ಸಾರಾಂಶ
ಕಾಳಗಿ ತಾಲೂಕು ಆಡಳಿತದಿಂದ 75ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಶಾಸಕ ಡಾ.ಅವಿನಾಶ್ ಜಾಧವ ಅಭಿಮತ
ಕನ್ನಡಪ್ರಭ ವಾರ್ತೆ ಕಾಳಗಿ
ಸದ್ಧರ್ಮದಲ್ಲಿ ನಿಷ್ಠೆ ಪರಧರ್ಮದಲ್ಲಿ ಸಹಿಷ್ಣುತೆ ಎನ್ನುವಹಾಗೆ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರರು ಬರೆದಿರುವ ಭಾರತ ಸಂವಿಧಾನ ವಿವಿಧಯಲ್ಲಿ ಏಕತೆಯ ಪ್ರತೀಕವಾಗಿದೆ ಎಂದು ಶಾಸಕ ಡಾ.ಅವಿನಾಶ ಹೇಳಿದರು.ಕಾಳಗಿ ನೂತನ ತಾಲೂಕು ಕೇಂದ್ರ ಘೋಷಣೆ ನಂತರ ಪ್ರಪ್ರಥಮ ಬಾರಿಗೆ 75ನೇ ಗಣರಾಜ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭ ನೆರವೇರಿಸುವಂತೆ ಆದೇಶಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
75ನೇ ಗಣರಾಜ್ಯದ ಅಮೃತ ಮಹೋತ್ಸವದ ಸುಭಗಳಿಗೆಯಲ್ಲಿ ಭಾರತ ಜ್ಞಾನ -ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ ವ್ಯಾಪಾರ ಸ್ವದೇಶಿ ಉತ್ಪಾದನೆ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕುತ್ತಿರುವುದು ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.ಕಾಳಗಿ ತಾಲೂಕು ಗ್ರೇಡ್ -1ತಹಸೀಲ್ದಾರ ಘಮವತಿ ರಾಠೋಡ ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ.ಅವಿನಾಶ ಜಾಧವ ಪೋಲಿಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದರು.
ಸಮಾರಂಭವನ್ನು ಉದ್ದೇಶಿಸಿ ತಹಸೀಲ್ದಾರ್ ಘಮವತಿ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲೀಲಾ ಅಷ್ಟಗಿ ಪ್ರಾರ್ಥಿಸಿದರು. ಕಾಳಗಿ ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್ ಪ್ರಸನ್ನ ಸ್ವಾಗತಿಸಿದರು. ಶಿಕ್ಷಕ ಶಿವುಕುಮಾರ ಶಾಸ್ತ್ರಿ ನಿರೂಪಿಸಿದರು. ಪಿಡಬ್ಲ್ಯೂಡಿ ಎಇಇ ಸಿದ್ರಾಮ ದಂಡಗುಲಕರ ವಂದಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾಳಗಿ ತಾಲೂಕು ಅಧ್ಯಕ್ಷ ಶರಣಗೌಡ ಪೋಲಿಸ್ ಪಾಟೀಲ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಪಿ.ಆರ್. ಇ ಎಇಇ ಸಾಬಣ್ಣ, ಪಿಎಸ್ಐ ವಿಶ್ವನಾಥ ಬಾಕಳೆ, ಉಪಖಜಾನೆ ಅಧಿಕಾರಿ ಸಂಜುಕುಮಾರ, ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ, ಜೆಸ್ಕಾಂ ಎಇಇ ಪ್ರಭು ಮಡ್ಡಿತೋಟ, ಪಶುವೈದ್ಯಾಧಿಕಾರಿ ಗೌತಮ್ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕೊಡದೂರ ಸರ್ಕಾರಿ ಶಾಲಾ ಮಕ್ಕಳಿಗೆ ಶಾಸಕರು ಪ್ರಶಸ್ತಿ ಪ್ರಧಾನ ಮಾಡಿದರು. ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.ಜೈಕನ್ನಡಿಗರ ರಕ್ಷಣಾ ವೇದಿಕೆ ಕಡೆಯಿಂದ ಕೊಡಮಾಡಲಾಗಿರುವ ಸಂವಿಧಾನ ಪೀಠಿಕೆ ಫಲಕಗಳನ್ನು ವಿವಿಧ ಇಲಾಖಾ ಪ್ರತಿನಿಧಿಗಳಿಗೆ ವಿತರಿಸಲಾಯಿತು.
ಬಿಜೆಪಿ-ಕಾಂಗ್ರೇಸ್ ಕಾರ್ಯಾಲಯಗಳು ಹಾಗೂ ಸರಕಾರಿ-ಅರೆಸರಕಾರಿ, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧೆಡೆ 75ನೇ ಗಣರಾಜ್ಯೋತ್ಸವ ಸಮಾರಂಭವನ್ನು ಸಡಗರ- ಸಂಭ್ರಮದಿಂದ ಆಚರಿಸಲಾಯಿತು.