ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗೌರವ ಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೊಳಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರು ಫೆ.1 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಐಟಿಯುಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗೌರವ ಧನ ಹೆಚ್ಚಿಸುವುದಾಗಿ ಕಾಂಗ್ರೆಸ್ ಪಕ್ಷ 6ನೇ ಗ್ಯಾರಂಟಿ ನೀಡಿತ್ತು. ಆದರೆ ಇಲ್ಲಿವರೆಗೆ ಜಾರಿ ಮಾಡದ ಹಿನ್ನೆಲೆಯಲ್ಲಿ ಫೆ.1ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ, ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ನಿವೃತ್ತರಿಗೆ ₹3 ಲಕ್ಷ ಇಡುಗಂಟು ಜಾರಿಗೊಳಿಸಬೇಕು. ಗ್ರಾಚ್ಯುಟಿ ನೀಡಬೇಕು. ಸ್ವಯಂ ನಿವೃತ್ತಿಗೆ ಅವಕಾಶ ನೀಡಿ ₹3 ಲಕ್ಷ ಪರಿಹಾರ ಕೊಡಬೇಕು. ಮೊಟ್ಟೆ ಸರಬರಾಜಿನ ಟೆಂಡರ್ ರದ್ದುಗೊಳಿಸಬೇಕು. ಹಳೆಯ ಮೊಬೈಲ್ ವಾಪಸ್ ಪಡೆದು ಹೊಸ ಮೊಬೈಲ್ ನೀಡಬೇಕು ಎಂದು ಆಗ್ರಹಿಸಿದರು.ಅಂಗನವಾಡಿಗಳ ನಿರ್ವಹಣೆಗೆ ನೀಡುವ ಸಾದ್ವಿಲಾರು ಹಣ ಹೆಚ್ಚಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಖಾಲಿ ಹುದ್ದೆಗಳನ್ನು ಮೂರ್ನಾಲ್ಕು ತಿಂಗಳೊಳಗೆ ಭರ್ತಿ ಮಾಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ನೇಮಕಾತಿ ಮಾಡಿಕೊಳ್ಳುವಾಗ ‘ತಾತ್ಕಾಲಿಕ’ ಎಂಬ ಆದೇಶವನ್ನು ಕೈಬಿಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಹಾಯಕಿಯರನ್ನು ನೇಮಿಸಬೇಕು. ಮೂರು ವರ್ಷದ ಸಮವಸ್ತ್ರ ಬಾಕಿ ಬಿಡುಗಡೆಗೊಳಿಸಬೇಕು.-ಎಂ.ಜಯಮ್ಮ, ಪ್ರಧಾನ ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯರು ಫೆಡರೇಷನ್.