ಕನಕಗಿರಿ ಪಟ್ಟಣದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ಮಕ್ಕಳಿಗೆ 2025-26ನೇ ಸಾಲಿನ ಶೂ, ಸಾಕ್ಸ್ ಹಂಚಿಕೆ ಮಾಡುವಲ್ಲಿ ಮುಖ್ಯಶಿಕ್ಷಕರು ಬೇಜವಾಬ್ದಾರಿತನ ತೋರಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೂರು ಸಲ್ಲಿಕೆಯಾಗಿದೆ.

ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ಮಕ್ಕಳಿಗೆ 2025-26ನೇ ಸಾಲಿನ ಶೂ, ಸಾಕ್ಸ್ ಹಂಚಿಕೆ ಮಾಡುವಲ್ಲಿ ಮುಖ್ಯಶಿಕ್ಷಕರು ಬೇಜವಾಬ್ದಾರಿತನ ತೋರಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೂರು ಸಲ್ಲಿಕೆಯಾಗಿದೆ.

ಪಟ್ಟಣದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಈ ಶಾಲೆ ಹೊಂದಿದ್ದು, ಮಕ್ಕಳಿಗಾಗಿ ಸರ್ಕಾರ ಜಾರಿಗೆ ತಂದಿರುವ ಶೂ, ಸಾಕ್ಸ್ ಯೋಜನೆ ವಿದ್ಯಾರ್ಥಿಗಳಿಗೆ ತಲುಪಿಸದೆ ಅನ್ಯಾಯ ಮಾಡಲಾಗಿದೆ. ಕಳೆದ ವರ್ಷದ ಶೂ, ಸಾಕ್ಸ್ ಖರೀದಿಗೆ ಜಮೆಯಾಗಿದ್ದ ಅನುದಾನ ಬಳಸಿಕೊಂಡು ಶೂ, ಸಾಕ್ಸ್ ಖರೀದಿಸಿ ಮಕ್ಕಳಿಗೆ ಒದಗಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿತ್ತು. ಈ ಶಾಲೆಯಲ್ಲಿ ಎಸ್‌ಡಿಎಂಸಿ ಇಲ್ಲದಿದ್ದರಿಂದ ಹಿರಿಯ ಶಿಕ್ಷಕರೊಂದಿಗೆ ಚರ್ಚಿಸಿ, ನಡಾವಳಿ ಮಾಡಿಕೊಂಡು, ಪ್ರಾಶಸ್ತ್ಯದ ಮೇರೆಗೆ ಶೂ, ಸಾಕ್ಸ್ ಹಂಚಿಕೆ ಮಾಡಬೇಕಿತ್ತು. ಶೂ, ಸಾಕ್ಸ್‌ಗೆ ಸಂಬಂಧಿಸಿದ ಅನುದಾನ ಪರಿಶೀಲನೆ ಮಾಡದೇ ಶಾಲೆಯ ಮುಖ್ಯಶಿಕ್ಷಕ ಬೇಜವಾಬ್ದಾರಿತನ ತೋರಿದ್ದಾರೆ. ಪಾಲಕರ ದೂರಿನ ಮೇಲೆ ಕಳೆದ ಸಾಲಿನ ಶೂ, ಸಾಕ್ಸ್ ಅನ್ನು 2026-27ನೇ ಸಾಲಿನಲ್ಲಿ ಹಂಚಿಕೆ ಮಾಡಲು ಮುಂದಾಗಿ, ಮಾಡಿರುವ ತಪ್ಪು ಮುಚ್ಚಿ ಹಾಕಿಕೊಳ್ಳಲು ಯತ್ನಿಸಿದ್ದಾರೆ ಎಂದು ದೂರುದಾರ ನೀಲಕಂಠ ಬಡಿಗೇರ ಆರೋಪಿಸಿದ್ದಾರೆ.

ಪಿಯು ಹಂತಕ್ಕೆ ಹೋಗಬೇಕಾದ ವಿದ್ಯಾರ್ಥಿಗಳು ದಾಖಲೆಗಳಿಗಾಗಿ ಶಾಲೆಗೆ ಬಂದಾಗ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಹಾಲ್‌ ಟಿಕೆಟ್ ಪಡೆಯಲು ಶಾಲೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ನೀಡಿದ್ದಾರೆ. ಅದೂ ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಲ್ಲ ಎಂದು ಹೇಳಲಾಗಿದೆ.

ಈ ಕುರಿತು ಮೇ 24ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಈ ವರೆಗೆ ಯಾವುದೇ ತನಿಖೆ ನಡೆದಿಲ್ಲ. ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಾಕ್ಷರತಾ ಇಲಾಖೆ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತನಿಖೆ ಮಾಡುವ, ವರದಿ ತರಿಸಿಕೊಳ್ಳುವ ಸೇರಿ ನಾನಾ ನೆಪದಲ್ಲಿ ತಪ್ಪಿತಸ್ಥರನ್ನು ಉಳಿಸಿಕೊಳ್ಳುವ ಪ್ರಸಂಗಗಳು ನಡೆದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆ. ಮುಖ್ಯಶಿಕ್ಷಕ ತಪ್ಪಿತಸ್ಥ ಎಂದು ಮೇಲ್ನೊಟಕ್ಕೆ ಕಂಡು ಬಂದಿದ್ದು, ಕೂಡಲೇ ಅವರನ್ನು ಅಮಾನತು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ದೂರಿನಲ್ಲೆ ಉಲ್ಲೇಖಿಸಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.