ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ಮತದಾರರ ಸಮಗ್ರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ನಗರ ಸೇರಿ ತಾಲೂಕಿನ ಗಡಿಭಾಗದ ವಿವಿಧ ಮತಗಟ್ಟೆಗಳಿಗೆ ಬುಧವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ಮತದಾರರ ಸಮಗ್ರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪರಿಶೀಲಿಸಿದರು.

ತಾಲೂಕಿನ ಗಡಿ ಭಾಗದ ಕೊಂಗಳಿ, ವಾಂಜರಖೇಡ ಗ್ರಾಮದ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆ ಅಧಿಕಾರಿಗಳಿಂದ ಎಸ್‌ಐಆರ್ ಪ್ರಗತಿಯ ಮಾಹಿತಿ ಪಡೆದುಕೊಂಡರು. ನಂತರ ನಗರದ ತಹಸೀಲ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕ್ಷೇತ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆ ಮನೆಗಳಿಗೆ ಭೇಟಿ ನೀಡಿ ಗಣಪತಿ ನಮೂನೆಗಳನ್ನು ವಿತರಿಸಿ ಶೀಘ್ರದಲ್ಲಿಯೇ ಶೇ.100ರಷ್ಟು ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನಮೂನೆಗಳು ತಲುಪಬೇಕು. ಯಾವುದೇ ಅರ್ಹವ್ಯಕ್ತಿಯು ಮತಪಟ್ಟಿಯಿಂದ ಅಳಿಸಿ ಹೋಗದಂತೆ ಎಚ್ಚರ ವಹಿಸಬೇಕು. ಪಾರದರ್ಶಕತೆ ಮತ್ತು ವಿಶ್ವಾರ್ಹತೆ ಕಾಪಾಡುವ ಉದ್ದೇಶದಿಂದ ಪರಿಷ್ಕರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಬೇಕು ಎಂದರು.

ಜುಲೈ 1ರಿಂದ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ವಿಬಿಜಿ ರಾಮ್ ಜಿ ಯೋಜನೆ ಅನುಷ್ಠಾನಗೊಂಡಿದ್ದು, ಗ್ರಾಮೀಣ ಬಡ ಕಾರ್ಮಿಕರು ನಗರಗಳಿಗೆ ವಲಸೆ ಹೋಗದಂತೆ ಯೋಜನೆಯಡಿ ಎನ್‌ಎಂಆರ್ ಜನರೆಟ್ ಮಾಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಿ ಎಂದು ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೆರೆ, ಮತದಾರರ ನೋಂದಣಾಧಿಕಾರಿ ಶಂಕರ ಖಡಿ, ಸಂಜುಕುಮಾರ ಭೈರೆ, ಅಹ್ಮದ ಮುಲ್ಲಾ, ನವನಾಥ ಬೋಲ್ಸುರೆ, ಶ್ರೀನಾಥ್, ವಿದ್ಯಾಸಾಗರ ಕಾಂಬಳೆ, ನಂದಕಿಶೋರ್ ಮುಳೆ, ವಹೀದ್, ಶ್ರೀಕಾಂತ್ ಪಾಟೀಲ್ ಸೇರಿದಂತೆ ಹಲವರು ಇದ್ದರು.