ಕನ್ನಡಪ್ರಭ ವಾರ್ತೆ ಬೆಳಗಾವಿಕಾಂಗ್ರೆಸ್ ಸರ್ಕಾರ ಅಂದು ಕೇವಲ ಒಂದು ರುಪಾಯಿಗೆ ಜಮೀನು ನೀಡಿದ ಫಲವಾಗಿ ಇಂದು ಕೆಎಲ್ಇ ದೊಡ್ಡ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವಾಗಿ‌ ಬೆಳೆದಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಕಾಂಗ್ರೆಸ್ ಸರ್ಕಾರ ಅಂದು ಕೇವಲ ಒಂದು ರುಪಾಯಿಗೆ ಜಮೀನು ನೀಡಿದ ಫಲವಾಗಿ ಇಂದು ಕೆಎಲ್ಇ ದೊಡ್ಡ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯವಾಗಿ‌ ಬೆಳೆದಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ನಗರದ ಕೆಎಲ್ಇ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಮತಯಾಚಿಸಿ ಮಾತನಾಡಿದ ಅವರು, ಬೆಳಗಾವಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು? ಜಗದೀಶ್ ಶೆಟ್ಟರ್ ಕೊಡುಗೆ ಏನು? ಎಂದು ಜನ ತೀರ್ಮಾನಿಸುವರು. ಬೆಳಗಾವಿ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ. ಬೆಳಗಾವಿ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಸಾಮಾಜಿಕ ಜವಾಬ್ದಾರಿ ಅರಿತು ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮೃಣಾಲ್‌ ಇನ್ನೂ ಯುವಕ. ಬೆಳಗಾವಿ ಅಭಿವೃದ್ಧಿಗೆ ತನ್ನದೇ ಕನಸು ಕಟ್ಟಿಕೊಂಡಿದ್ದಾನೆ ಎಂದು ತಿಳಿಸಿದರು.

ಹುಬ್ಬಳ್ಳಿ ಜನರಿಂದ‌ ತಿರಸ್ಕಾರಕ್ಕೆ ಒಳಗಾಗಿರುವ ವ್ಯಕ್ತಿಯನ್ನು ಬೆಳಗಾವಿಯಲ್ಲಿ ಗೆಲ್ಲಿಸುವುದು ಸರಿಯಲ್ಲ. 2 ಬಾರಿ‌ ಸಚಿವರಾಗಿ, ಮುಖ್ಯಮಂತ್ರಿಯಾಗಿ, ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಜಗದೀಶ್ ಶೆಟ್ಟರ್ ಅವರಿಗೆ ಸ್ವಂತ ಶಕ್ತಿ ಎಂಬುವುದೇ‌ ಇಲ್ಲ. ಪ್ರಚಾರಕ್ಕೆ ಹೋದಲೆಲ್ಲ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡುವ ಸಲುವಾಗಿ ಮತ ನೀಡಬೇಕು ಅಂತ ಹೇಳುತ್ತಿದ್ದಾರೆ. ಸ್ವಂತ ಶಕ್ತಿಯೇ ಇಲ್ಲದ ಶೆಟ್ಟರ್ ಅವರಿಂದ ಬೆಳಗಾವಿ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ ಮಾತನಾಡಿ, ದೇಶ‌ ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಆಹಾರ‌ ಭದ್ರತಾ ಕಾಯ್ದೆ ತಂದಿದ್ದು ನಾವು, ಸರ್ಕಾರಿ ಸ್ವಾಮ್ಯದ ಕಂಪನಿಗಳು, ರೈಲ್ವೆ, ಐಐಟಿ ಸೇರಿದಂತೆ ಹಲವು ಕಾಲೇಜು, ವಿಶ್ವವಿದ್ಯಾಲಯಗಳನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾರ್ಗದರ್ಶನದಲ್ಲಿ ರಾಜಕೀಯ ಜೀವನ ಆರಂಭಿಸಿರುವ ಮೃಣಾಲ್‌ ಹೆಬ್ಬಾಳಕರ ಜಿಲ್ಲೆಯ ಭವಿಷ್ಯದ ನಾಯಕನಾಗಿದ್ದು, ಇಂತಹ ಯುವಕನಿಗೊಂದು ಅವಕಾಶ ಕೊಡಿ. ಮೃಣಾಲ್‌ ಹೆಬ್ಬಾಳಕರ ಅವರಿಗೆ ಇನ್ನು 40-50 ವರ್ಷ ರಾಜಕೀಯ ಮಾಡುವ ಹಂಬಲವಿದೆ. ಗೆದ್ದ ಮೇಲೆ ಎಲ್ಲರಿಗೂ ಸ್ಪಂದಿಸುವ ವ್ಯಕ್ತಿ.‌ ತಾಯಿಯಂತೆ ಅಭಿವೃದ್ಧಿ ಬಗ್ಗೆ ಕನಸು ಕಟ್ಟಿಕೊಂಡಿದ್ದಾನೆ ಎಂದು ಹೇಳಿದರು.

ಸಚಿವ ಲಕ್ಷ್ಮೀ ಹೆಬ್ಬಾಳಕರ ಜತೆಗೂಡಿ ಕೆಎಲ್ಇ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು, ಆಯುರ್ವೇದ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ಮತಯಾಚಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಪ್ರೊ.ರಾಜೀವ್ ಗೌಡ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಕೆಎಲ್ಇ ವಿವಿಯ ಆಜೀವ ಸದಸ್ಯ ಡಾ.ವಿ.ಎಸ್. ಸಾಧುನವರ, ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

-----------

ಕೋಟ್‌...

ರಾಜಕಾರಣವನ್ನು ಎಂದಿಗೂ ಟೈಮ್ ಪಾಸ್ ಆಗಿ ನೋಡಿಲ್ಲ. ಜನಸೇವೆಯೇ ನನಗೆ ವೃತ್ತಿ ಇದ್ದಂತೆ‌. ರಾಜಕಾರಣದಲ್ಲಿ ನನ್ನಷ್ಟು ಅವಮಾನ ಎದುರಿಸಿದವರು ಇಲ್ಲ. ಎಲ್ಲವನ್ನೂ ಮೆಟ್ಟಿ ನಿಂತು ಬಂದಿದ್ದೇನೆ. ನಾನು ಯಾವತ್ತೂ ಜಾತಿ‌ ರಾಜಕೀಯ ಮಾಡಿಲ್ಲ. ಅಭಿವೃದ್ಧಿಯೇ ನನ್ನ ಮೂಲ ಮಂತ್ರ.

-ಲಕ್ಷ್ಮೀ ಹೆಬ್ಬಾಳಕರ, ಸಚಿವೆ.

-----------------------

ಬೆಳಗಾವಿ ಕೇವಲ ಮಾತಿಗಷ್ಟೇ 2ನೇ ರಾಜಧಾನಿ ಆಗಬಾರದು. ಅಭಿವೃದ್ಧಿಯಲ್ಲೂ ಜಿಲ್ಲೆ ಬೆಳೆಯಬೇಕು. ಮಹಿಳಾ ಮೀಸಲಾತಿ ಜಾರಿಗೆ ಬಂದರೇ ನಮ್ಮ ಲಕ್ಷ್ಮೀ ಮೇಡಂ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವು ಬರಲಿದೆ.

-ಪ್ರದೀಪ ಈಶ್ವರ, ಚಿಕ್ಕಬಳ್ಳಾಪುರ ಶಾಸಕ.