ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆ ಸ್ಪರ್ಧೆಗೆ ಪ್ರಯತ್ನ ನಡೆಸುತ್ತೇನೆ. ನಾನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಆಕಾಂಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ಗೆ ಪ್ರಯತ್ನ ಮಾಡುವುದರಲ್ಲಿ ತಪ್ಪು ಏನಿದೆ? ನಾನು ಕೊಡಗು ಮೈಸೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಟಿಕೆಟ್ ಕೊಡುತ್ತಾರೆ ಎಂದು ಪ್ರಯತ್ನ ಮಾಡುವುದಲ್ಲ. ಪ್ರಯತ್ನ ಮಾಡುತ್ತಾ ಮಾಡುತ್ತಾ ಸಿಕ್ಕಬಹುದು, ಸಿಕ್ಕದೇ ಇರಬಹುದು ಎಂದರು.ಆದರೆ ಹೈಕಮಾಂಡ್ನಲ್ಲಿ ಈಗ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ನಮ್ಮನ್ನು ರಾಜಕೀಯವಾಗಿ ಎಲ್ಲಾ ಪ್ರೋತ್ಸಾಹ ಮಾಡಿದವರು ಅವರು. ಅವರೊಂದಿಗೆ ಕೆಲಸ ಮಾಡಿದ್ದೇನೆ. ನಮ್ಮ ಕೆಲಸದ ಬಗ್ಗೆ ಅವರಿಗೆ ಗೊತ್ತಿದೆ. ಮತ್ತು ಕಾಂಗ್ರೆಸ್ನ ಸಮಸ್ತ ನಾಯಕರು ತನಗೆ ಚಿರಪರಿಚಿತರು ಎಂದರು. ನಾನು ಮಂತ್ರಿಯಾಗಿ ಇರುವಾಗ ನನ್ನ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಳ ಹತ್ತಿರದಿಂದ ಸಾಕಷ್ಟು ಜನರು ನೋಡಿದವರು ಇದ್ದಾರೆ. ಹಾಗಾಗಿ ನನ್ನ ಅನುಭವದ ಆಧಾರದ ಮೇಲೆ ನನಗೂ ಒಂದು ಅವಕಾಶ ಮಾಡಿಕೊಡಿ. ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಅನುಭವದ ಆಧಾರದ ಮೇಲೆ ಕೊಡಿ ಎಂದು ಕೇಳುತ್ತೇನೆ ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸುವುದರಲ್ಲಿ ನಮ್ಮ ಪಾತ್ರ ಹೆಚ್ಚು ಇದೆ. ಕಾಂಗ್ರೆಸ್ನವರು ಮತ್ತೆ ನಿಮ್ಮನ್ನು ಒಪ್ಪುತ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಮೂರು ಪಾರ್ಟಿಯಲ್ಲಿ ಇರುವವರು ಶುದ್ಧವಂತರೇ ಎಂದು ಮರು ಪ್ರಶ್ನೆ ಮಾಡಿದರು.ಸಿದ್ದರಾಮಯ್ಯ ಅವರು ಪರಿಶುದ್ಧ ಕಾಂಗ್ರೆಸ್ ನಾಯಕರೇ? ಯಡಿಯೂರಪ್ಪ ಅವರು ಶುದ್ಧ ಬಿಜೆಪಿನಾ? ಎಲ್ಲರೂ ಪಕ್ಷಾಂತರಿಗಳೇ. ನಾವು ಅಂದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಕೊಡಲು ನಾವು ಬಿಜೆಪಿಗೆ ಹೋದವರು. ಅದರಲ್ಲೂ ಅಧಿಕಾರಕ್ಕಾಗಿ ಬಿಜೆಪಿ ಜೆಡಿಎಸ್ಗೆ ಅಧಿಕಾರಕ್ಕಾಗಿ ಹೋಗಿಲ್ಲ. ನಾನು ಅಧಿಕಾರ ಕೊಡಲು ಹೋದವನು ಎಂದರು.
ಇದೀಗ ಲೋಕಸಭಾ ಚುನಾವಣೆ ಬರುತ್ತಿದೆ. ಜನ ಸ್ವೀಕಾರ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಜನ ಸ್ವೀಕರಿಸುವುದು 21 ಲಕ್ಷ ಮತದಾರರಿಗೆ ಬಿಟ್ಟಿದ್ದು. ಆದರೆ ಹಳ್ಳಿ ಹಕ್ಕಿ ಸ್ವಚ್ಛಂದವಾಗಿ ಹಾರುತ್ತೆ. ಹಳ್ಳಿ ಹಕ್ಕಿ ಸ್ವತಂತ್ರ್ಯವಾಗಿ ಇದೆ. ಟಿಕೆಟ್ ಸಿಗುವ ವಿಶ್ವಾಸದಿಂದಲೇ ಹೇಳುವಂತಹದು. ಸುಮ್ಮನೆ ಸುಮ್ಮನೆ ಕೇಳಲು ಹೋಗುತ್ತೇವಾ ಏನು ಆಗುತ್ತೆ ನೋಡುವ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಎಂ. ಗಣೇಶ್ ಮತ್ತಿತರರು ಹಾಜರಿದ್ದರು.