ಗೆಲ್ಲುವ ವಿಶ್ವಾಸ ಇದೆ: ಯದುವೀರ್‌ ಒಡೆಯರ್‌

| Published : Mar 16 2024, 01:50 AM IST

ಸಾರಾಂಶ

ಚುನಾವಣೆಗೆ ಬಂದರೆ ಸಾರ್ವಜನಿಕ ಜೀವನಕ್ಕೆ ಬಂದ ಅರ್ಥ. ಈಗಾಗಲೇ ನಾನು ಚುನಾವಣೆಗೆ ಸಜ್ಜಾಗಿದ್ದೇನೆ. 9 ವರ್ಷಗಳ ಹಿಂದೆಯೇ ರಾಜಕೀಯಕ್ಕೆ ಬರಬೇಕು ಅಂದುಕೊಂಡಿದ್ದೆ. ಕಳೆದ ಒಂದು ವರ್ಷದ ಹಿಂದೆ ತಯಾರಿ ಮಾಡಿಕೊಂಡಿದ್ದೆ ಎಂದು ಕೊಡಗು ಮೈಸೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ತನಗೆ ಕೊಡಗು ಹಾಗೂ ಮೈಸೂರಿನಲ್ಲಿ ಉತ್ತಮ ಸ್ಪಂದನೆ ದೊರಕಿದ್ದು, ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಮಾಡಿಕೊಡುತ್ತಾರೆಂಬ ವಿಶ್ವಾಸ ಇದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಬಂದರೆ ಸಾರ್ವಜನಿಕ ಜೀವನಕ್ಕೆ ಬಂದ ಅರ್ಥ. ಈಗಾಗಲೇ ನಾನು ಚುನಾವಣೆಗೆ ಸಜ್ಜಾಗಿದ್ದೇನೆ. 9 ವರ್ಷಗಳ ಹಿಂದೆಯೇ ರಾಜಕೀಯಕ್ಕೆ ಬರಬೇಕು ಅಂದುಕೊಂಡಿದ್ದೆ. ಕಳೆದ ಒಂದು ವರ್ಷದ ಹಿಂದೆ ತಯಾರಿ ಮಾಡಿಕೊಂಡಿದ್ದೆ ಎಂದರು.ಕೊಡಗಿನಲ್ಲಿ ಪರಿಸರ ಪೂರಕ ಅಭಿವೃದ್ಧಿ ಮಾಡಬೇಕು. ಕಾಫಿ, ಕೃಷಿ ಕ್ಷೇತ್ರದಲ್ಲಿನ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇನೆ ಎಂದರು. ಟಿಕೆಟ್ ಘೋಷಣೆಯಾದ ಸಂದರ್ಭ ಸಂಸದ ಪ್ರತಾಪ ಸಿಂಹ ಅವರು ಕರೆ ಮಾಡಿ ಶುಭ ಕೋರಿದ್ದಾರೆ. ಅವರು ಕೂಡ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಕೂಡ ಉತ್ತಮ ಅಭಿವೃದ್ಧಿ ಕೆಲಸ ಮಾಡಲು ಸಿದ್ಧನಿರುವುದಾಗಿ ತಿಳಿಸಿದರು.ಮಾಜಿ ಸಚಿವ ರಾಮದಾಸ್, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮತ್ತಿತರರು ಹಾಜರಿದ್ದರು.

9 ವರ್ಷಗಳಿಂದ ಕೊಡಗು ಜಿಲ್ಲೆ ಸಂಪರ್ಕ: ಯದುವೀರ್‌ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಕಾಳಜಿ ಇಟ್ಟುಕೊಂಡು ಹಲವು ಯೋಜನೆ ರೂಪಿಸುವ ಆಶಯ ಇದೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಮಡಿಕೇರಿ ತೆರಳುವ ಮಾರ್ಗದಲ್ಲಿ ಕುಶಾಲನಗರ ಗಡಿಭಾಗದ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 9 ವರ್ಷಗಳಿಂದ ತನಗೆ ಕ್ಷೇತ್ರದ, ಅದರಲ್ಲಿಯೂ ಕೊಡಗು ಜಿಲ್ಲೆಯ ಸಂಪರ್ಕ ಇರುವುದಾಗಿ ಹೇಳಿದರು.

ನಾಡಿನ ಜನತೆ ಮತದಾರರ ಪ್ರೀತಿ ಒಲವು ವಿಶ್ವಾಸ ನನ್ನ ಮೇಲಿದೆ. ಈ ಬಾರಿ ಬಿಜೆಪಿ ಹೈಕಮಾಂಡ್ ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದಿಂದ ಅವಕಾಶ ಕಲ್ಪಿಸಿದೆ, ಜನರ ಬೆಂಬಲ ದೊರೆಯಲಿದೆ ಎಂದು ಅವರು. ಜಿಲ್ಲೆಯಲ್ಲಿ ನದಿ ಸಂರಕ್ಷಣೆ , ವನ್ಯಜೀವಿ ಮಾನವ ಸಂಘರ್ಷ ಈ ಬಗ್ಗೆ ತಜ್ಞರ ಸಲಹೆಯೊಂದಿಗೆ ಅಭಿಪ್ರಾಯ ಪಡೆದು ಅಗತ್ಯವಿರುವ ಯೋಜನೆ ರೂಪಿಸುವ ಭರವಸೆ ವ್ಯಕ್ತಪಡಿಸಿದರು.ರಾಜಮನೆತನದಲ್ಲಿ ಹಿರಿಯರ ಆಶೀರ್ವಾದ ಜೊತೆಗೆ ಕೆಲಸ ಮಾಡಿದ ಅನುಭವದೊಂದಿಗೆ, ಇದೀಗ ರಾಜಕೀಯ ಕ್ಷೇತ್ರದಲ್ಲಿ ಜನರ ಸೇವೆ ಮಾಡುವ ಅವಕಾಶ ಲಭಿಸಿದೆ ಎಂದು ಅವರು ಹೇಳಿದರು.

ಎರಡೂ ಜಿಲ್ಲೆಗಳಲ್ಲಿ ಪರಿಸರ ಕಾಳಜಿಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಕೂಡ ಚಿಂತನೆ ಇರುವುದಾಗಿ ಅವರು ಹೇಳಿದರು.