ಸಂವಿಧಾನ ದೇಶದ ಪವಿತ್ರ ಗ್ರಂಥ

| Published : Jan 01 2025, 12:00 AM IST

ಸಾರಾಂಶ

ಶಿವಮೊಗ್ಗ: ಸಂವಿಧಾನ ನಮ್ಮ ಜೀವನ ಹಾಗೂ ಬದುಕಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಬಹಳ ಎತ್ತರಕ್ಕೆ ಬೆಳೆಸುವ ಶಕ್ತಿ ಭಾರತದ ಸಂವಿಧಾನಕ್ಕಿದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಸಂವಿಧಾನವೇ ಪ್ರೇರಕ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಹೇಳಿದರು.

ಶಿವಮೊಗ್ಗ: ಸಂವಿಧಾನ ನಮ್ಮ ಜೀವನ ಹಾಗೂ ಬದುಕಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಬಹಳ ಎತ್ತರಕ್ಕೆ ಬೆಳೆಸುವ ಶಕ್ತಿ ಭಾರತದ ಸಂವಿಧಾನಕ್ಕಿದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಸಂವಿಧಾನವೇ ಪ್ರೇರಕ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂಜೆ ಮಿಲಿಂದ ಹಾಗೂ ಪ್ರೆಸ್‌ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತ ಸಂವಿಧಾನ 75 ವರ್ಷ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನ ಎಂಬುದು ನಮ್ಮಜೀವನ, ಹಾಗೂ ಬದುಕಾಗಿದೆ. 140 ಕೋಟಿ ಜನಸಂಖ್ಯೆಗೆ ಒಂದೇ ಸಂವಿಧಾನವಿದೆ. ಅದೇ ನಮ್ಮ ಸಂವಿಧಾನದ ವಿಶೇಷ ಎಂದರು.ಸಂವಿಧಾನ ಎಂಬುದು ಅತ್ಯಂತ ಪವಿತ್ರವಾದ ಪುಸ್ತಕ, ಗ್ರಂಥವಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಬಹಳ ಎತ್ತರಕ್ಕೆ ಬೆಳೆಸುವ ಶಕ್ತಿ ಭಾರತದ ಸಂವಿಧಾನಕ್ಕಿದೆ. ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡಬಹುದು. ಆದರೆ ಸಂವಿಧಾನ ಇಡೀ ದೇಶವನ್ನು ಕಾಪಾಡುತ್ತದೆ ಎಂದರು.

ಇಂದು ವಾಸ್ತವದಲ್ಲಿ ನೀರಿಲ್ಲದ ಬಾವಿ ತರಹ ನಮ್ಮ ಜೀವನ ಆಗಿದ್ದು, ಅದನ್ನು ಸಂವಿಧಾನದಿಂದ ಮಾತ್ರ ಸರಿಪಡಿಬೇಕಾಗಿದೆ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ನಾಯಕರು, ವ್ಯಕ್ತಿತ್ವಗಳ ಪಟ್ಟಿ ಮಾಡಿದರೆ ಅದರಲ್ಲಿ ಅಂಬೇಡ್ಕರ್ ಅವರು ಅಗ್ರಸ್ಥಾನಿಯಾಗಿದ್ದಾರೆ ಎಂದು ಬಣ್ಣಿಸಿದರು.ಪ್ರಜಾಪ್ರಭುತ್ವದಲ್ಲಿ ಕಾನೂನಾತ್ಮಕ ನಡೆದುಕೊಳ್ಳಬೇಕು. ಆದರೆ ಆ ರೀತಿ ನಡೆದುಕೊಳ್ಳುತ್ತಿಲ್ಲ. ಅದನ್ನು ಪ್ರಶ್ನೆ ಕೂಡ ಮಾಡುತ್ತಿಲ್ಲ. ಹಾಗಾಗಿ ಪ್ರಜಾಪ್ರಭುತ್ವಕ್ಕೆ ನಾವು ಅರ್ಹರೇ ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ನಮ್ಮನ್ನಾಳುವವರ ಬಳಿ ರಸ್ತೆ, ಸ್ಕೂಲ್, ಆಸ್ಪತ್ರೆ ಕೇಳುವುದಿಲ್ಲ. ಕೇಳುವ ಮನಸ್ಥಿತಿಯೂ ಇಲ್ಲ. ಮತಗಳ ಮೌಲ್ಯವನ್ನು ಅರಿತುಕೊಳ್ಳುತ್ತಿಲ್ಲ. ಇದರಿಂದಾಗಿಯೇ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವ ಎಂಬುದು ರಾಜ ಪ್ರಭುತ್ವವಲ್ಲ. ಪ್ರಜಾ ಕಲ್ಯಾಣಕ್ಕಾಗಿ ಮಾಡುವ ಅಂಶವಾಗಿದೆ. ಆದರೆ ಪ್ರಜಾಪ್ರಭುತ್ವವನ್ನು ಕಾಣುತ್ತಿದ್ದೇವೇಯಾ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಪ್ರಜಾ ಕಲ್ಯಾಣವೇ ಸಂವಿಧಾನದ ಮೊದಲ ಅಂಶವಾಗಿದ್ದು, ಸಮಾನತೆಯನ್ನು ಬೇಗ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.ಸಮಾನತೆಯ ಬಗ್ಗೆ ಹಲವರು ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತಾರೆ. ಆದರೆ ಪ್ರತ್ಯೇಕ ಉಪಚಾರ ಸಮಾನತೆಯಲ್ಲ ಎಂಬುದನ್ನು ಅರಿತುಕೊಳ್ಳದ ಹೊರತು ಸಂವಿಧಾನದ ಆಶಯ ಈಡೇರುವುದಿಲ್ಲ ಎಂದ ಅವರು, ಪ್ರತಿಯೊಬ್ಬರು ಸಹೋದರತ್ವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕಿದೆ. ಆಲೋಚನೆಯಂತೆ ನಮ್ಮಜೀವನ ರೂಪಿಸಿಕೊಳ್ಳಬಹುದು. ಉತ್ಕೃಷ್ಟವಾದ ಚಿಂತನೆ ರೂಪಿಸಿಕೊಳ್ಳಬೇಕು. ಆಗ ಸಮಾಜದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.ಮಿಲಿಂದ ಸಂಸ್ಥೆಯ ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಎನ್ನುವುದು ಅನ್ನದಷ್ಟೆ ಮುಖ್ಯ ಎಂದು ಬುದ್ಧ ಹೇಳಿದ್ದಾನೆ. ಹಾಗಾಗಿ ಬದುಕಿಗೆ ಶಿಕ್ಷಣ ಅತ್ಯಗತ್ಯವಾಗಿದೆ. ಅಂಬೇಡ್ಕರ್ ಸಂವಿಧಾನಕ್ಕಿಂತ ಮುಂಚಿತವಾಗಿ ಮನುಪ್ರಣಿತ ಸಂವಿಧಾನ ಜಾರಿಯಲ್ಲಿತ್ತು ಎಂದ ಅವರು, ದೇಶದಲ್ಲಿ ಹೊಸ ಹೊಸ ಹುನ್ನಾರಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.ಕಾರ್ಯಕ್ರಮದಲ್ಲಿ ಶಿವಮೊಗ್ಗ ಪ್ರೆಸ್‍ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ವಕೀಲ ಕೆ.ಪಿ.ಶ್ರೀಪಾಲ್, ಮಿಲಿಂದ ಸಂಸ್ಥೆಯ ಗೌರವಾಧ್ಯಕ್ಷ ಅಣ್ಣಪ್ಪ ಆಯನೂರು ಕೋಟೆ , ನಿವೃತ್ತ ಅಬಕಾರಿ ಜಿಲ್ಲಾಧಿಕಾರಿ ಬಿ.ಡಿ.ಸಾವಕ್ಕನವರ್, ಮಿಲ್ಲಿಂದ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ರಾಜು ಇತರರು ಉಪಸ್ಥಿತರಿದ್ದರು.