ಕಾಂಗ್ರೆಸ್ ಸರ್ಕಾರ ಯಾವತ್ತಿಗೂ ರೈತಪರ: ಸಚಿವ ಆರ್.ಬಿ. ತಿಮ್ಮಾಪೂರ

| Published : Jun 17 2025, 01:25 AM IST

ಕಾಂಗ್ರೆಸ್ ಸರ್ಕಾರ ಯಾವತ್ತಿಗೂ ರೈತಪರ: ಸಚಿವ ಆರ್.ಬಿ. ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಯಾವತ್ತೂ ರೈತಪರವಾಗಿದೆ. ರೈತರ ಸಮಸ್ಯೆಗಳನ್ನು ಆಲಿಸುತ್ತಾ, ಸಮಸ್ಯೆಗಳಿಗೆ ಸ್ಪಂದಿಸುತ್ತಾ, ರೈತರ ಬೇಕು, ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. ನಾನೂ ಕೂಡಾ ಓರ್ವ ರೈತನ ಮಗನಾಗಿದ್ದು, ರೈತರ ಸಮಸ್ಯೆಗಳೇನು? ಅವರ ನೋವು ನಲಿವುಗಳೇನು ಎಂಬುವುದು ನನಗೆ ಪೂರ್ಣ ಗೊತ್ತಿದೆ. ಹೀಗಾಗಿ ನಾನು ರೈತಪರವಾಗಿದ್ದೇನೆ, ರೈತರ ಬೇಕು-ಬೇಡಿಕೆಗಳ ಈಡೇರಿಸು ವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಯೇ ಮಾಡುತ್ತೇನೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಕಾಂಗ್ರೆಸ್ ಸರ್ಕಾರ ಯಾವತ್ತೂ ರೈತಪರವಾಗಿದೆ. ರೈತರ ಸಮಸ್ಯೆಗಳನ್ನು ಆಲಿಸುತ್ತಾ, ಸಮಸ್ಯೆಗಳಿಗೆ ಸ್ಪಂದಿಸುತ್ತಾ, ರೈತರ ಬೇಕು, ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. ನಾನೂ ಕೂಡಾ ಓರ್ವ ರೈತನ ಮಗನಾಗಿದ್ದು, ರೈತರ ಸಮಸ್ಯೆಗಳೇನು? ಅವರ ನೋವು ನಲಿವುಗಳೇನು ಎಂಬುವುದು ನನಗೆ ಪೂರ್ಣ ಗೊತ್ತಿದೆ. ಹೀಗಾಗಿ ನಾನು ರೈತಪರವಾಗಿದ್ದೇನೆ, ರೈತರ ಬೇಕು-ಬೇಡಿಕೆಗಳ ಈಡೇರಿಸು ವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಯೇ ಮಾಡುತ್ತೇನೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಹಿತರಕ್ಷಣಾ ಸಮಿತಿ ಮುಧೋಳ ಇವರ ಸಹಯೋಗದಲ್ಲಿ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವ ಸಂದರ್ಭದಲ್ಲಿ ಕಬ್ಬಿನ ಏರಿಯಾ ಹಾಗೂ ಕಬ್ಬು ನುರಿಸುವ ಸಾಮರ್ಥ್ಯ ನಿಗದಿಪಡಿಸಿ ಸರ್ಕಾರ ಅನುಮತಿ ನೀಡಿರುತ್ತದೆ. ಆದಾಗ್ಯೂ ಕೆಲವು ಸಕ್ಕರೆ ಕಾರ್ಖಾನೆಯವರು ತಮ್ಮ ಇಷ್ಟದಂತೆ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಳ ಮಾಡಿಕೊಂಡಿದ್ದರಿಂದ ರೈತರು ಮತ್ತು ಕಾರ್ಖಾನೆಯವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಹೇಳಿದರು.

ಕಾರ್ಖಾನೆಯವರು ಸಿಎಸ್ಆರ್ ಫಂಡ್ ನ್ನು ಕಬ್ಬು ಬೆಳೆಗಾರರ ಸಂವಾದ, ಸಂಶೋಧನೆ ಸೇರಿದಂತೆ ಇನ್ನಿತರ ವಿಷಯಗಳ ಚರ್ಚೆಗಳಿಗೆ ಬಳಸಿಕೊಳ್ಳಬೇಕು. ರೈತರು ತಮ್ಮ ಕಬ್ಬು ಬೇಗನೆ ಹೋಗಲಿ ಎಂಬ ಉದ್ದೇಶದಿಂದ ಲಗಾಣಿ ಕೊಡಲು ಆರಂಭಿಸಿದ್ದು, ಒಳ್ಳೆಯ ಬೆಳವಣಿಗೆಯಲ್ಲ. ಕಾರ್ಖಾನೆಯವರು ಮತ್ತು ಕಬ್ಬು ಬೆಳೆಗಾರರು ಸೇರಿಕೊಂಡು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳ ಬೇಕೆಂದರು.

ಸಕ್ಕರೆ ಆಮದು ಮತ್ತು ರಫ್ತು ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ರಾಜ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಇದೆ. ಕಾರಣ ತಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಹೇಳಿ ಫೆಡರೇಶನ್ ಮೂಲಕ ಕಾರ್ಖಾನೆಯವರು ಬ್ಯಾಂಕ್ ತೆರೆದರೆ ರೈತರಿಗೆ ಬೇಗ ಕಬ್ಬಿನ ಬಾಕಿ ನೀಡಲು ಅನುಕೂಲವಾಗಲಿದೆ. 11 ಜನ ರೈತರ ಮೇಲಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ ಎಂದು ಹೇಳಿದರು.

ಗೋದಾವರಿ ಬಯೋರಿಫೈನರೀಸ್ ವತಿಯಿಂದ ಬಾಲಚಂದ್ರ ಭಕ್ಷಿ, ನಿರಾಣಿ ಶುಗರ್ಸ್ ವತಿಯಿಂದ ಸಂಗಮೇಶ ನಿರಾಣಿ ಹಾಗೂ ಇಂಡಿಯನ್ ಕ್ರೇನ್ ಪವರ್ ಲಿ, ಪ್ರಭುಲಿಂಗೇಶ್ವರ ಶುಗರ್ಸ್, ಬೀಳಗಿ ಶುಗರ್ಸ್ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ರೈತ ಮುಖಂಡ ಸುಭಾಷ ಶಿರಬೂರ ರೈತರ ಸಮಸ್ಯೆಗಳ ಕುರಿತು ಮಾತನಾಡಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸಾಂದರ್ಭಿಕವಾಗಿ ಮಾತನಾಡಿದರು.

ಡಾ.ಎಸ್.ಎ. ಗದ್ದನಕೇರಿ ಮಣ್ಣಿನ ಫಲವತ್ತತೆ ಕುರಿತು, ಸುಧೀರ ಕತ್ತಿ ಕಬ್ಬಿನ ಇಳುವರಿ ಹೆಚ್ಚಿಸುವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಶ್ರೀಶೈಲ ಕಂಕನವಾಡಿ, ಸುನಂದಾ ತೇಲಿ,

ಲಕ್ಷ್ಮಣ ಕಳ್ಳೆನ್ನವರ, ಪ್ರಭುಗೌಡ, ಎನ್.ವಿ. ಪಡಿಯಾರ, ಅರುಣಕುಮಾರ, ಬಸವಂತಪ್ಪ ಕಾಂಬಳೆ, ಸುಧೀರ ಕತ್ತಿ, ಅಶೋಕ ಜಿ. ಪಾಟೀಲ ವೇದಿಕೆ ಮೇಲಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಸಹಸ್ರಾರು ರೈತರು ಭಾಗವಹಿಸಿದ್ದರು.