ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಡೇರಿಯಲ್ಲಿ ಹಾಲು ಸ್ವೀಕರಿಸದೇ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಗೆ ಬೀಗ ಹಾಕಿದ ಹಂಗಾಮಿ ಕಾರ್ಯದರ್ಶಿ ವಿರುದ್ಧ ರೊಚ್ಚಿಗೆದ್ದ ತಾಲೂಕಿನ ಬಳ್ಳೇಕೆರೆ ಗ್ರಾಮಸ್ಥರು ಅರಕೆರೆ ಪೊಲೀಸ್ ಠಾಣೆ ಎದುರು ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದರು.ಹಾಲು ಉತ್ಪಾದಕರು ಸುಮಾರು ತಾಸುಕಾದು ನಂತರ ಅರಕೆರೆ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿ ಹಾಲು ಸ್ವೀಕರಿಸದೆ ಉತ್ಪಾದಕರಿಗೆ ನಷ್ಟ ಮಾಡಿರುವ ಪ್ರಭಾರ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನ್ಮುಲ್ ಅಧ್ಯಕ್ಷ ಬೋರೇಗೌಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಗ್ರಾಮಸ್ಥರು ಉತ್ಪಾದಕರಿಗೆ ಆಗಿರುವ ನಷ್ಟ ಭರಿಸಿ ಕೊಡಬೇಕು ಎಂದು ಆಗ್ರಹಿಸಿದರು.ಸೋಮವಾರ ಸಂಜೆ ಡೇರಿಗೆ ಹಾಲು ತೆಗೆದುಕೊಂಡು ಜನತೆ ಹೋದಾಗ ಹಂಗಾಮಿ ಕಾರ್ಯದರ್ಶಿ ಪ್ರಶಾಂತ್ ಬೀಗ ಹಾಕಿಕೊಂಡು ಹೋಗಿದ್ದರು. ಈ ಬಗ್ಗೆ ಸೂಪರ್ ವೈಸರ್ ವಿಚಾರಿಸಿದಾಗ ಹಾಲು ತೆಗೆದುಕೊಳ್ಳದಂತೆ ಹೇಳಿ ಹೋಗಿದ್ದಾರೆ ಎಂದು ಗ್ರಾಮಸ್ಥರಿಗೆ ಹೇಳಿದ್ದಾಗ ಆಕ್ರೋಶ ವ್ಯಕ್ತಪಡಿಸಿದರು.
ಹಾಲಿಗೆ ನೀರು ಬೆರೆಸುತ್ತಿದ್ದ ಹಂಗಾಮಿ ಕಾರ್ಯದರ್ಶಿ:ಡೇರಿ ಹಂಗಾಮಿ ಕಾರ್ಯದರ್ಶಿ ಹಾಲಿಗೆ ನೀರು ಹಾಕುತ್ತಿದ್ದಾನೆ ಎಂಬ ಗುಮಾನಿಯಿಂದ ಭಾನುವಾರ ರಾತ್ರಿ ಡೇರಿ ಬಳಿ ಹಂಗಾಮಿ ಕಾರ್ಯದರ್ಶಿ ನೀರು ಹಿಡಿದುಕೊಳ್ಳುತ್ತಿದ್ದಾಗ ಗ್ರಾಮಸ್ಥನೊಬ್ಬ ಏಕೆ ನೀರು ಹಿಡಿದುಕೊಳ್ಳುತ್ತಿದ್ದೀಯಾ. ಹಾಲಿಗೆ ನೀರು ಹಾಕಲು ಮುಂದಾಗಿದ್ದೀಯಾ ಎಂದು ಪ್ರಶ್ನಿಸಿ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಮುಂದಾಗಿದ್ದಾನೆ.
ಈ ಸಮಯದಲ್ಲಿ ಇಬ್ಬರಿಗೂ ಗಲಾಟೆಯಾಗಿ ಮೊಬೈಲ್ ಕಸಿದು ಗ್ರಾಮಸ್ಥನ ಮೇಲೆ ಹಲ್ಲೆ ನಡೆಸಿ ಕಂಪ್ಯೂಟರ್ ಉಪಕರಣವನ್ನು ಕಾರ್ಯದರ್ಶಿ ಒಡೆದು ಹಾಕಿ ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ ಎಂದು ತಿಳಿದು ಬಂದಿದೆ.ಸೋಮವಾರ ಬೆಳಗ್ಗೆ ಪುಸ್ತಕದಲ್ಲಿ ಬರೆದುಕೊಂಡು ಹಾಲು ಸ್ವೀಕಾರ ಮಾಡಿದ್ದು, ಆದರೆ, ಸಂಜೆ ಸಮಯದಲ್ಲಿ ಹಾಲು ಸ್ವೀಕಾರ ಮಾಡದೆ ಬೀಗ ಹಾಕಿಕೊಂಡು ಹೋಗಿದ್ದಾನೆ. ಇದರಿಂದ ಹಾಲು ಉತ್ಪಾದಕರಿಗೆ ನಷ್ಟವಾಗಿದೆ ಎಂದು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದು, ಹಾಗಾಗಿ ಹಂಗಾಮಿ ಕಾರ್ಯದರ್ಶಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಈತ ಹಾಲು ಉತ್ಪಾದಕರಿಗೆ ತೊಂದರೆ ಕೊಡುತ್ತಿದ್ದಾನೆ. ಈ ಕೂಡಲೇ ಮನ್ಮುಲ್ ಆಡಳಿತ ಮಂಡಳಿ ಈತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.