ಧಾರವಾಡ:

ಜಿಲ್ಲೆಯಾದ್ಯಂತ ಜೂನ್ 30ರಿಂದ ಅ. 7ರ ವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯಲಿದೆ. ಈ ಪರಿಷ್ಕರಣೆಯು ಸುವ್ಯವಸ್ಥಿತವಾಗಿ ಜರುಗಲು ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕಾರ ನೀಡಲು ಜಿಲ್ಲಾ ಚುನಾವಣಾ ಅಧಿಕಾರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮತದಾರರ ಪಟ್ಟಿಯ ಅರ್ಹತಾ ದಿನಾಂಕವನ್ನು ಅ. 1ರ ವರೆಗೆ ನಿಗದಿಪಡಿಸಲಾಗಿದೆ. ಇದೇ ಜೂ. 20ರಿಂದ ಜೂ. 29ರ ವರೆಗೆ ಮತದಾರರ ಪಟ್ಟಿ ತಯಾರಿ, ತರಬೇತಿ ಮತ್ತು ಮುದ್ರಣ ಕಾರ್ಯ ನಡೆಯಲಿದೆ,. ಬಿಎಲ್‌ಒಗಳು ಜೂ. 30ರಿಂದ ಜು. 29ರ ವರೆಗೆ ಮನೆ-ಮನೆಗೆ ಭೇಟಿ ನೀಡುವರು. ಈ ವೇಳೆ ಮತದಾರರು ಅವರಿಗೆ ಮಾಹಿತಿ ಒದಗಿಸಬೇಕು ಎಂದ ಅವರು, ಕರಡು ಮತದಾರರ ಪಟ್ಟಿಯನ್ನು ಆ. 5ರಂದು ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಆ. 5ರಿಂದ ಸೆ. 4ರ ವರೆಗೆ ಕಾಲಾವಕಾಶವಿದೆ. ಅಂತಿಮ ಮತದಾರರ ಪಟ್ಟಿಯನ್ನು ಅ. 7ರಂದು ಪ್ರಕಟಿಸಲಾಗುವುದು ಎಂದರು.

ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಬಿಎಲ್‌ಎಗಳ ನೇಮಕವಾಗಿದ್ದು ಬಾಕಿ ಉಳಿದ ರಾಜಕೀಯ ಪಕ್ಷಗಳು ತಕ್ಷಣ ಬಿಎಲ್‌ಎಗಳ ನೇಮಕಾತಿ ಮಾಡಿದ ಬಗ್ಗೆ ಬಿಎಲ್‌ಎ-2 ನಮೂನೆಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿಗೆ ತಕ್ಷಣ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಇನ್ನು, ಮತದಾರರ ಅನುಕೂಲಕ್ಕಾಗಿ ಜಿಲ್ಲೆಯಾದ್ಯಂತ 509 ಬಿಎಲ್‌ಒ ಸೌಲಭ್ಯ ಕೇಂದ್ರಗಳನ್ನು ಗುರುತಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುವ ಬಿಎಲ್‌ಒಗಳು, ಬಿಎಲ್‌ಒ ಮೇಲ್ವಿಚಾರಕರು ಮತ್ತು ಬಿಎಲ್‌ಎ ಅವರಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಬಗ್ಗೆ ವಿವರವಾದ ತರಬೇತಿ ನೀಡಲು ವಿಧಾನಸಭೆ ಕ್ಷೇತ್ರವಾರು ತರಬೇತಿ ಕಾರ್ಯಾಗಾರ ಸಹ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಎಸ್.ಎನ್. ರುದ್ರೇಶ ( 8277833377) ಅವರನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಈ ವೇಳೆ ಇದ್ದರು.