ಮಡಿಕೇರಿಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ

| Published : Apr 07 2025, 12:36 AM IST

ಮಡಿಕೇರಿಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಿಂದ ನಗರದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗಾಂಧಿ ಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಸರ್ಕಲ್ ನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕೃತಿ ದಹಿಸಿದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವಕ್ತಪಡಿಸಿದರು.

ಕೊಡಗಿನ ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ಸಿಗರು ಧಿಕ್ಕಾರ ಘೋಷಣೆ ಕೂಗಿದರು.

ನಗರದ ಗಾಂಧಿ ಮೈದಾನದಲ್ಲಿ ಪ್ರತಿಭಟನಾಕಾರರು ಸಮಾವೇಶಗೊಂಡರು. ಈ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ವಿನಯ್ ಸೋಮಯ್ಯ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಐಟಿ ಸೆಲ್ ನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಅದು ಅವರ ಸ್ವಾತಂತ್ರ್ಯ. ಆದರೆ ಬಿಜೆಪಿಯವರು ಜಿಲ್ಲೆಯ ರಾಜಕಾರಣವನ್ನು ಅತ್ಯಂತ ಕೀಳುಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಆದರೆ ಶನಿವಾರ ಬಿಜೆಪಿ ಮುಖಂಡರು ಶವ ಸಂಸ್ಕಾರಕ್ಕೆ ಬಿಡಲಿಲ್ಲ. ಅವರ ಪೋಷಕರಿಗೆ ಮನವೊಲಿಸಿ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಏನೆಲ್ಲಾ ಮಾತನಾಡಿದ್ದಾರೆ. ಅವರ ಮಾತು ನೋಡಿದರೆ ವಿನಯ್ ಸೋಮಯ್ಯ ಸಾವಿನಿಂದ ಅವರಿಗೆ ನೋವಿಲ್ಲ. ವಿನಯ್ ಸೋಮಯ್ಯ ಸಾವು ಬಿಜೆಪಿಗೆ ಅವಕಾಶವಾ? ಇಲ್ಲ ಇವರೇ ಅವಕಾಶ ಸೃಷ್ಟಿ ಮಾಡಿಕೊಂಡರೇ? ಇದು ತನಿಖೆಯಾಗಬೇಕು ಎಂದು ಎ. ಎಸ್ ಪೊನ್ನಣ್ಣ ವಾಗ್ಧಾಳಿ ನಡೆಸಿದರು.

ವಿನಯ್ ಸೋಮಯ್ಯ ಅವರ ಸಾವನ್ನು ಬಳಸಿ ರಾಜಕಾರಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅವರ ಶವ ತೆಗೆಯಲು ಬಿಟ್ಟಿರಲಿಲ್ಲ. ಶವ ಅವರ ಊರಿಗೆ ಬಂದಾಗ ಯಾರೂ ಅವರೊಂದಿಗೆ ಇರಲಿಲ್ಲ. ಕುಶಾಲನಗರಕ್ಕೆ ಶವ ಬಂದಾಗ ಇವರು ನಾಟಕ ಶುರು ಮಾಡುತ್ತಾರೆ. ಪ್ರತಿಭಟನೆಗೆ ಬಿಜೆಪಿ ರಾಜ್ಯಾಧಕ್ಷ ಬಂದಿದ್ದರು. ಅವರ ಐಟಿ ಸೆಲ್ ನಲ್ಲಿ ಕೆಲಸ ಮಾಡುವ ವಿನಯ್ ಸೋಮಯ್ಯ ಅವರ ಹೆಸರು ಅವರಿಗೆ ಗೊತ್ತಿರಲಿಲ್ಲ.

ಇವರು ರಾಜಕಾರಣ ಮಾಡುವುದಕ್ಕೆ ಬಂದಿದ್ರಾ? ಇಲ್ಲ ಶೋಕಾಚರಣೆಗೆ ಬಂದಿದ್ರಾ? ಎಂದು ಪೊನ್ನಣ್ಣ ಟೀಕಿಸಿದರು.

ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ: ನನ್ನನ್ನು ಘೇರಾವ್ ಮಾಡಿ ಎಂದಿರುವ ಆ ವ್ಯಕ್ತಿ ಬಿಜೆಪಿ ಪಕ್ಷವನ್ನು ಮುಗಿಸುತ್ತಾನೆ. ಆದ್ದರಿಂದ ಆತನನ್ನು ದೂರವಿಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದರು.

ತನ್ನೀರಾ ಮೈನಾ ನನ್ನ ಭಾವನೆಗೆ ಧಕ್ಕೆಯಾಗಿದೆ ಎಂದು ದೂರು ಕೊಟ್ಟಿದ್ದರು.

ಕೊಡವ ಸಾಂಪ್ರದಾಯಿಕ ಉಡುಪು ಧರಿಸಿರುವ ಫೋಟೋವನ್ನು ಶೌಚಾಲಯಕ್ಕೆ ಹಾಕಿದ್ದರು. ಇದರ ವಿರುದ್ಧ ತನ್ನೀರಾ ಮೈನಾ ದೂರು ಕೊಟ್ಟಿದ್ದರು. ಆದರೆ ಅದಕ್ಕೆ ಹೈಕೋರ್ಟ್ ತಡೆ ನೀಡಿತು. ಅದು ಅಲ್ಲಿಗೆ ಮುಗಿಯಿತು. ಆದರೆ ವಿನಯ್ ಸಾವಿಗೆ ಬಿಜೆಪಿಯೇ ಕಾರಣವೆಂದು ಒತ್ತಿ ಹೇಳಿದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಆರ್ . ಅಶೋಕ್ ಜೋಕರ್ಸ್ ಗಳು. ನಾರಾಯಣ ಸ್ವಾಮಿ ತಲೆ ಕೆಟ್ಟ ಹಾಗೆ ಮಾತನಾಡುತ್ತಾರೆ. ವಿನಯ್ ಸೋಮಯ್ಯ ನನ್ನು ಕೊಂದಿದ್ದೆ ಬಿಜೆಪಿಯವರು. ಮೃತನಾಗಿ ಆರು ಗಂಟೆಗಳ ಬಳಿಕ ಡೆತ್ ನೋಟ್ ಮೆಸೇಜ್ ಬಯಲಾಗಿದೆ. ತನಿಖೆಯಿಂದ ಸದ್ಯದಲ್ಲೇ ಸತ್ಯ ಬಯಲಾಗಲಿದೆ ಎಂದರು.

ಪೊನ್ನಣ್ಣ ಮತ್ತು ಮಂತರ್ ಗೌಡ ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.

ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಲಾರದೆ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗು ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿರುವ ಇಬ್ಬರು ಶಾಸಕರ ವಿರುದ್ಧ ಸುಳ್ಳು ಆರೋಪ ಹೊರಿಸಲು ಹವಣಿಸುತ್ತಿರುವ ಬಿಜೆಪಿ ವಿರುದ್ಧ ಪ್ರತಿಭಟಿಸಲಾಗುತ್ತಿದೆ. ಸದ್ಯದಲ್ಲೇ ಘಟನೆಯ ಸತ್ಯಾಂಶ ಹೊರ ಬರಲಿದೆ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಪ್ರಮುಖರಾದ ವೀಣಾ ಅಚ್ಚಯ್ಯ, ಹೆಚ್.ಎಸ್. ಚಂದ್ರಮೌಳಿ, ಸಂಕೇತ್ ಪೂವಯ್ಯ, ಟಿ.ಪಿ.ರಮೇಶ್, ರಾಜೇಶ್ ಯಲ್ಲಪ್ಪ, ಚಂದ್ರಕಲಾ, ವಿ.ಪಿ. ಶಶಿಧರ್, ಲೋಕೇಶ್, ಹಂಸ, ಸೂರಜ್ ಹೊಸೂರು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.