ಕರ್ತವ್ಯಲೋಪದಡಿ ಪೇದೆ ಅಮಾನತು

| Published : Jun 21 2024, 01:04 AM IST

ಸಾರಾಂಶ

ಮಹಿಳೆ ಮತ್ತು ಅಪ್ರಾಪ್ತೆಯ ಅಪಹರಣ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದಡಿ ಇಲ್ಲಿನ ಪೊಲೀಸ್ ಠಾಣೆಯ ಪೇದೆಯೊಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಮಹಿಳೆ ಮತ್ತು ಅಪ್ರಾಪ್ತೆಯ ಅಪಹರಣ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದಡಿ ಇಲ್ಲಿನ ಪೊಲೀಸ್ ಠಾಣೆಯ ಪೇದೆಯೊಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಆದೇಶ ಹೊರಡಿಸಿದ್ದಾರೆ.

ಇಲ್ಲಿನ ಠಾಣೆಯ ಪೇದೆ ನಾಗರಾಜ(ಸಿಪಿಸಿ ೫೮೬) ಅಮಾನತು ಆದವರು.ಕಳೆದ ಮೇ ೨೧ರಂದು ತಾಲೂಕಿನ ಗುಡೂರು ಗ್ರಾಮದ ಬಾಲಕಿಯೊಬ್ಬಳ ಅಪಹರಣ ಪ್ರಕರಣದ ಆರೋಪಿಯನ್ನು ಮನೆಗೆ ಕಳುಹಿಸಿ, ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸದೇ ಬಾಲ ಮಂದಿರಕ್ಕೆ ಕಳುಹಿಸಿ ಪೇದೆ ನಾಗರಾಜ ಕರ್ತವ್ಯಲೋಪ ಎಸಗಿದ್ದಾಗಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರು ಮುಖ್ಯವಾಗಿ ಮಹಿಳೆ ಮತ್ತು ಬಾಲಕಿ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ತನಿಖೆ ಮಾಡಬೇಕು. ಆದರೆ, ತನಿಖಾ ಸಹಾಯಕನಾಗಿದ್ದ ಪೇದೆ ನಾಗರಾಜ ಪ್ರಕರಣವನ್ನು ಅತ್ಯಂತ ಲಘುವಾಗಿ ಪರಿಗಣಿಸಿದ್ದು ಮೆಲ್ನೋಟಕ್ಕೆ ಕಂಡು ಬಂದಿದೆ. ಇದರಿಂದ ನಿಮ್ಮಿಂದ ಠಾಣೆಯ ಇತರೇ ಸಿಬ್ಬಂದಿ ಇಂಥ ನಿರ್ಲಕ್ಷ ತೋರಬಹುದು ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿ, ಮುಂದಿನ ಆದೇಶದವರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಎಸ್ಪಿ ಸೂಚಿಸಿದ್ದಾರೆ. ಜೊತೆಗೆ ಅಮಾನತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಟ್ಟು ಎಲ್ಲಿಗೂ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

ಗುಡೂರು ಗ್ರಾಮದ ಅಪ್ರಾಪ್ತೆ ಮತ್ತು ಮಸ್ಕಿ ತಾಲೂಕಿನ ಹಳ್ಳಿಯ ಯುವಕನಿಗೆ ಸೇರಿದ ಪ್ರೇಮ ಪ್ರಕರಣಕ್ಕೆ ಸಂಬಂಧ ಮೂರು ದಿನಗಳ ಕಾಲ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸದೆ ಕಾಲಹರಣ ಮಾಡಿದ್ದು, ಠಾಣೆ ಮತ್ತು ಠಾಣೆ ಹೊರಗಡೆ ಖಾಸಗಿ ಪಂಚಾಯಿತಿಯನ್ನು ನಡೆಸಿದ್ದರು. ಪ್ರಕರಣಕ್ಕೆ ಸಂಬಂಧ ಇಲ್ಲಿನ ಕಾಂಗ್ರೆಸ್ ಮುಖಂಡರೊಬ್ಬರು ಮಧ್ಯಪ್ರವೇಶ ಮಾಡಿ ಯುವಕನನ್ನು ಠಾಣೆಯಲ್ಲಿ ಮೂರು ದಿನ ಕೂಡಿ ಹಾಕುವಂತೆ ಒತ್ತಡ ಹೇರಿದ್ದರು. ಈ ಎಲ್ಲ ಘಟನೆಯನ್ನ ಸ್ಥಳೀಯರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದರು ಎನ್ನಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಕೂಡಲೇ ಪೇದೆ ನಾಗರಾಜು ಇವರನ್ನು ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.