ಸಾರಾಂಶ
ಲಕ್ಷಾಂತರ ಅಭಿಮಾನಿಗಳು ಏಕಾಏಕಿ ಬಂದ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸಲು ಸಾಧ್ಯವಾಗದೇ 11 ಜನ ಅಮಾಯಕರು ಮೃತಪಟ್ಟಿದ್ದಾರೆ
ಧಾರವಾಡ: ಐಪಿಎಲ್ನಲ್ಲಿ ಆರ್ಸಿಬಿ ಗೆಲುವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಿಸಲು ಹೋಗಿ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಹೊರಬೇಕೆಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿತು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇದಿಕೆ ಪದಾಧಿಕಾರಿಗಳು, ತರಾತುರಿಯಲ್ಲಿ ಸಂಭ್ರಮಾಚರಣೆ ಆಯೋಜನೆ ಮಾಡಿದ ರಾಜ್ಯ ಸರ್ಕಾರ ಬೇಕಾದ ತಯಾರಿ ತೆಗೆದುಕೊಳ್ಳಲಿಲ್ಲ. ಲಕ್ಷಾಂತರ ಅಭಿಮಾನಿಗಳು ಏಕಾಏಕಿ ಬಂದ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸಲು ಸಾಧ್ಯವಾಗದೇ 11 ಜನ ಅಮಾಯಕರು ಮೃತಪಟ್ಟಿದ್ದಾರೆ. ಈ ಜೀವ ಹಾನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇರ ಹೊಣೆ. ರಾಜಕೀಯ ಲಾಭಕ್ಕಾಗಿ ಈ ಕಾರ್ಯ ಮಾಡಿ ರಾಜ್ಯದ ಗೌರವ ಸಹ ಕಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.ತಾವು ಮಾಡಿದ ತಪ್ಪನ್ನು ಪೊಲೀಸ ಇಲಾಖೆ ಮೇಲೆ ಹಾಕಿ ಹಿರಿಯ ಅಧಿಕಾರಿಗಳ ತಲೆದಂಡ ಆಗಿರುವುದು ತಪ್ಪು. ಘಟನೆ ನಡೆಯಲು ನೇರ ಕಾರಣ ಕಾಂಗ್ರೆಸ್ ಸರ್ಕಾರವಾಗಿದ್ದು, ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೋಹನ ರಾಮದುರ್ಗ, ರಾಜೇಶ ಚಾಂದಗುಡೆ, ಭೀಮು ಸವನೂರ, ಸಿದ್ದು ಕಮ್ಮಾರ, ನಾರಾಯಣ ನಾರಾಯಣಕರ, ನಾಗರಾಜ ಹಂಗಳಕಿ, ಶಿವು ಹೂಗಾರ, ಮಾರುತಿ ವಡ್ಡರ, ವಿಕ್ರಮ ಶಿಕ್ಕಲಗಾರ, ವೀರಪಕ್ಷಪ್ಪ ಮರಗಲ್ಲ, ಎಸ್.ಎಸ್. ಅಂಗಡಿ, ಸಂಜಯ ಸಾಲಿಮಠ, ಸುಜಲ್ ಸವನೂರ ಇದ್ದರು.