ಸ್ಥಳೀಯ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿಲ್ಲ

| Published : May 13 2025, 11:45 PM IST

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸ್ಥಳೀಯ ಚುನಾವಣೆ ಮಾಡುವ ತಾಕತ್ತು ಇಲ್ಲ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಕುಟುಕಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸ್ಥಳೀಯ ಚುನಾವಣೆ ಮಾಡುವ ತಾಕತ್ತು ಇಲ್ಲ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಕುಟುಕಿದರು. ತಾಲ್ಲೂಕಿನ ಕಡಬ ಹೋಬಳಿ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಬೆನಕನಗುಂದಿ ಗ್ರಾಮದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾರ್ಯಕರ್ತರನ್ನು ಗುರುತಿಸಿ ಜನಸೇವೆಗೆ ಅವಕಾಶ ನೀಡುವ ಅವಕಾಶ ಇರುವುದು ಸ್ಥಳೀಯ ಚುನಾವಣೆ ಮೂಲಕ ಎಂಬುದು ತಿಳಿದ ವಿಚಾರ. ಆದರೆ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸ್ಥಳೀಯ ಚುನಾವಣೆ ಜಿಪಂ ತಾಪಂ ಹಾಗೂ ಎಪಿಎಂಸಿ ಚುನಾವಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯವಾಗಿ ಒಂದಿಷ್ಟು ಅಭಿವೃದ್ದಿ ಕೆಲಸ ನಡೆಸಲು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅವಶ್ಯವಿದೆ. ಅನುದಾನ ಬಳಸಿ ಸದಸ್ಯರು ಅವರವರ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಸಾರ್ವಜನಿಕರಿಗೂ ಕೊಂಚ ಸಮಾಧಾನ ಬರುತಿತ್ತು. ಕಾರ್ಯಕರ್ತರಿಗೂ ಅವಕಾಶ ಒದಗಿಸುವ ಜಿಪಂ ತಾಪಂ ಚುನಾವಣೆ ಶೀಘ್ರವಾಗಿ ಸರ್ಕಾರ ನಡೆಸಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಯಾವುದೇ ಕಾರಣಕ್ಕೂ ಮಾಡಲು ಬಿಡುವುದಿಲ್ಲ. ಅಧಿಕಾರಿಗಳು ಒತ್ತಡಕ್ಕೆ ಮಣಿದ ಆಗಾಗ್ಗೆ ಬಂದು ನಮ್ಮನ್ನು ಕೆಣುಕುತ್ತಿದ್ದಾರೆ. ಈಗಾಗಲೇ ರೈತರೇ ಬಹಳಷ್ಟು ಬಾರಿ ಕೆಲಸ ನಿಲ್ಲಿಸಿದ್ದಾರೆ. ಹೀಗೆ ಮುಂದುವರೆದರೆ ಉಗ್ರ ಹೋರಾಟಕ್ಕೆ ಸಿದ್ಧರಾಗುತ್ತಾರೆ ಎಂದು ಎಚ್ಚರಿಸಿದ ಅವರು ಪಿಎಂಆರ್ ಯೋಜನೆ ಮೂಲಕ ಕೇಂದ್ರ ಸರ್ಕಾರದ ಯೋಜನೆ ಕೆಲಸ ನಡೆಸಿದ್ದೇವೆ. ರಾಜ್ಯ ಸರ್ಕಾರ ಇನ್ನೂ ಅನುದಾನ ಕೊಡುವುದರಲ್ಲೇ ಇದೆ. ಜನಕ್ಕೆ ಸಮಾಧಾನ ತರಲು ಕೇಂದ್ರ ಸರ್ಕಾರದ ಯೋಜನೆ ಸಹಕಾರ ನೀಡಿದೆ ಎಂದರು. ಕಲ್ಲೂರು ಗ್ರಾಪಂ ಮಾಜಿ ಸದಸ್ಯ ಮಹಮ್ಮದ್ ಯೂಸಫ್ ಮಾತನಾಡಿ ಕಲ್ಲೂರು ಗ್ರಾಮ ಪಂಚಾಯಿತಿ ಮೂಲಕ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಅತ್ಯವಶ್ಯವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ 9 ಲಕ್ಷದಲ್ಲಿ ಸಿದ್ಧವಾಗಿದೆ. ಅಧ್ಯಕ್ಷೆ ಜುಲೇಖಾಬೀ ಅವರ ಅವಧಿಯಲ್ಲಿ ನರೇಗಾ ಯೋಜನೆ ಕೆಲಸ ಸಾಕಷ್ಟು ನಡೆದಿದೆ. ಎರಡು ಹಂತದಲ್ಲಿ ಎರಡು ಕೋಟಿ ಕೆಲಸ ಚಾಲ್ತಿಯಲ್ಲಿದೆ. ಬಾಕ್ಸ್ ಚರಂಡಿ, ರಸ್ತೆ, ಕಾಂಪೌಂಡ್, ಕಟ್ಟೆ ಹೀಗೆ ಅನೇಕ ಕೆಲಸ ನಡೆದಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜುಲೇಖಾಬೀ, ಉಪಾಧ್ಯಕ್ಷೆ ಸುಮಿತ್ರಾ ಶಿವಯ್ಯ, ಸದಸ್ಯರಾದ ಮಂಜುಳಾ, ಶಿವಾನಂದಯ್ಯ, ಮಾಯಣ್ಣ, ಸಿದ್ದರಾಜು, ಲಾವಣ್ಯ, ರಾಜು, ನಾಗರಾಜು, ಚಂದ್ರು, ಮಹಮದ್ ವಾರಿಸ್, ರಾಮಕೃಷ್ಣಯ್ಯ, ಲಕ್ಷ್ಮಣ, ಹನುಮಂತಯ್ಯ, ದೊಡ್ಡ ಹನುಮಯ್ಯ, ಹೋಬಳಿ ಜೆಡಿಎಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ವೀರಣ್ಣಗುಡಿ ರಾಮಣ್ಣ, ಕೃಷ್ಣೇಗೌಡ, ಜಾವೀದ್ ಪಾಷಾ, ಅಶ್ವಕ್ ಪಾಷಾ, ಗುತ್ತಿಗೆದಾರರಾದ ರಾಮಲಿಂಗೇಗೌಡ, ರುದ್ರಪ್ರಸಾದ್, ಎಇಇ ನಟರಾಜ್ ಇತರರು ಇದ್ದರು.