ಸಾರಾಂಶ
ಹರಪನಹಳ್ಳಿ: ಸಂವಿಧಾನವನ್ನು ಮೂಲೆಗುಂಪು ಮಾಡುವ ಕುತಂತ್ರ ನಡೆಯುತ್ತಿದ್ದು, ಸಂವಿದಾನ ಉಳಿಸುವ ಕೆಲಸ ನಾವೆಲ್ಲ ಮಾಡಬೇಕಿದೆ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹೇಳಿದರು.ಪಟ್ಟಣದ ಸ.ಪ.ಪೂ. ಕಾಲೇಜಿನಲ್ಲಿ ಜನದನಿ ಸಾಹಿತ್ಯ ವೇದಿಕೆ ಶುಕ್ರವಾರ ಆಯೋಜಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬದುಕನ್ನು ಕಟ್ಟಿಕೊಳ್ಳಲು ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟರು, ಸಂವಿಧಾನ ಜಾರಿಯಾದ ನಂತರ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದರು.ಸಂವಿಧಾನ ಇಲ್ಲದಿದ್ದರೆ ನೆಮ್ಮದಿಯಿಂದ ಬದುಕಲು ಆಗುತ್ತಿರಲಿಲ್ಲ. ಅಂಬೇಡ್ಕರ್ ಅವರು ರೂಪಿಸಿಕೊಟ್ಟ ಸಂವಿಧಾನವನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಧಾರವಾಡದ ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಮಾತನಾಡಿ, ಶಿಕ್ಷಣ ಒಂದು ವರ್ಗಕ್ಕೆ ಸೀಮಿತವಾದ ಕಾಲದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಬಲವಾಗಿ ಪ್ರತಿಪಾದಿಸಿದವರು ಡಾ. ಅಂಬೇಡ್ಕರ್ ಅವರು ಎಂದು ತಿಳಿಸಿದರು.ಅಂಬೇಡ್ಕರ್ ಅವರ ಸಂವಿಧಾನದ ಮುಂದೆ ಯಾರೂ ಕನಿಷ್ಠರಲ್ಲ, ಯಾರೂ ಶ್ರೇಷ್ಠರಲ್ಲ. ದೇಶಕ್ಕೆ ಬೇಕಾಗಿರುವುದು ಶಾಲೆಗಳೇ ಹೊರತು ದೇವಾಲಯಗಳಲ್ಲ ಎಂದರು.
ಅಂಬೇಡ್ಕರ್ ಎಂದರೆ ಕೇವಲ ಎಸ್ಸಿ, ಎಸ್ಟಿ ಮೀಸಲಾತಿಗೆ ಅಷ್ಟೆ ಸಂಬಂದ ಪಟ್ಟವರಲ್ಲ. ಹೆಣ್ಣು ಮಕ್ಕಳಿಗೆ ಗೌರವಯುತ ಬದುಕು ಕಟ್ಟಿ ಕೊಟ್ಟವರು ಅಂಬೇಡ್ಕರ್ ಎಂದು ತಿಳಿಸಿದರು.ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಹಾಗೂ ಪರಂಪರೆ ಸರ್ವರಿಗೂ ಆದರ್ಶ ಪ್ರಿಯವಾದದು, ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಅವರೂ ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು. ಶಿಕ್ಷಕ ಸಿ.ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯ ಸಿ.ಬಿ. ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಎಇಇ ಎಲ್. ಕುಬೇಂದ್ರನಾಯ್ಕ, ಸಾಹಿತಿ ಸುಭದ್ರಮ್ಮ ಮಾಡ್ಲಗೇರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ, ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ರಾಜಶೇಖರ ಬಣಕಾರ, ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಚಿಕ್ಕೇರಿ ಬಸಪ್ಪ, ಉಪನ್ಯಾಸಕ ಹಾಲಪ್ಪ, ಶೇಖರನಾಯ್ಕ, ಸಾಹಿತಿ ಡಿ. ರಾಮನಮಲಿ, ಎಚ್.ಎಂ. ಸಂತೋಷ, ಮಾಲತೇಶ ಮರಿಗೌಡ, ಬಿ.ಎಚ್. ಚಂದ್ರಪ್ಪ, ಅರ್ಜುನ ಪರಸಪ್ಪ, ಎಲ್. ಮಂಜನಾಯ್ಕ, ಎನ್. ಶಂಕರ, ಗುಡಿಹಳ್ಳಿ ಹಾಲೇಶ, ಎನ್.ಜಿ. ಬಸವರಾಜ ಇತರರು ಉಪಸ್ಥಿತರಿದ್ದರು.