ಸಂವಿಧಾನದಿಂದ ಎಲ್ಲರಿಗೂ ಸಮಪಾಲು, ಸಮಬಾಳು: ಶಾಸಕ ಡಿ.ಜಿ.ಶಾಂತನಗೌಡ

| Published : Feb 07 2024, 01:51 AM IST

ಸಾರಾಂಶ

ನಾವು ಮಹನೀಯರ ಮಾತುಗಳ ಶ್ರದ್ಧೆಯಿಂದ ಆಲಿಸುತ್ತೇವೆ ಆದರೆ ಅವರ ಆದರ್ಶ ಅಳವಡಿಸಿಕೊಳ್ಳದಿರುವುದು ದುರಾದೃಷ್ಟ. ನಾವು ಅವತಾರ ಪುರುಷರಿಗೆ ಗೌರವ ಸೂಚಿಸಬೇಕಾದರೆ ಮೊದಲು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು. ಆಗ ಅವರಿಗೆ ಗೌರವಿಸಿದಂತೆ. ಈ ಹಿಂದೆ ವೃತ್ತಿಯಿಂದ ಜಾತಿ ಇತ್ತು, ಜಾತಿಯಿಂದ ವೃತ್ತಿ ಇರಲಿಲ್ಲ. ಈಗ ಸಂವಿಧಾನ ಕಾರಣ ಎಲ್ಲರಿಗೂ ಸಮಾನ ಹಾಗೂ ಜಾತ್ಯಾತೀತ ಅವಕಾಶಗಳಿವೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಾಲ್ಮೀಕಿ ರಾಮಾಯಣ, ವೇದವ್ಯಾಸರ ಮಹಾಭಾರತ ಹಾಗೂ ಡಾ.ಅಂಬೇಡ್ಕರ್ ರಚಿತ ಸಂವಿಧಾನ ಈ ಮೂರು ಪವಿತ್ರ ಗ್ರಂಥಗಳಿಂದ ವಿಶ್ವವೇ ಭಾರತವನ್ನು ಗೌರವದಿಂದ ಕಾಣುತ್ತಿದ್ದು, ಇಂತಹ ರಾಷ್ಟ್ರದಲ್ಲಿರುವುದೇ ಹೆಮ್ಮೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.

ಕ್ಷೇತ್ರದ ಶಾಸಕರ ಸ್ವಗ್ರಾಮ ಬೆನಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂವಿಧಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ ಸಂವಿಧಾನ ರಚನೆಯಾಗದಿದ್ದರೆ ದೇಶ ಎತ್ತ ಸಾಗುತ್ತಿತ್ತು ಎಂದು ಹೇಳಲು ಅಸಾಧ್ಯ, ಡಾ.ಅಂಬೇಡ್ಕರ್ ಸಂವಿಧಾನ ರಚನೆಯಿಂದ ಕೆಳಸ್ತರದಿಂದ ಹಿಡಿದು ಮೇಲ್ವರ್ಗದ ಎಲ್ಲರಿಗೂ ಸಂವಿಧಾನ ಆಶ್ರಯವಾಗಿ ಎಲ್ಲರಿಗೂ ಸಮಪಾಲು ಸಮಬಾಳು ಸಿಗುವಂತಾಗಿದೆ ಎಂದರು.

ನಾವು ಮಹನೀಯರ ಮಾತುಗಳ ಶ್ರದ್ಧೆಯಿಂದ ಆಲಿಸುತ್ತೇವೆ ಆದರೆ ಅವರ ಆದರ್ಶ ಅಳವಡಿಸಿಕೊಳ್ಳದಿರುವುದು ದುರಾದೃಷ್ಟ. ನಾವು ಅವತಾರ ಪುರುಷರಿಗೆ ಗೌರವ ಸೂಚಿಸಬೇಕಾದರೆ ಮೊದಲು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು. ಆಗ ಅವರಿಗೆ ಗೌರವಿಸಿದಂತೆ. ಈ ಹಿಂದೆ ವೃತ್ತಿಯಿಂದ ಜಾತಿ ಇತ್ತು, ಜಾತಿಯಿಂದ ವೃತ್ತಿ ಇರಲಿಲ್ಲ. ಈಗ ಸಂವಿಧಾನ ಕಾರಣ ಎಲ್ಲರಿಗೂ ಸಮಾನ ಹಾಗೂ ಜಾತ್ಯಾತೀತ ಅವಕಾಶಗಳಿವೆ ಎಂದರು.

ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಇವರು ವಿಶ್ವ ಕಂಡ ಮಹಾನ್ ಶ್ರೇಷ್ಠರು, 6 ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಬುದ್ಧ ಅಂದೇ ಜಾತಿ ತೊಲಗಿಸುವ ಬಗ್ಗೆ ಜಾಗೃತಿ ಮೂಡಿಸಿದರು.12ನೇ ಶತಮಾನದಲ್ಲಿ ಬಸವಣ್ಣ ತಮ್ಮ ವಚನಗಳ ಮೂಲಕವೇ ಜಾತಿ ವಿರುದ್ಧ ಹೋರಾಡಿ ಧಾರ್ಮಿಕತೆಯ ಮೌಢ್ಯಗಳ ಅಲ್ಲಗೆಳೆದಿದ್ದು ಅವರ ಆದರ್ಶಗಳು ಇಂದಿಗೂ ನಮಗೆಲ್ಲ ಮೇಲ್ಫಂಕ್ತಿ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ತಾವು ತಮ್ಮ ಜೀವನದಲ್ಲಿ ಅನುಭವಿಸಿದ ನೋವು ಮತ್ತೊಬ್ಬರಿಗೆ ಬರಬಾರದೆಂದು ಎಲ್ಲಾ ವರ್ಗದವರಿಗೂ ಸಂವಿಧಾನದ ಮೂಲಕ ಮೂಲಭೂತ ಹಕ್ಕುಗಳ ನೀಡಿದ ಡಾ.ಅಂಬೇಡ್ಕರ್ ರಾಷ್ಟ್ರಪುರುಷರಲ್ಲಿ ಪ್ರಥಮ ಹೆಜ್ಜೆಯಾಗಿ ನಿಲ್ಲುತ್ತಾರೆ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ನಾಗರಾಜ ಮಾತನಾಡಿದರು. ಬೆನಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ಸಂವಿಧಾನ ಪೀಠಿಕೆಯ ನೃತ್ಯದ ಮೂಲಕ ಓದಿದ್ದು ವಿಶೇಷವಾಗಿತ್ತು. ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಇ.ಒ. ರಾಘವೇಂದ್ರ, ಗ್ರಾ.ಪಂ. ಅಧ್ಯಕ್ಷೆ ವಸಂತ, ಉಪಾಧ್ಯಕ್ಷ ಶಿವಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳಾದ ಸಮಾಜ ಕಲ್ಯಾಣಾಧಿಕಾರಿ ಉಮಾ, ಬಿಇಒ ನಂಜರಾಜ್, ಬೆಸ್ಕಾಂನ ಎಇಇ ಜಯಪ್ಪ, ಅಕ್ಷರ ದಾಸೋಹದ ನಿರ್ದೇಶಕ ರುದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಂದ್ರ ಗೌಡ, ಬೆನಕಹನಳ್ಳಿ ಗ್ರಾಮದ ಮುಖಂಡರಾದ ಮಹೇಂದ್ರ ಗೌಡ ,ಮಲ್ಲೇಶಪ್ಪ,ಗಣೇಶ್,ರಘು ಹಾಗೂ ಇತರರಿದ್ದರು. ಏನು ಅಭಿವೃದ್ಧಿ ಬೇಕೋ ಮಾಡಿಸಿಕೊಳ್ಳಿ: ಶಾಸಕ

ನನ್ನ ಸ್ವಂತ ಊರು ಬೆನಕನಹಳ್ಳಿ ಗ್ರಾಮದಲ್ಲಿ ವರ್ಷದೊಳಗೆ ದುರ್ಗಮ್ಮ ದೇವಸ್ಥಾನ ಪೂರ್ಣವಾಗಬೇಕು, ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರಿಗೆ ಸ್ಮಶಾನಕ್ಕಾಗಿ ಒಂದು ಎಕರೆ ತನ್ನ ಸ್ವಂತ ಜಮೀನು ನೀಡುತ್ತಿದ್ದೇನೆ. ತಕ್ಷಣ ನೀವು ಒಂದು ಸಮಿತಿ ರಚಿಸಿ, ಸಮಿತಿ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಿ ಹಾಗೂ ಗ್ರಾಮದಲ್ಲಿ ಏನೇನು ಅಭಿವೃದ್ಧಿ ಬೇಕೋ ಅದು ಮಾಡಿಸಿ ಕ್ಷೇತ್ರದ ಜನರು ಮೂರು ಬಾರಿ ಶಾಸಕನಾಗಿ ಮಾಡಿದ್ದಕ್ಕೆ ಋಣ ತೀರಿಸುವುದು ನನ್ನ ಕರ್ತವ್ಯ ಎಂದು ಶಾಸಕ ಶಾಂತನಗೌಡ ಹೇಳಿದರು.