ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮದ್ದೂರಿನಲ್ಲಿ ಶ್ರೀ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದರೂ ಮುಸ್ಲಿಮರ ಪರ ಕಾಂಗ್ರೆಸ್ಸಿಗರು ಮಾತನಾಡುತ್ತ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮೆಚ್ಚಿಸಲು ಹಿಂದೂಗಳ ಮೇಲೆಯೇ ಆರೋಪಗಳ ಪಟ್ಟಿ ಹೊರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಪ ಸದಸ್ಯ ಡಿ.ಎಸ್.ಅರುಣ ವ್ಯಂಗ್ಯವಾಡಿದರು.ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮದ್ದೂರು ಕಲ್ಲು ತೂರಾಟದಲ್ಲಿ ಸಂತ್ರಸ್ತರಾದ ಬಹುಸಂಖ್ಯಾತ ಹಿಂದೂಗಳ ಪರ ಮಾತನಾಡದ ಕಾಂಗ್ರೆಸ್ಸಿಗರ ಮುಸ್ಲಿಮರ ಓಲೈಕೆ ದಿನಕ್ಕೂ ಹೆಚ್ಚುತ್ತಿದೆ. ವ್ಯವಸ್ಥಿತ ಸಂಚು ಮಾಡಿಯೇ ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆದಿದ್ದರೂ, ವಿಷಯಾಂತರ ಮಾಡಲು ಹಿಂದೂಗಳ ಮೇಲೆ ಕಾಂಗ್ರೆಸ್ಸಿಗರು ಆರೋಪ ಮಾಡುತ್ತಾರೆ ಎಂದರು.
ಕಲ್ಲು ತೂರಾಟ ಮಾಡಿದವರು, ಅಪಪ್ರಚಾರ ಮಾಡಿದವರ ವಿರುದ್ಧ ಧ್ವನಿ ಎತ್ತಿದರೆ ಅಂತಹವರ ವಿರುದ್ಧವೇ ಕೇಸ್ ದಾಖಲಿಸುವ, ಬಂಧಿಸುವ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಕಾಂಗ್ರೆಸ್ಸಿನ ಮುಸ್ಲಿಂ ಓಲೈಸುವ ಜೀನ್ಸ್ ಬಂದಿದೆ. ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ವಿಚಾರದಲ್ಲೂ ಹಾಗೆಯೇ ಮಾಡಿದರು. ಕಡೆಗೆ ತಮ್ಮ ತಲೆ ಹೋಗುತ್ತದೆಂದಾಗ ಶ್ರೀ ಚಾಮುಂಡಿ ಬೆಟ್ಟದ ವಿಚಾರವನ್ನು ಮುನ್ನೆಲೆಗೆ ತಂದು, ದಸರಾ ಉದ್ಘಾಟನೆ ವಿಚಾರ ತಂದರು ಎಂದು ದೂರಿದರು.ಭದ್ರಾವತಿಯಲ್ಲಿ ಪಾಕಿಸ್ತಾನದ ಪರ ಜಯಘೋಷ ಕೂಗಲಾಗಿದೆ. ವಿಧಾನಸೌಧ ಅಂಗಳದಲ್ಲೇ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಸಾಕ್ಷ್ಯಾಧಾರ ಇದ್ದರೂ ಕೇಸ್ ಕೈಬಿಟ್ಟವರು ಕಾಂಗ್ರೆಸ್ಸಿಗರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಮನೆ, ಪೊಲೀಸ್ ಠಾಣೆ, ಸಾರ್ವಜನಿಕ ಸ್ವತ್ತುಗಳಿಗೆ ಬೆಂಕಿ ಇಟ್ಟವರು, ಮತಾಂಧರ ಮೇಲಿನ ಕೇಸ್ಗಳನ್ನೇ ಖುಲಾಸೆಗೊಳಿಸಿ, ಮತ್ತಷ್ಟು ಗಲಭೆ ಮಾಡಲು ಕಾಂಗ್ರೆಸ್ ಸರ್ಕಾರ ಆಸ್ಪದ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಇತರರು ಇದ್ದರು. ಬಾಕ್ಸ್....ಮುಂದಿನ ಜನ್ಮವೇಕೆ ಇವಾಗಲೇ ಮುಸ್ಲಿಂ ಆಗಿ ಹೋಗಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಮುಸ್ಲಿಮರಿಂದಲೇ ತಾವು ಗೆದ್ದಿದ್ದು, ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆಂದಿದ್ದು ನಾಚಿಕೆಗೇಡು ಎಂದು ಡಿ.ಎಸ್.ಅರುಣ್ ಕಿಡಿಕಾರಿದರು.
ಹಿಂದೂ ಆಗಿ ಹುಟ್ಟಿ, ಮುಸ್ಲಿಮರ ಓಲೈಕೆಗೆ ಇಂತಹ ಮಟ್ಟಿಕ್ಕಿಳಿದು ಮಾತನಾಡುವ ಮೂಲಕ ಶಾಸಕ ಸಂಗಮೇಶ ಹಿಂದೂ ಧರ್ಮಕ್ಕೆ ಅವಮಾನಿಸಿದ್ದಾರೆ. ತಮ್ಮ ಆಚರಣೆಯನ್ನೇ ಮರೆತು, ಧರ್ಮವನ್ನು ಹೀಯಾಳಿಸುವಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.ಶಾಸಕ ಸಂಗಮೇಶ್ಗೆ ಇದೇ ಕಡೆಯ ಜನ್ಮವೆನಿಸುತ್ತದೆ. ಇಂತಹ ವ್ಯಕ್ತಿ ಮುಸ್ಲಿಂ ಆಗಿ ಮತಾಂತರವಾದರೂ ಯಾಕೆ ಅಂತಾ ಕೇಳುವವರೂ ಇಲ್ಲ. ಮುಂದಿನ ಜನ್ಮದವರೆಗೆ ಯಾಕೆ ಕಾಯುತ್ತೀರಿ, ಸಂಗಮೇಶವರೆ ಇದೇ ಜನ್ಮದಲ್ಲೇ ಮುಸ್ಲಿಂ ಆಗಿ ಹೋಗುವುದಿದ್ದರೆ ಹೋಗಲಿ. ಈಗಾಗಲೇ ಸಂಗಮೇಶ ಬರೆದುಕೊಂಡಿದ್ದಾರೆನಿಸುತ್ತದೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಸೆ.17ರಿಂದ ಮಹಾತ್ಮ ಗಾಂಧಿ-ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನವಾದ ಅ.2ರವರೆಗೆ ಸೇವಾ ಪಾಕ್ಷಿಕವನ್ನು ಬಿಜೆಪಿ ಹಮ್ಮಿಕೊಂಡಿದೆ. ಬೂತ್ ಮಟ್ಟದಲ್ಲಿ ರಕ್ತದಾನ, ಸ್ವಚ್ಛತಾ ಅಭಿಯಾನ, ವಿಚಾರ ಸಂಕಿರಣ, ಚರ್ಚಾಗೋಷ್ಟಿ, ಜಿಲ್ಲಾ ಮಟ್ಟದ ಕಾರ್ಯಾಗಾರ ಸೇರಿದಂತೆ ಅನೇಕ ಸೇವಾ ಚಟುವಟಿಕೆಗಳನ್ನು ದಾವಣಗೆರೆ ನಗರ, ಜಿಲ್ಲೆಯಲ್ಲೂ ಹಮ್ಮಿಕೊಳ್ಳಲಾಗಿದೆ.ಡಿ.ಎಸ್.ಅರುಣ್, ಬಿಜೆಪಿ ವಿಧಾನ ಪರಿಷತ್ ಸದಸ್ಯ