ಸಾರಾಂಶ
- ನನಗೆ ಟಿಕೆಟ್ ನೀಡುವ ಬಗ್ಗೆ ದೆಹಲಿಯಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷರು ಮಾತನಾಡಿದ್ದು ಗೊತ್ತಿಲ್ವೇ?- - -
ದಾವಣಗೆರೆ: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ, ಪಕ್ಷ ವಿರೋಧಿ ಚಟುವಟಿಕೆ ನಿಲ್ಲಿಸದಿದ್ದರೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಹೇಳಿರುವ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ರಾಜ್ಯ ಔಟ್ ರೀಚ್ ಘಟಕ ಉಪಾಧ್ಯಕ್ಷ ಜಿ.ಬಿ.ವಿನಯಕುಮಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ದಾವಣಗೆರೆ ಲೋಕಸಭೆ ಟಿಕೆಟ್ ನೀಡುವ ವಿಚಾರವಾಗಿ ದೆಹಲಿಯಲ್ಲಿ ಎಐಸಿಸಿ ಮಟ್ಟದಲ್ಲಿ ನನ್ನ ಹೆಸರು ಚರ್ಚೆಯಾಗಿದೆ. ಸುಮಾರು 25 ನಿಮಿಷ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಹ ನನ್ನ ಹೆಸರು ಪ್ರಸ್ತಾಪಿಸಿದ್ದನ್ನು ಜಿಲ್ಲಾಧ್ಯಕ್ಷ ಮಂಜಪ್ಪ ಅವರಿಗೆ ಅರಿವಿದ್ದಂತಿಲ್ಲ ಎಂದು ತಿಳಿಸಿದ್ದಾರೆ.
ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದಿದ್ದು, ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ರಾಜ್ಯ ಔಟ್ರೀಚ್ ಘಟಕ ಉಪಾಧ್ಯಕ್ಷನಿದ್ದೇನೆ, ಘಟಕದ ರಾಷ್ಟ್ರೀಯ ಅಧ್ಯಕ್ಷ ಚಾಂಡಿ ಊಮನ್ ನನ್ನನ್ನು ನೇಮಕ ಮಾಡಿದ್ದಾರೆ. ಚಾಂಡಿ ಊಮನ್ ಕಾಂಗ್ರೆಸ್ ಪಕ್ಷದವರಲ್ಲವೇ ಮಂಜಪ್ಪನವರೇ ಎಂದು ಪ್ರಶ್ನಿಸಿದ್ದಾರೆ.ಯಾರೂ ಅಹಿಂದ ನಾಯಕನಾಗಿ ಬೆಳೆಯಬಾರದೆಂಬ ಕಾರಣಕ್ಕೆ ಮಂಜಪ್ಪನವರಿಂದ ಇಂತಹ ಹೇಳಿಕೆ ಕೊಡಿಸಲಾಗಿದೆ. ವಿನಾಕಾರಣ ಅಹಿಂದ ಸಮುದಾಯದಲ್ಲಿ ಗೊಂದಲ ಮೂಡಿಸುವಂತಹ ಮಾತುಗಳನ್ನು ಮಂಜಪ್ಪ ಆಡಬಾರದು. ಇಡೀ ದಾವಣಗೆರೆ ಕ್ಷೇತ್ರಾದ್ಯಂತ ಕಾಂಗ್ರೆಸ್ ಪರವಾಗಿ ಓಡಾಡಿದ್ದೇನೆ. ಎಲ್ಲ ಕಡೆಯಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಹಿರಂಗವಾಗಿ ಹೇಳದಿದ್ದರೂ ನನಗೆ ಬೆಂಬಲ ನೀಡುವ ಭರವಸೆ ನೀಡುತ್ತಿದ್ದಾರೆ. ಇದನ್ನೆಲ್ಲಾ ಮಂಜಪ್ಪನವರು ಸಂಪೂರ್ಣವಾಗಿ ಮಾಹಿತಿ ಪಡೆದು, ಆನಂತರ ನನ್ನ ಬಗ್ಗೆ ಮಾತನಾಡಲಿ ಎಂದಿದ್ದಾರೆ.
- - --2ಕೆಡಿವಿಜಿ3: ಜಿ.ಬಿ.ವಿನಯಕುಮಾರ