ಸಾರಾಂಶ
ರಾಜ್ಯದ ತೆರಿಗೆ ಹಣವನ್ನು ಲೂಟಿ ಮಾಡಿ ಮಹಿಳೆಗೆ ನೀಡುತ್ತಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ.
ಹೂವಿನಹಡಗಲಿ: ಪ್ರಧಾನಿ ನರೇಂದ್ರ ಮೋದಿ ಸಾವು ಬಯಸುವ ಹೇಳಿಕೆ ನೀಡಿ ಶಾಸಕ ರಾಜು ಕಾಗೆ ಮೂಲಕ ಕಾಂಗ್ರೆಸ್ ತನ್ನ ನೀಚತನ ಪ್ರದರ್ಶನ ಮಾಡಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ಸುವರ್ಣ ಆರುಂಡಿ ನಾಗರಾಜ್ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಧಾನಿ ಮೋದಿ ಸಾವು ಬಯಸಿದರೆ, ನಾವು ಅವರಿಗೆ ಆಯಸ್ಸು ಹೆಚ್ಚಿಸಲು ನಾವು ನಮ್ಮ ಆಯಸ್ಸು ನೀಡುತ್ತೇವೆ. ಈ ಕುರಿತು ತೇರು ಹನುಮಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಕಾಂಗ್ರೆಸ್ನ ನೀಚ ಹೇಳಿಕೆಯನ್ನು ನಾವು ಖಂಡಿಸುತ್ತೇವೆಂದು ಹೇಳಿದರು.
ರಾಜ್ಯದ ತೆರಿಗೆ ಹಣವನ್ನು ಲೂಟಿ ಮಾಡಿ ಮಹಿಳೆಗೆ ನೀಡುತ್ತಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ತುಳಿತಕ್ಕೆ ಒಳಗಾದ ಪಜಾ, ಪಪಂದ ಜನಾಂಗದ ಅಭಿವೃದ್ಧಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಆ ಸಮುದಾಯಗಳನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಮಾಡಿದೆ ಎಂದು ಟೀಕಿಸಿದರು.ದೇಶದ ಜನ ಸೇರಿದಂತೆ ಇಡೀ ವಿಶ್ವವೇ ಮೋದಿಯ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನೀಚ ಹೇಳಿಕೆ ನೀಡಿ ತನ್ನ ಹೇಡಿತನ ಪ್ರದರ್ಶನ ಮಾಡುತ್ತಿದೆ. ಜಾತಿ ಜನಾಂಗಗಳಲ್ಲಿ ವಿಷ ಬೀಜ ಬಿತ್ತಿ ಒಡೆದಾಳುವ ನೀತಿಯ ಮೂಲಕ ರಾಜಕಾರಣ ಮಾಡುತ್ತಿದೆ. ಇದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರ ತಕ್ಕ ಉತ್ತರ ನೀಡುತ್ತಾರೆಂದು ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೀರಾಬಾಯಿ ಮಾತನಾಡಿದರು. ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀಬಾಯಿ, ಟಿ.ಸೌಮ್ಯ, ಪಾರ್ವತಿ, ಶಾಂತಮ್ಮ, ಹಸೀನಾ ಬಾನು, ಮಂಜುಳ ಇದ್ದರು.