೆ ಅಭಿಮಾನವಿರಬೇಕು. ಸಮಯ ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ಮುಖ್ಯ ಉದ್ದೇಶಗಳಿಗೆ ಮೀಸಲಿಡಬೇಕು. ನೀವು ಸಮಾಜಕ್ಕೆ ಏನನ್ನು ಕೊಡುತ್ತೀರ ಎಂಬುದು ಬಹಳ ಮುಖ್ಯ. ನಿಮ್ಮ ಪರಿಶ್ರಮದ ಫಲವೇ ನಿಮ್ಮ ಮುಂದಿನ ಬದುಕು. ನೀವು ಸಮಾಜದಿಂದ ಎಲ್ಲವನ್ನು ತೆಗೆದುಕೊಂಡ್ಡಿದ್ದೀರಿ ಅದಕ್ಕಿನ್ನ ಹೆಚ್ಚು ನೀವು ಸಮಾಜಕ್ಕೆ ಕೊಡುಗೆ ಕೊಡಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಅವರು, ಕಾಲೇಜು, ತರಗತಿಗಳು, ಗ್ರಂಥಾಲಯ, ವಾಚನಾಲಯಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ತನುಶ್ರೀ, ಜಿ. ಸಹನಾ, ಹೇಮಂತ್ ಕುಮಾರ್, ಕಾರ್ತಿಕ್ ಆರ್. ಗೌಡ, ಜೆ. ಸುಪ್ರೀತ್, ಜಿ. ಕಾರ್ತಿಕ್, ಕೆ. ಚಿಕ್ಕಯ್ಯ ಅವರನ್ನು ಸನ್ಮಾನಿಸಲಾಯಿತು.ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಕೋಶಾಧ್ಯಕ್ಷ ಶ್ರೀಶೈಲ ರಾಮಣ್ಣವರ್, ಕಾಲೇಜು ನಿರ್ವಹಣಾ ಮಂಡಳಿಯ ಅಧ್ಯಕ್ಷ ಟಿ. ನಾಗರಾಜು ಇದ್ದರು. ತ್ರಿವೇಣಿ ತಂಡ ಪ್ರಾರ್ಥಿಸಿದರು. ಆರ್. ಅರವಿಂದ್ ಸ್ವಾಗತಿಸಿದರು. ಮಾದೇಶ್ ಗೌಡ ವಂದಿಸಿದರು. ಎಸ್. ಚೈತ್ರಾ ನಿರೂಪಿಸಿದರು.