ಆರ್‌ಎಸ್ಎಸ್‌ನ್ನು ತಾಲಿಬಾನ್‌ಗೆ ಹೋಲಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಸಂಘವನ್ನು ಸಾವಿರ ತಲೆ ವಿಷಸರ್ಪ ಎಂದು ಕರೆದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ: ಆರ್‌ಎಸ್ಎಸ್‌ನ್ನು ತಾಲಿಬಾನ್‌ಗೆ ಹೋಲಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಸಂಘವನ್ನು ಸಾವಿರ ತಲೆ ವಿಷಸರ್ಪ ಎಂದು ಕರೆದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡುವ ಮೊದಲು ಹರಿಪ್ರಸಾದ್ ಚಾರಿತ್ರ್ಯ ನೋಡಬೇಕಾಗಿತ್ತು. ರೌಡಿ ಕೊತ್ವಾಲ್ ರಾಮಚಂದ್ರನ ಶಿಷ್ಯರಾಗಿ, ತಾಲಿಬಾನ್ ಸಂಸ್ಕೃತಿಯಲ್ಲಿ ಬೆಳೆದವರ ಬಾಯಲ್ಲಿ ಇಂತಹ ಮಾತುಗಳೇ ಬರಲು ಸಾಧ್ಯ. ಇಂತಹ ನಾಯಕರು ಎಷ್ಟೇ ಮಾತನಾಡಿದರೂ ಸಂಘಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ ಹಿಂದೂ ಸಮಾಜದಿಂದ ಇನ್ನಷ್ಟು ಪ್ರೋತ್ಸಾಹ ಸಿಗುತ್ತದೆ. ನಿಮ್ಮ ಹಳೆಯ ಚಾಳಿ ಬಿಟ್ಟು, ಗಾಂಭೀರ್ಯದಿಂದ ಗೌರವಯುತವಾಗಿ ನಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಸಚಿವ ಯತೀಂದ್ರ ಹೇಳಿಕೆ ಬಗ್ಗೆ ಮಾತನಾಡಿ ಸಣ್ಣ ವಯಸ್ಸಿನಲ್ಲಿ ಅಪ್ಪನ ಹೆಸರೇಳಿಕೊಂಡು ಅಕಸ್ಮಾತ್ ಮಂತ್ರಿಯಾಗಿದ್ದೀರಾ. ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಅದರದ್ದೇ ಆದ ಗೌರವವಿದೆ, ಅದನ್ನು ಉಳಿಸಿಕೊಂಡು ಬಾಯಿ ಬಿಗಿ ಹಿಡಿದು ಮಾತನಾಡಿ. ಓಟ್ ಬ್ಯಾಂಕ್ ಮತ್ತು ರಾಜಕೀಯ ಭವಿಷ್ಯಕ್ಕಾಗಿ ಆರ್‌ಎಸ್‌ಎಸ್ ಅನ್ನು ವಿಷಸರ್ಪದಂತೆ ಬಿಂಬಿಸುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಹಿಂದೂ ಧರ್ಮ ಮತ್ತಷ್ಟು ಒಗ್ಗಟ್ಟಾಗುತ್ತದೆ. ಮೊದಲು ನಿಮಗೆ ನೀಡಿರುವ ಸಚಿವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ, ಜನಮೆಚ್ಚುವ ಕೆಲಸ ಮಾಡಿ ಎಂದಿದ್ದಾರೆ.