ತಳಮಟ್ಟದಿಂದ ಪಕ್ಷ ಸಂಘಟಿಸುವ ಕಾರ್ಯಕರ್ತರೇ ಕಾಂಗ್ರೆಸ್ ಶಕ್ತಿ

| Published : Apr 27 2025, 01:46 AM IST

ತಳಮಟ್ಟದಿಂದ ಪಕ್ಷ ಸಂಘಟಿಸುವ ಕಾರ್ಯಕರ್ತರೇ ಕಾಂಗ್ರೆಸ್ ಶಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲ ಬದಲಾದಂತೆ ನಾವೆಲ್ಲರೂ ಸಹ ಬದಲಾಗಬೇಕಿರುವುದು ಅನಿವಾರ್ಯ. ಸಂಘಟನೆಯಲ್ಲಿ ಸಹ ಬದಲಾವಣೆ ತರಬೇಕಿದೆ

ಹಾನಗಲ್ಲ: ತಳಮಟ್ಟದಿಂದ ಪಕ್ಷ ಸಂಘಟಿಸುವ ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದು, ಕಾರ್ಯಕರ್ತರು ವೈಷಮ್ಯ ಬಿತ್ತುವ ಬಿಜೆಪಿ ವಿರುದ್ಧ ಸಮಾಜದಲ್ಲಿ ಎಚ್ಚರಿಕೆ ಮೂಡಿಸಲು ಬದ್ಧರಾಗಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ನಡೆದ ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬೂತ್ ಮಟ್ಟದ ಅಧ್ಯಕ್ಷರು,ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಲ ಬದಲಾದಂತೆ ನಾವೆಲ್ಲರೂ ಸಹ ಬದಲಾಗಬೇಕಿರುವುದು ಅನಿವಾರ್ಯ. ಸಂಘಟನೆಯಲ್ಲಿ ಸಹ ಬದಲಾವಣೆ ತರಬೇಕಿದೆ. ಸಂವಿಧಾನದ ವಿರುದ್ಧ ಮಾತನಾಡುವ ಧರ್ಮ, ಜಾತಿಗಳ ಮಧ್ಯೆ ಸಂಘರ್ಷ ಮೂಡಿಸುವ ಬಿಜೆಪಿ ವಿರುದ್ಧ ಜನಜಾಗೃತಿ ಮೂಡಿಸಬೇಕಿದೆ. ಬಿಜೆಪಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಲು ಏನೇ ತಂತ್ರ ಹೂಡಿದರೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿತಂತ್ರ ರೂಪಿಸಬೇಕಿದೆ. ಇಲ್ಲದಿದ್ದರೆ ದುಷ್ಟಶಕ್ತಿಗಳಿಗೆ ಬಲ ತುಂಬಿದಂತಾಗಲಿದೆ ಎಂದರು.

ಕಾರ್ಯಕರ್ತರು ಸಣ್ಣಪುಟ್ಟ ವಿಷಯಗಳನ್ನು ಪ್ರತಿಷ್ಠೆ ಮಾಡಿಕೊಳ್ಳಬಾರದು. ಏನೇ ವ್ಯತ್ಯಾಸ ಇದ್ದರೂ ಪರಸ್ಪರ ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಬೇಕು. ಸಂಘಟನೆಗೆ ಕಾರ್ಯಕರ್ತರೇ ಶಾಶ್ವತ.ಹಾಗಾಗಿ ಸ್ಥಳೀಯ ನಾಯಕತ್ವ ಬೆಳೆಯಬೇಕು ಎಂದು ಹೇಳಿದ ಅವರು, ತಾಲೂಕಿನಲ್ಲಿ ಕಳೆದ 40-50 ವರ್ಷಗಳಿಂದ ಬಗೆಹರಿಯದ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮ ವಹಿಸಲಾಗಿದೆ. ಲಭಿಸಿರುವ ಅವಕಾಶ ಸದ್ಭಳಕೆ ಮಾಡಿಕೊಂಡು ಸಾರ್ವಜನಿಕರ ಹಿತ ಕಾಯಲಾಗುತ್ತಿದೆ. ಆರ್ಥಿಕ ಹಿನ್ನೆಡೆಯ ನಾಜೂಕಿನ ಸ್ಥಿತಿಯಲ್ಲಿ ನಾವಿದ್ದೇವೆ. ಪರಿಸ್ಥಿತಿ ಕ್ಲಿಷ್ಟಕರವಾಗಿದ್ದರೂ ಕೂಡ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕನ್ನಡಿಗರು, ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ತ್ಯಾಗ, ಬಲಿದಾನದ ಹಿನ್ನೆಲೆ ಇದೆ. ಅಭಿವೃದ್ಧಿ, ವಿಚಾರ, ತತ್ವಾಧಾರಿತವಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತದೆ. ಆದರೆ ಬಿಜೆಪಿ ಅಭಿವೃದ್ಧಿ, ವಿಚಾರ, ತತ್ವಗಳನ್ನೆಲ್ಲ ಬದಿಗಿಟ್ಟು ದ್ವೇಷ ಮೂಡಿಸುವ ಮೂಲಕ ರಾಜಕೀಯ ಸ್ವಾರ್ಥ ಸಾಧನೆಗೆ ಮುಂದಾಗಿದೆ. ಇಂತಹ ಬಿಜೆಪಿಗೆ ತಕ್ಕಪಾಠ ಕಲಿಸಬೇಕಿದೆ. ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಜನಪರ ನಿಲುವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಸಂಘಟನೆಗೆ ಬಲ ತುಂಬುವಂತೆ ಕರೆ ನೀಡಿದರು.

ಬೂತ್‌ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.