ರಾಜ್ಯದಲ್ಲಿ ಟೀಕಿಸುವುದಕ್ಕಾದ್ರೂ ಕಾಂಗ್ರೆಸ್‌ ಅಸ್ತಿತ್ವದಲ್ಲಿದೆ: ಬಿ.ವೈ.ರಾಘವೇಂದ್ರ

| Published : Apr 17 2024, 01:17 AM IST

ರಾಜ್ಯದಲ್ಲಿ ಟೀಕಿಸುವುದಕ್ಕಾದ್ರೂ ಕಾಂಗ್ರೆಸ್‌ ಅಸ್ತಿತ್ವದಲ್ಲಿದೆ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿ ಪಟ್ಟಣದ ವಿಧ್ಯಧಿರಾಜ ಸಭಾಭವನದಲ್ಲಿ ನಡೆದ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ/ ಭದ್ರಾವತಿಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರಿಗೆ ಶೇ.30 ಮೀಸಲಾತಿಯನ್ನೂ ನೀಡಿದೆ. ದಶಕಗಳಿಂದ ದೇಶದ ಜನರನ್ನು ವಂಚಿಸಿಕೊಂಡು ಬಂದಿದ್ದ ಕಾಂಗ್ರೆಸ್ ಪಕ್ಷ ದೇಶದಿಂದಲೇ ಕಣ್ಮರೆಯಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಟೀಕಿಸಿದರು.ಪಟ್ಟಣದ ವಿದ್ಯಾಧಿರಾಜ ಸಭಾಭವನದಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಳ್ಳು ಘೋಷಣೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಕೊಡುವ ಅಕ್ಕಿಯನ್ನು ಕೊಟ್ಟು ಛಾಪಾ ಕಾಗದ ಬೆಲೆ ಏರಿಕೆ ಮುಂತಾದವುಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಿ ಇನ್ನೊಂದು ಕಡೆಯಿಂದ ಜನರನ್ನು ಶೋಷಣೆ ಮಾಡುತ್ತಿದೆ. ಕೃಷಿ ಸಮ್ಮಾನ್ ಯೋಜನೆಯಲ್ಲಿ 27 ಲಕ್ಷ ರೈತರಿಗೆ 680 ಕೋಟಿ ರು. ಹಣವನ್ನು ನೀಡದೇ ವಂಚಿಸಿದೆ ಎಂದು ಆರೋಪಿಸಿದರು.ಇಂದಿರಾಗಾಂಧಿಯವರ ಆಡಳಿತದಲ್ಲಿ ಹಗರಣವಾಗಿದ್ದ ಪತ್ರಿಕಾ ಸ್ವಾತಂತ್ರ್ಯವನ್ನು ಮುಕ್ತಗೊಳಿಸಿರುವ ಬಿಜೆಪಿ ಪ್ರಸ್ತುತ ಇಡೀ ದೇಶದಲ್ಲಿ ಪತ್ರಿಕಾ ಕ್ಷೇತ್ರ ನಿರ್ಭಿಡೆಯಿಂದ ಮುಕ್ತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿದೆ. ಜನರ ವಿಶ್ವಾಸವನ್ನೇ ಕಳೆದು ಕೊಂಡಿರುವ ಆ ಪಕ್ಷ ದುಸ್ಥಿತಿಯಲ್ಲಿದೆ. ಕರ್ನಾಟಕದಲ್ಲಿ ಟೀಕಿಸುವುದಕ್ಕಾದರೂ ಪಕ್ಷ ಅಸ್ತಿತ್ವದಲ್ಲಿದೆ. ಆದರೆ ದೇಶದ ಬೇರೆ ಭಾಗಗಳಲ್ಲಿ ಅದಕ್ಕೂ ಅವಕಾಶವಿಲ್ಲಾ ಎಂದೂ ಲೇವಡಿ ಮಾಡಿದರು.ಸಂಸದನಾಗಿ ಚುನಾಯಿತನಾಗಿದ್ದರೂ ಓರ್ವ ಗ್ರಾಪಂ ಸದಸ್ಯನಂತೆ ಜನರೊಂದಿಗೆ ಬೆರೆತು ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಪೂರ್ವಜನ್ಮದ ಪುಣ್ಯದಿಂದ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿರುವ ನಾವುಗಳು ಪರಿಸರವನ್ನು ಜೀವಂತವಾಗಿಟ್ಟುಕೊಂಡು ಮುಂದಿನ ಪೀಳಿಗೆ ನಮ್ಮನ್ನು ಅನುಸರಿ ಸುವಂತೆ ಅಭಿವೃದ್ಧಿಯನ್ನು ಸಾಧಿಸಬೇಕಿದೆ ಹೇಳಿದರು.ಉದ್ಯಮ ಪ್ರವಾಸ ಶೈಕ್ಷಣಿಕ ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ಕರಾವಳಿ-ಮಲೆನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎ ಅಭಿವೃದ್ಧಿ ಪಡಿಸುವ ಸಲುವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ ಆಗುಂಬೆ ಘಾಟಿಯಲ್ಲಿ 3000 ಕೋಟಿ ರು.ಗಳ ವೆಚ್ಚದಲ್ಲಿ 12 ಕಿಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಅನುಮತಿ ದೊರೆತಿದ್ದು, ಡಿಪಿಆರ್ ಕೂಡ ಸಿದ್ಧವಾಗಿದೆ. ಈ ಯೋಜನೆಗೆ 2 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದರು.ದೇಶದ ಏಕತೆ ಮತ್ತು ಸಮಗ್ರತೆಯೆ ದೃಷ್ಟಿಯಿಂದ ಆರ್ಟಿಕಲ್ 370ಯನ್ನು ಕಿತ್ತೊಗೆದಿರುವ ನರೇಂದ್ರ ಮೋದಿಯವರು ಭಾರತವನ್ನು ಸೂಪರ್ ಪವರ್ ಆಗಿ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ. ವಿಜ್ಞಾನ ತಂತ್ರಜ್ಞಾನ ಉದ್ಯಮ ಕೃಷಿ ಮುಂತಾದ ಎಲ್ಲ ಕ್ಷೇತ್ರಗಳನ್ನು ಸಶಕ್ತಗೊಳಿಸುವ ಮೂಲಕ ದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ ಎಂದು ಹೇಳಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ 95 ಕೋಟಿ ಮತದಾರರು 10 ಲಕ್ಷ ಮತಗಟ್ಟೆಗಳಲ್ಲಿ ಮುಕ್ತವಾಗಿ ತಮ್ಮ ಹಕ್ಕನ್ನು ಚಲಾಯಿಸುವ ವಾತಾವರಣದ ಸಂಭ್ರಮವನ್ನು ವಿದೇಶಿಗರು ಬೆರಗು ಗಣ್ಣಿನಿಂದ ಗಮನಿಸುತ್ತಿದ್ದಾರೆ ಎಂದೂ ಹೇಳಿದರು.ಆಯುಷ್ಮಾನ್ ಕಾರ್ಡ್ ಯೋಜನೆಯಲ್ಲಿ 2018 ರಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ 2.61 ಲಕ್ಷ ಫಲಾನುಭವಿಗಳಿಗೆ 260 ಕೋಟಿ ರು. ಸೌಲಭ್ಯ ದೊರೆತಿದೆ ಎಂದು ವಿವರಿಸಿದರು.ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸತತವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ದೊರೆಯುತ್ತಿರುವ ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 30 ಸಾವಿರ ಮತಗಳ ಲೀಡ್ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಇನ್ನೂ ಹೆಚ್ಚು ಮತಗಳನ್ನು ಸೆಳೆಯಲು ಕಾರ್ಯಕರ್ತರು ಕೆಲಸ ಮಾಡಬೇಕಿದೆ. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಚುನಾವಣೆ ನಿರ್ಣಾಯಕವಾಗಿದೆ. ಜಗತ್ತು ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೆ ಬಾರಿಗೆ ಪ್ರಧಾನಿಯಾಗುವುದು ಖಚಿತ. ಇದನ್ನು ತಡೆಯಲು ಯಾರಿಂದಲೂ ಅಸಾಧ್ಯ ಎಂದೂ ಹೇಳಿದರು.ವೇದಿಕೆಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್,ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಮಾಜಿ ಶಾಸಕ ಬಿ.ಸ್ವಾಮಿರಾವ್,ಎಸ್.ದತ್ತಾತ್ರಿ, ಬೇಗುವಳ್ಳಿ ಸತೀಶ್, ರಾಜು ತಲ್ಲೂರ್,ಮೇಧೋಳಿಗೆ ರಾಮಸ್ವಾಮಿ,ರಾಘವೇಂದ್ರ ನಾಯಕ್, ಬೇಗುವಳ್ಳಿ ಕವಿರಾಜ್ ಇದ್ದರು.

ಗುರುವಾರ ನಾಮಪತ್ರ ಸಲ್ಲಿಕೆ

ಕಳೆದ 10 ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ತೀರ್ಥಹಳ್ಳಿ ಮತ್ತು ಶಿವಮೊಗ್ಗ ಕ್ಷೇತ್ರಗಳನ್ನು ವಿಮಾನ ನಿಲ್ದಾಣ, ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಸೇತುವೆಗಳು ಹತ್ತು ಹಲವು ಅಭಿವೃದ್ಧಿಗಳ ಯೋಜನೆಗಳ ಮೂಲಕ ಮಾದರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಗುರುವಾರ ನಾಮಪತ್ರ ಸಲ್ಲಿಸುವುದಾಗಿಯೂ ತಿಳಿಸಿದರು.ವಿಕಾಸಿತ ಭಾರತ ನಿರ್ಮಾಣಕ್ಕೆ ಮೋದಿ ಬೆಂಬಲಿಸಿ:

ಬಿ.ವೈ.ರಾಘವೇಂದ್ರ ಮನವಿಭದ್ರಾವತಿ:

ವಿಕಾಸಿತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯನ್ನಾಗಿಸ ಬೇಕೆಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.ಅವರು ಮಂಗಳವಾರ ತಾಲೂಕಿನ ಬಿಆರ್‌ಪಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ದೇಶದ ಎಲ್ಲಾ ವರ್ಗದ ಜನರ ಹಿತಕಾಪಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿ ಗೊಳಿಸಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಮತದಾರರು ಈ ಬಾರಿ ಚುನಾವಣೆಯಲ್ಲೂ ಬೆಂಬಲಿ ಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಪ್ರಮುಖರಾದ ರಘುಪತಿ ಭಟ್, ಎಂ.ಬಿ.ಭಾನುಪ್ರಕಾಶ್, ಶಾರದ ಅಪ್ಪಾಜಿ, ಸಿ. ಮಂಜುಳ, ಎಸ್.ಎಸ್ ಜ್ಯೋತಿ ಪ್ರಕಾಶ್, ಕೂಡ್ಲಿಗೆರೆ ಹಾಲೇಶ್, ಡಿ.ಟಿ ಮೇಘರಾಜ್, ಜಿ. ಧರ್ಮಪ್ರಸಾದ್, ತಿಮ್ಮೇಗೌಡ, ಆರ್. ಕರುಣಾಮೂರ್ತಿ, ಜೆ.ಪಿ ಯೋಗೇಶ್, ಮಂಗೋಟೆ ರುದ್ರೇಶ್, ಎಂ.ಎ ಅಜಿತ್, ಕೆ. ಮಂಜುನಾಥ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.