ಸಾರಾಂಶ
ಮೈಸೂರು ವಿಶ್ವವಿದ್ಯಾಲಯ, ಕೆಎಸ್ಒಯು ವತಿಯಿಂದ ಜಿಲ್ಲೆಯ ಕೆಲವೇ ಕೆಲವು ಗಣ್ಯರಿಗಷ್ಟೇ ಗೌರವ ಡಾಕ್ಟರೇಟ್ ಲಭಿಸಿದೆ. ಇದರಲ್ಲಿ ಮೀರಾ ಶಿವಲಿಂಗಯ್ಯ ಒಬ್ಬರಾಗಿದ್ದಾರೆ. ಆದರೆ, ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರೂ ಕೂಡ ಗೌರವ ಡಾಕ್ಟರೇಟ್ಗೆ ಅರ್ಹರಾಗಿದ್ದರು. ಅವರಿಗೆ ಡಾಕ್ಟರೇಟ್ ಲಭಿಸದಿರುವುದು ಬೇಸರದ ಸಂಗತಿ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಮುಕ್ತ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರಿಗೆ ಕರ್ನಾಟಕ ಸಂಘದಿಂದ ಮೇ 10ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅವರನ್ನು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಅಭಿನಂದಿಸುವರು ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಭಿನಂದನಾ ಭಾಷಣ ಮಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ, ಎಸ್.ಬಿ.ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಭಾಗವಹಿಸುವರು ಎಂದರು.ಶಿಕ್ಷಣ, ಸಾಹಿತ್ಯ, ಸಮಾಜಸೇವೆ, ಉದ್ಯಮ, ಸ್ವಯಂ ಸೇವಾ ಸಂಸ್ಥೆಗಳು, ಹೀಗೆ ಹಲವು ಕ್ಷೇತ್ರದಲ್ಲಿ ಡಾ.ಮೀರಾ ಶಿವಲಿಂಗಯ್ಯ ಕೆಲಸ ಮಾಡಿದ್ದಾರೆ. ಮಂಡ್ಯ ನಗರಕ್ಕೆ ಮೊಟ್ಟ ಮೊದಲ ಬಾರಿಗೆ ಕಂಪ್ಯೂಟರ್ ಪರಿಚಯಿಸಿ ಜಿಲ್ಲೆಯ ಯುವಜನರಿಗೆ ಕಂಪ್ಯೂಟರ್ ಶಿಕ್ಷಣ ನೀಡಿದ ಹೆಗ್ಗಳಿಕೆ ಇವರದು. ಜೊತೆಗೆ ಆಪ್ಸೆಟ್ ಮುದ್ರಣ ಯಂತ್ರವನ್ನೂ ಸಹ ಪರಿಚಯಿಸಿದ್ದಾರೆ. ಇವರ ಸೇವೆ ಪರಿಗಣಿಸಿ ಕೆಎಸ್ಒಯು ಗೌರವ ಡಾಕ್ಟರೇಟ್ ನೀಡಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯ, ಕೆಎಸ್ಒಯು ವತಿಯಿಂದ ಜಿಲ್ಲೆಯ ಕೆಲವೇ ಕೆಲವು ಗಣ್ಯರಿಗಷ್ಟೇ ಗೌರವ ಡಾಕ್ಟರೇಟ್ ಲಭಿಸಿದೆ. ಇದರಲ್ಲಿ ಮೀರಾ ಶಿವಲಿಂಗಯ್ಯ ಒಬ್ಬರಾಗಿದ್ದಾರೆ. ಆದರೆ, ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರೂ ಕೂಡ ಗೌರವ ಡಾಕ್ಟರೇಟ್ಗೆ ಅರ್ಹರಾಗಿದ್ದರು. ಅವರಿಗೆ ಡಾಕ್ಟರೇಟ್ ಲಭಿಸದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಎಚ್.ಡಿ. ಸೋಮಶೇಖರ್, ನಿರ್ದೇಶಕಿ ವಿಜಯಲಕ್ಷ್ಮಿ ರಘುನಂದನ್ ಇದ್ದರು.