ಸಾರಾಂಶ
ಕ್ರೀಡೆಗಳು ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತವೆ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಮೂಡಿಸುತ್ತವೆ.
ಬಳ್ಳಾರಿ: ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯು ಆತಿಥ್ಯ ವಹಿಸಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ದಂತ ವೈದ್ಯರ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಇಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ಶನಿವಾರ ಶುರುಗೊಂಡಿದೆ.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ದಂತ ವೈದ್ಯಕೀಯ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ.ಭರತ್ ಎಸ್.ವಿ., ಕ್ರೀಡೆಗಳು ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತವೆ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಮೂಡಿಸುತ್ತವೆ. ಕ್ರೀಡಾ ಸ್ಫೂರ್ತಿ ಪ್ರತಿಯೊಬ್ಬರಲ್ಲೂ ಇರಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.ನಾಕೌಟ್ ಹಂತದಲ್ಲಿ ಪಂದ್ಯಗಳು ನಡೆಯುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 58 ಕ್ರೀಡಾಪಟುಗಳು ಆಗಮಿಸಿದ್ದಾರೆ. 40 ವರ್ಷಕ್ಕೆ ಕೆಳ ಮಟ್ಟದ ಮತ್ತು ನಂತರದ ಪುರಷ ಮತ್ತು ಮಹಿಳಾ ವಿಭಾಗದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಅಲ್ಲದೆ ಮಿಕ್ಸ್ ಡಬಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಭಾರತೀಯ ದಂತ ಪರಿಷತ್ತಿನ ರಾಜ್ಯ ಸದಸ್ಯ ಡಾ.ಶಿವಶರಣ್ ಶೆಟ್ಟಿ, ರಾಜ್ಯ ಮತ್ತು ರಾಷ್ಟ್ರದ ಮಾಜಿ ಚಾಂಪಿಯನ್ ಡಾ.ರಾಧಿಕ ಆಚಾರ್ಯ, ಸ್ಥಳೀಯ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಎಸ್.ಎಚ್., ಹಿರಿಯ ದಂತ ವೈದ್ಯರಾದ ಡಾ.ಶೇಷಗಿರಿರಾವ್, ಡಾ.ದಿವಾಕರ್ ಎಸ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಸಂಘದ ಜಿಲ್ಲಾಧ್ಯಕ್ಷ ಡಾ. ಮಧುಸೂದನ ರೆಡ್ಡಿ, ಕಾರ್ಯದರ್ಶಿ ಡಾ.ಶ್ರೀಧರ್, ಖಜಾಂಚಿ ಡಾ.ರಾಜೀವ್, ರಾಜ್ಯ ಪ್ರತಿನಿಧಿ ಡಾ. ಮಂಜುನಾಥ, ಬಿಮ್ಸ್ ನಿರ್ದೇಶಕ ಡಾ. ಟಿ. ಗಂಗಾಧರಗೌಡ, ಎಸ್ಪಿ ಶೋಭಾರಾಣಿ ಜೆ.ವಿ, ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಡಾ. ಮಹೇಶ್ಚಂದ್ರ ಕೆ, ಖಜಾಂಚಿ ಡಾ. ಸಂಜಯ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು ವಿಜೇತರಿಗೆ ನಗರದ ಶಾಸಕ ನಾರಾ ಭರತ್ ರೆಡ್ಡಿ ಟ್ರೋಫಿಗಳನ್ನು ವಿತರಿಸಲಿದ್ದಾರೆ.