ಸಮ್ಮೇಳನಗಳು ಹೋಬಳಿ ಮಟ್ಟದಲ್ಲೂ ನಡೆಯಬೇಕು: ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಸ್ವಾಮೀಜಿ

| Published : Mar 26 2024, 01:15 AM IST

ಸಮ್ಮೇಳನಗಳು ಹೋಬಳಿ ಮಟ್ಟದಲ್ಲೂ ನಡೆಯಬೇಕು: ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರದ ಹೆತ್ತೂರಿನಲ್ಲಿ ನಡೆಯುತ್ತಿರುವ ೨೨ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ತೆಂಕಲಗೋಡು ಬೃಹನ್ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮರೋಪಕನ್ನಡಪ್ರಭ ವಾರ್ತೆ ಸಕಲೇಶಪುರ

ಜಿಲ್ಲಾಮಟ್ಟದ ಸಮಾರಂಭಗಳು ಹೋಬಳಿಯ ಮಟ್ಟದಲ್ಲಿ ನಡೆದಾಗ ಸಮ್ಮೇಳನದ ಸದಾಶಯ ಸಂಪೂರ್ಣವಾಗಲಿದೆ ಎಂದು ತೆಂಕಲಗೋಡು ಬೃಹನ್ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹೆತ್ತೂರಿನಲ್ಲಿ ನಡೆಯುತ್ತಿರುವ ೨೨ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಮಾತನಾಡಿ, ‘ಮನುಷ್ಯ ಸಂಸ್ಕಾರವಂತ ಆಗಬೇಕಾದರೆ ಸಾಹಿತ್ಯ ಅತ್ಯಗತ್ಯ. ಶಿಕ್ಷಣವಿಲ್ಲದ ವ್ಯಕ್ತಿ ಸಾಧನೆ ಮಾಡಲು ಕಷ್ಟವಾಗಲಿದೆ. ಸಾಹಿತ್ಯಕ್ಕಿರುವ ಪ್ರಭಾವ ವರ್ಣಿಸಲು ಅಸಾಧ್ಯ. ಸಾಹಿತ್ಯ ಸಮಾಜವನ್ನು ತಿದ್ದುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತಿದೆ. ಸಾಹಿತ್ಯ ಸಮ್ಮೇಳನಗಳು ಕನ್ನಡ ಸಮೃದ್ಧಿಗಾಗಿ ಹಲವು ತಲೆಮಾರುಗಳಿಂದ ಹೋರಾಟ ನಡೆಸುತ್ತಿವೆ. ಪರಿಷತ್‌ನ ಉದ್ದೇಶ ಈಡೇರಬೇಕಾದರೆ ಜನಸಾಮಾನ್ಯರ ಸಹಕಾರ ಅತ್ಯಗತ್ಯ. ಕನ್ನಡ ಭಾಷೆ ಮಾತನಾಡಲು ಹಿಂಜರಿಕೆ ಬೇಡ, ಜಗತ್ತಿನ ಅತ್ಯಂತ ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಒಂದು. ನಮ್ಮ ಭಾಷೆಗಾಗಿ ನಮ್ಮ ನಾಡಿನಲ್ಲೆ ಹೋರಾಟ ನಡೆಸಬೇಕಿರುವುದು ದುರದೃಷ್ಟಕರ. ಪ್ರತಿಯೊಬ್ಬ ಕನ್ನಡಿಗ ನಾಡು, ನುಡಿ, ಜಲಕ್ಕಾಗಿ ಹೋರಾಟ ಮಾಡಬೇಕು. ಸಾಹಿತ್ಯದ ಕೆಲಸವೆಂದರೆ ಶಾಶ್ವತ ಕೆಲಸ, ಇದನ್ನು ಮನಗಂಡು ಕೆಲಸ ಮಾಡಬೇಕು’ ಎಂದು ಹೇಳಿದರು.

ವಾಗ್ಮಿ ಪ್ರೊ.ಕೃಷ್ಣೆಗೌಡ ಮಾತನಾಡಿ, ‘ಸಾಹಿತ್ಯದ ಮೂಲ ಉದ್ದೇಶ ಜನರನ್ನು ಆನಂದದಲ್ಲಿಡುವುದಾಗಿದೆ. ನಮ್ಮಲ್ಲಿ ಏನೇ ಕೊರತೆ ಇದ್ದರೂ ಆನಂದದಲ್ಲಿರಬೇಕು. ಇದು ಸಾಹಿತ್ಯದ ಮೂಲ ಉದ್ದೇಶ. ಸದ್ಯ ಇಂದಿನ ಸಾಹಿತ್ಯದ ಉದ್ದೇಶ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದಾಗಿದೆ. ಸಾಹಿತಿಗಳು ಇಂದು ನೈತಿಕತೆ ಕಳೆದುಕೊಂಡಿದ್ದು ಬಹುತೇಕ ವಿಧಾನಸೌಧದ ಸುತ್ತಲೂ ಗಿರಿಕಿ ಹೊಡೆಯುತ್ತಿದ್ದಾರೆ. ಇಂತಹವರ ಮಧ್ಯೆ ಕೆಲವೇ ಸಾಹಿತಿಗಳು ಮಾತ್ರ ನೈತಿಕತೆ ಉಳಿಸಿಕೊಂಡಿದ್ದಾರೆ. ಆದರೆ, ಇಂದಿಗೂ ಸಾಹಿತಿಗಳಿಂದ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆಗಳನ್ನು ಇಂದಿಗೂ ಇಟ್ಟುಕೊಂಡಿದ್ದಾರೆ’ ಎಂದರು.

ಕರ್ನಾಟಕದ ಸಾಹಿತಿಗಳಲ್ಲಿ ಎಡ, ಬಲ ಎಂಬ ಧೋರಣೆ ಬೆಳಸಿಕೊಂಡಿದ್ದು ಒಬ್ಬರ ಮುಖ ಒಬ್ಬರು ನೋಡದ ಸ್ಥಿತಿ ತಲುಪಿದ್ದಾರೆ. ಸ್ವಂತಕ್ಕಾಗಿ ಸಾಹಿತ್ಯವನ್ನೆ ಮುಳುಗಿಸಲು ಹೋರಾಟಿದ್ದಾರೆ. ಇಂತಹವರ ಕೈಗೆ ಸಿಲುಕಿ ಕನ್ನಡ ಅವಸಾನದ ಅಂಚಿಗೆ ತಲುಪುತ್ತಿದೆ. ಎಂದರು.

ಪ್ರತಿಭೆಗಳ ಮೂಲಕ ಜನರನ್ನು ಗೌರವಿಸುವ ಕಾಲ ಬದಲಾಗಿದ್ದು ಹಣದ ಮೂಲಕ ಯೋಗ್ಯತೆ ಆಳೆಯುವ ಕೆಲಸ ಮಾಡಲಾಗುತ್ತಿದೆ. ಇದು ಕೆಟ್ಟ ಸಮಾಜದ ಒಂದು ಮುಖ. ಕವಿ, ಕಲಾವಿದರಿಗೆ ಮಾತ್ರ ಸುಳ್ಳು ಹೇಳಲು ಸಾಧ್ಯ. ಇವರನ್ನು ಸಾಮಾನ್ಯವಾಗಿ ಜನರು ಪ್ರಶ್ನಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷ ರವಿಹತ್ತೂರು, ನಿವೃತ್ತ ಕೃಷಿ ವಿಜ್ಞಾನಿ ಸುದರ್ಶನ್, ಕೆ.ಆರ್.ಮಲ್ಲೇಶ್‌ಗೌಡ ಉಪಸ್ಥಿತರಿದ್ದರು.ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ ಅವರನ್ನು ಸಕಲೇಶಪುರದ ಹೆತ್ತೂರಿನಲ್ಲಿ ನಡೆಯುತ್ತಿರುವ ೨೨ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು