ಸಾರಾಂಶ
ಕಾರವಾರ:
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ವೇದಿಕೆಯಿಂದ ಆಶ್ರಯ ಯೋಜನೆ ಅಡಿ ಫಲಾನುಭವಿಗಳಿಗೆ ಮನೆ ಒದಗಿಸುವಂತೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ದಾಂಡೇಲಿಯ ನಗರಸಭೆ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯ ಅಡಿ ಫಲಾನುಭವಿಗಳಿಗೆ ಮನೆ ಹಾಗೂ ಗೃಹ ನಿರ್ಮಾಣ ಮಂಡಳಿಯಿಂದ ನಿವೇಶನ ಅಪೂರ್ಣಗೊಂಡಿದೆ. ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಮತ್ತು ಸ್ಥಳೀಯ ನಗರಸಭೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಅಡಿಯಲ್ಲಿ ಜಿ+೨ ಮನೆಗಾಗಿ ಫಲಾನುಭವಿಗಳಿಂದ ಸೆಪ್ಟೆಂಬರ್ ೨೦೧೬ರಲ್ಲಿ ಅರ್ಜಿ ಆಹ್ವಾನಿಸಿತ್ತು. ಫಲಾನುಭವಿಗಳು ದಾಖಲೆಯೊಂದಿಗೆ ₹ ೫೦,೦೦೦ ಮತ್ತು ₹ ೭೦,೦೦೦ ನಗರಸಭೆಯ ಆದೇಶದ ಪ್ರಕಾರ ೮೪೦ ಫಲಾನುಭವಿಗಳು ಹಣ ಸಂದಾಯ ಮಾಡಿದ್ದಾರೆ. ಆದರೆ ಇಷ್ಟು ವರ್ಷ ಕಳೆದರೂ ಮನೆ ಕೆಲಸ ಪೂರ್ಣಗೊಳಿಸಿಲ್ಲ. ಇದರಿಂದ ಫಲನುಭವಿಗಳಿಗೆ ಸೂರು ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಈ ಹಿಂದೆ ದಾಂಡೇಲಿ ನಗರಸಭೆ ಎದುರು ಧರಣಿ ಪ್ರಾರಂಭಿಸಲಾಗಿತ್ತು. ಜಿಲ್ಲಾ ಗೃಹ ನಿರ್ಮಾಣ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ನಗರಸಭೆಯ ಪೌರಾಯುಕ್ತರು, ದಾಂಡೇಲಿಯ ತಹಸೀಲ್ದಾರ್ರು ಹೋರಾಟ ಸಮಿತಿಯ ಪದಾಧಿಕಾರಿಗಳ ಜತೆಗೆ ಚರ್ಚೆ ನಡೆಸಿ ೨ ತಿಂಗಳೊಳಗೆ ೩೦೦ ಮನೆ ಹಾಗೂ ಉಳಿದ ಮನೆ ೬ ತಿಂಗಳ ಒಳಗೆ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೇ ನಿವೇಶನವನ್ನು ಸಹ ಆದಷ್ಟು ಬೇಗನೆ ನಗರ ಸಭೆಯಿಂದ ಹಸ್ತಾಂತರಿಸಿಕೊಂಡು ನೀಡಲು ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದರು. ಅದೂ ಸಹ ಕಾರ್ಯಗತವಾಗಲಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಮುಂದಿನ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಎಂಜನಿಯರ್ ರವಿಕುಮಾರ ಮನವಿ ಸ್ವೀಕರಿಸಿದರು.