ಶಿರಾ ನಗರದ ಸಮಗ್ರ ಅಭಿವೃದ್ಧಿ ನಮ್ಮ ಗುರಿ: ಪೂಜಾ ಪೆದ್ದರಾಜು

| Published : Feb 28 2024, 02:31 AM IST

ಸಾರಾಂಶ

ಶಿರಾ ನಗರದ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ನಗರವನ್ನು ಸುಂದರ ಮಾದರಿ ನಗರವನ್ನಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ನಗರದ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದ್ದು, ನಗರವನ್ನು ಸುಂದರ ಮಾದರಿ ನಗರವನ್ನಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು ಹೇಳಿದರು.

ಮಂಗಳವಾರ ನಗರಸಭಾ ಸಭಾಂಗಣದಲ್ಲಿ ನಗರಸಭೆ 2024-25ನೇ ಸಾಲಿನ ಆಯ-ವ್ಯಯ ಮಂಡಿಸಿ ಮಾತನಾಡಿದರು. ಶಿರಾ ನಗರಸಭೆ ವತಿಯಿಂದ 2024-25 ನೇ ಸಾಲಿನಲ್ಲಿ ಒಟ್ಟು ಆದಾಯ 54.57 ಕೋಟಿ ರು.ಗಳು ಇದ್ದು, ಒಟ್ಟು ಖರ್ಚು53.22 ಕೋಟಿ ರು.ಗಳು ಆಗಿದ್ದು, ಒಟ್ಟು ಉಳಿತಾಯ 1.35 ಕೋಟಿ ರು.ಗಳ ಬಜೆಟ್ ಮಂಡಿಸಲಾಗಿದೆ ಎಂದರು.

ಶಿರಾ ನಗರದ ಮುಖ್ಯ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಹಾಗೂ ಪಾದಚಾರಿಗಳ ಸಂಚಾರಕ್ಕಾಗಿ ರಸ್ತೆಗಳ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಸ್ಟೀಲ್ ರೇಲಿಂಗ್ ಅಳವಡಿಕೆ. ನಗರಸಭೆಯ ಹಳೆಯ ಕಚೇರಿಯಾದ ಪುಟ್ಟಮ್ಮ ಛತ್ರವನ್ನು ನವೀಕರಣಗೊಳಿಸಿ ಮದುವೆ ಮಂಟಪವನ್ನಾಗಿ ಮಾರ್ಪಡಿಸಿ ಸುಲಭ ದರದಲ್ಲಿ ಶುಭ ಕಾರ್ಯಗಳಿಗೆ ಸಾರ್ವಜನಿಕರ ಉಪಯೋಗಕ್ಕೆ ನೀಡುವುದು. ನಗರದಲ್ಲಿ ಪ್ರತ್ಯೇಕ ಫುಡ್ ಕೋರ್ಟ್ ನಿರ್ಮಾಣ ಯೋಜನೆ, 85 ಕೋಟಿ ರು. ವೆಚ್ಚದಲ್ಲಿ ಪ್ರತಿ ಮನೆಗೆ ದಿನದ 24 ಗಂಟೆ ನೀರು ಒದಗಿಸುವ ಅಮೃತ್ 2.0 ಯೋಜನೆ. 35 ಕೋಟಿ ರು. ವೆಚ್ಚದಲ್ಲಿ ನಗರದಲ್ಲಿ ಎಲ್ಲಾ ವಿದ್ಯುತ್ ತಂತಿಗಳ ಬದಲಾಗಿ ಅಂಡರ್‌ ಗ್ರೌಂಡ್ ಯು.ಜಿ ಕೇಬಲ್ ಅಳವಡಿಸುವುದು. ಕೋಟೆ ಮಾರಮ್ಮನ ದೇವಸ್ಥಾನದ ಬಳಿ 2 ಕೋಟಿ ರು.. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವುದು ಎಂದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಐಡಿಎಸ್ಎಮ್‌ಟಿ ಮಳಿಗೆಗಳನ್ನು ಸಂಪೂರ್ಣ ನೆಲಸಮ ಮಾಡಿ ಅದೇ ಜಾಗದಲ್ಲಿ ನೂತನ ಹೈಟೆಕ್ ಮಾರ್ಕೆಟ್ ನಿರ್ಮಾಣ. ಖಾಸಗಿ ಬಸ್ ನಿಲ್ದಾಣ ನವೀಕರಣ, ಜಾಜೀ ಕಟ್ಟೆಯನ್ನು ಉನ್ನತೀಕರಿಸಿ ಸುತ್ತಲೂ ವಾಕಿಂಗ್ ಪಾತ್ ನಿರ್ಮಿಸಿ. ಗಣೇಶ ವಿಸರ್ಜನೆಗೆ ಶಾಶ್ವತವಾಗಿ ಕಲ್ಯಾಣಿ ನಿರ್ಮಾಣ. ಬಿಡಾಡಿ ದನಗಳ ಸ್ಥಳಾಂತರಕ್ಕೆ ಆದ್ಯತೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಎ.ಬಿ.ಸಿ. ಕಾರ್ಯಕ್ರಮ, ಹಂದಿಗಳ ಸ್ಥಳಾಂತರಕ್ಕೆ ಕ್ರಮ, ನಗರದಲ್ಲಿ ಒಳಚರಂಡಿ ಎರಡನೇ ಹಂತದ ಕಾಮಗಾರಿ ಪ್ರಾರಂಭ. ಡೇ ನಲ್ಮ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ನೋಂದಣಿ ಮಾಡಿದ್ದು ಶೀಘ್ರ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಕೊಡಿಸುವುದು. ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸಮ್ರಿನ್ ಖಾನಂ ನಸ್ರುಲ್ಲಾ ಖಾನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್‌, ಪೌರಾಯುಕ್ತ ರುದ್ರೇಶ್, ಲೆಕ್ಕಿಗರು ವಿಶ್ವೇಶ್ವರ್‌ ವೈ.ಎ. ಸೇರಿದಂತೆ ನಗರಸಭಾ ಸದಸ್ಯರು ಹಾಜರಿದ್ದರು.