ಬಿಎಸ್ವೈ ಅಭಿಮಾನೋತ್ಸವದ ಹಿನ್ನಲೆ ಮಂಗಳವಾರ ಇಲ್ಲಿನ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾದ ಮಾದಿಗ ಸಮುದಾಯದ ಸಭೆಯನ್ನು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಳ ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ಪರಿಶಿಷ್ಟರನ್ನು ಕಾಂಗ್ರೆಸ್ ಪಕ್ಷ ಹಾದಿ ತಪ್ಪಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಆರೋಪಿಸಿದರು.ಬಿಎಸ್ವೈ ಅಭಿಮಾನೋತ್ಸವದ ಹಿನ್ನಲೆ ಮಂಗಳವಾರ ಇಲ್ಲಿನ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾದ ಮಾದಿಗ ಸಮುದಾಯದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಂದೆಡೆ ದಲಿತರ ತುಳಿದರೆ ಸಚಿವ ಮಹದೇವಪ್ಪ ರೋಸ್ಟರ್ ಪದ್ಧತಿಗೆ ಬೆಂಕಿ ಇಟ್ಟರು. ಕೋರ್ಟ್ ಆದೇಶ ಧಿಕ್ಕರಿಸಿ ಒಳ ಮೀಸಲಾತಿಯ ದಿಕ್ಕು ತಪ್ಪಿಸಿದರೆಂದು ದೂರಿದರು.
ಕರುನಾಡಿಗೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಗ್ರಾಮೀಣ ಭಾಗದ ದಲಿತ ಕಾಲೋನಿಗಳಲ್ಲಿ ಸಿಸಿರಸ್ತೆ ನಿರ್ಮಾಣ ಮಾಡಿದ್ದು ಬಿಜೆಪಿ ಸರ್ಕಾರ. ಅಂಬೇಡ್ಕರ್ ಭವನ, ಜಗಜೀವನರಾಂ ಭವನ ನಿರ್ಮಿಸಿದ್ದು ಕೂಡಾ ಬಿಜೆಪಿ ಸರ್ಕಾರವೇ ಆಗಿದೆ. ದಲಿತರ ವಿದ್ಯಾರ್ಥಿ ವೇತನವನ್ನು 200ರಿಂದ ಸಾವಿರ ರು.ಗೆ ಹೆಚ್ಚಳ ಮಾಡಲಾಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಆರಂಭಿಸಿ ಬಡವರು, ಶೋಷಿತ ಸಮುದಾಯದವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದವರು ಯಡಿಯೂರಪ್ಪ ಎಂದು ಬಣ್ಣಿಸಿದರು.ದಲಿತ ಸಮುದಾಯದ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಬಿಜೆಪಿ, ಚಿತ್ರದುರ್ಗಕ್ಕೆ ನಾನು ಅಭ್ಯರ್ಥಿಯಾಗಿ ಬರುವಲ್ಲಿ ಬಿಎಸ್ವೈ ಕಾರಣ. ರಾಜ್ಯ ಸರ್ಕಾರ ಮೀಸಲಾತಿ ನೀಡಬೇಕೆಂದು ಕೋರ್ಟ್ ಹೇಳಿದರೂ ಕಾಂಗ್ರೆಸ್ ಮೀನಾಮೇಷ ಎಣಿಸಿತು. ಒಳಮೀಸಲಾತಿ ವಿಷಯದಲ್ಲಿ ದಲಿತರನ್ನು ದಾರಿ ತಪ್ಪಿಸಲಾಗಿದೆ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಒಳಮೀಸಲಾತಿ ಯಾರ ಪಾಲನ್ನು ಕಸಿಯುವುದಲ್ಲ, ಯಾರೊಡನೆ ಸಂಘರ್ಷ ಮಾಡುವುದಲ್ಲ. ಅಸ್ಪೃಶ್ಯರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನವಾಗಿದೆ. ಕಡಿಮೆ ಜನರಿದ್ದ ಎಸ್ಸಿ, ಎಸ್ಟಿ ಪಟ್ಟಿಗೆ ಬೇರೆ ಜನಾಂಗದವರನ್ನು ಸೇರಿಸಿದಾಗ ವಿರೋಧ ಮಾಡಲಿಲ್ಲ. ಹಾಗಾಗಿ ಯಾರೂ ಒಳಮೀಸಲಾತಿ ವಿರೋಧಿಸಬೇಡಿ. ಇದು ಬಸವಣ್ಣನವರ ಕಾಲದ ಕನಸು. ಸಮ ಸಮಾಜದ ಕನಸು ಕಂಡವರು ಬಸವಣ್ಣ ಎಂದರು.ಆಂಧ್ರಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ನಡೆಸಿದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ನಿಮ್ಮ ಒಳಮೀಸಲಾತಿ ಹೋರಾಟಕ್ಕೆ ಕೈಜೋಡಿಸುತ್ತೇನೆ ಎಂದು ಹೇಳಿದ್ದರು. 20 ವರ್ಷ ಕೋರ್ಟ್ನಲ್ಲಿದ್ದ ಮೀಸಲಾತಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಒಳಮೀಸಲಾತಿ ಕುರಿತು ಮೋದಿ ಹೋರಾಡದಿದ್ದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ನಮಗೆ ತಿಳಿಯುತ್ತಿರಲಿಲ್ಲ. ಆದಗ್ಯೂ ಕಾಂಗ್ರೆಸ್ನಿಂದ ಒಳಮೀಸಲಾತಿ ವಂಚನೆಯಾಗಿದೆ. ಇದರಿಂದ ಯಾವುದೇ ಉತ್ತಮ ಹುದ್ದೆಗಳು ನಮ್ಮ ಸಮಾಜಕ್ಕೆ ದೊರೆಯುವುದಿಲ್ಲ. ಇದನ್ನು ಮಾದಿಗ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಒಳ ಮೀಸಲಾತಿಗೆ ಸದಾಶಿವ ಆಯೋಗ ರಚಿಸಿದ ಕಾಂಗ್ರೇಸ್ ಸರ್ಕಾರ ಅದಕ್ಕೆ ಕನಿಷ್ಟ ಕುರ್ಚಿ, ಟೇಬಲ್, ಅಗತ್ಯ ಸಿಬ್ಬಂದಿ ನೀಡಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಅಗತ್ಯ ಅನುದಾನ ನೀಡಿದರು. ಬಿಜೆಪಿ ಕಾಲದಲ್ಲಿ ಮಾಧುಸ್ವಾಮಿ ಒಳಮೀಸಲಾತಿ ವರದಿ ನೀಡಿದರು. ಮತ್ತೆ ಕಾಂಗ್ರೆಸ್ ನಾಗಮೋಹನದಾಸ್ ಆಯೋಗ ನೇಮಿಸಿತು. ಈ ಮೂರು ವರದಿಗಳನ್ನು ತಿರಸ್ಕರಿಸಿತು. ಈಗ ಅವೈಜ್ಞಾನಿಕ ರೀತಿಯಲ್ಲಿ ಒಳಮೀಸಲಾತಿ ನೀಡಿ ಮಾದಿಗರಿಗೆ ದ್ರೋಹ ಮಾಡಿದೆ ಎಂದು ಕಿಡಿಕಾರಿದರು.ದಲಿತ ಮುಖಂಡ ಹನುಮಂತಪ್ಪ ಬಳ್ಳಾರಿ, ಹಾವೇರಿ ಗವಿಸಿದ್ದಪ್ಪ, ಮಾದಿಗ ದಂಡೋರ ನರಸಪ್ಪ, ಮುನಿರಾಜ್, ಫರ್ನಾಂಡೀಸ್, ಆಲೂರು ಲಿಂಗರಾಜ್, ಉಚ್ಚನ್ಯಾಯಾಲಯದ ವಕೀಲ ವೆಂಕಟೇಶ್ ದೊಡ್ಡೇರಿ, ಕೊಪ್ಪಳದ ಮಹಾಲಕ್ಷ್ಮಿ, ಮೊಳಕಾಲ್ಮುರು ಮಂಡಲ ಅಧ್ಯಕ್ಷ ಮಲ್ಲೇಶ್ ಮಾತನಾಡಿದರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ವಿಭಾಗ ಸಹ ಪ್ರಭಾರಿ ಎ.ಮುರುಳಿ, ಮುರಾರ್ಜಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.